
ಹಸಿ, ಒಣ ಕಸ ವಿಂಗಡಿಸದಿದ್ದರೆ ದಂಡ ತುಳಸಿ ಮದ್ದಿನೇನಿ ಎಚ್ಚರಿಕೆ
ಮಂಗಳೂರು: ಮಂಗಳೂರಿನಲ್ಲಿ ಮನೆ ಮನೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ಹಸಿ, ಒಣ ಹಾಗೂ ಸ್ಯಾನಿಟರಿ ಎಂಬಂತೆ ಪ್ರತ್ಯೇಕವಾಗಿಯೇ ನೀಡಬೇಕು. ಇದರ ಉಲ್ಲಂಘನೆ ಕಂಡುಬಂದರೆ ಮನೆ ಮುಂಭಾಗ ಅಳವಡಿಸಿದ ಕ್ಯೂ ಆರ್ ಕೋಡ್ ಮೂಲಕ ಫೋಟೋ ಸ್ಕ್ಯಾನ್ ಮಾಡಿ ಪಾಲಿಕೆ ಗಮನಕ್ಕೆ ತರಬೇಕು. ಇದರ ಆಧಾರದಲ್ಲಿ ವಿಂಗಡಿಸದೆ ಕೊಡುವವರ ಮೇಲೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪೌರ ಕಾರ್ಮಿಕರೊಂದಿಗೆ ನಡೆಸಿದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಸ ಸಂಗ್ರಹಣೆಯಲ್ಲಿ ಪೌರ ಕಾರ್ಮಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆಗಳು ನಡೆದವು. ಇದನ್ನು ತಡೆಯಲು ತೆಗೆದುಕೊಳ್ಳಬೇಕಾದ ಕ್ರಮಗಳ ವಿವರಿಸಿದ ಅವರು, ಬಹುತೇಕ ಕಡೆ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಇಲ್ಲದಿರುವಲ್ಲಿ ಅಳವಡಿಸಲಾಗುವುದು. ಈ ಪ್ರಕ್ರಿಯೆ ನಡೆಸುವ ಕಾರ್ಯಕ್ಕೆ ತಿಂಗಳಿಗೆ ಪೌರ ಕಾರ್ಮಿಕರಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದು ಎಂದು ಹೇಳಿದರು.
ದಿನ ನಿತ್ಯ ಕಸ ವಿಂಗಡಿಸಿಯೇ ಸಂಗ್ರಹ ಮಾಡುವುದು ಕಡ್ಡಾಯವಾಗಿದ್ದು, ಪ್ರತೀ ದಿನ ಸ್ಕ್ಯಾನ್ ಹಾಗೂ ಫೋಟೋಗಳನ್ನು ತೆಗೆಯಲೇಬೇಕು. ಕನಿಷ್ಠ ಶೇ.80ರಷ್ಟು ಕಾರ್ಯ ನಿರ್ವಹಿಸಿದವರಿಗೆ ತಿಂಗಳಿಗೆ ತಲಾ 500 ರೂ. ಭತ್ಯೆ ನೀಡಲಾಗುವುದು ಎಂದರು.
ನಗರದಲ್ಲಿ ಹಿಂದಿನಂತೆ ಇತ್ತೀಚಿನ ದಿನಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರತ್ಯೇಕಿಸಿ ಕಸ ಸಂಗ್ರಹವಾಗುತ್ತಿಲ್ಲ. ಪ್ರತ್ಯೇಕಿಸಿ ಕಸ ಸಂಗ್ರಹವಾಗದ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್ನಲ್ಲಿ ಸಮಸ್ಯೆಗಳಾಗುತ್ತಿವೆ. ಸಾರ್ವಜನಿಕರು ಪಾಲಿಕೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಂಗಳೂರಿನ ಜನ ಬುದ್ಧಿವಂತರಾಗಿದ್ದು, ಕಸ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ಪಾಲಿಕೆ ನೀಡಿರುವ ಪ್ರತ್ಯೇಕ ಕಸ ಸಂಗ್ರಹವನ್ನು ಪಾಲಿಸಬೇಕು. ಮೂರು ಪ್ರತ್ಯೇಕ ಬಕೆಟ್ಗಳಲ್ಲಿ ಹಸಿ, ಒಣ ಹಾಗೂ ಡೈಪರ್, ಪ್ಯಾಂಪರ್ ಸೇರಿದಂತೆ ಸ್ಯಾನಿಟರಿ ವೇಸ್ಟ್ಗಳನ್ನು ಪ್ರತ್ಯೇಕವಾಗಿ ನೀಡಬೇಕು. ಶುಕ್ರವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಹಸಿ ಕಸ, ಶುಕ್ರವಾರ ಒಣ ಕಸ, ಹಾಗೂ ವಾರದ ಎಲ್ಲ ದಿನಗಳಲ್ಲಿ ಡೈಪರ್ ಪ್ಯಾಂಪರ್ ಇತ್ಯಾದಿಗಳನ್ನು ಪ್ರತ್ಯೇಕವಾಗಿ ನೀಡಬೇಕು . ಹಸಿ ಕಸದೊಂದಿಗೆ ಪ್ಯಾಂಪರ್, ಡೈಪರ್ ಹಾಕಿದ್ದಲ್ಲಿ ಫೋಟೋ ತೆಗೆದು ಕಳುಹಿಸುವಂತೆ ಅವರು ತಿಳಿಸಿದ್ದಾರೆ.
ಅಧಿಕಾರಿಗಳು ಪ್ರತೀ ವಾಹನಗಳನ್ನು ಗಮನಿಸುತ್ತಿರಬೇಕು. ಮನೆಯಿಂದ ಸಂಗ್ರಹವಾಗದ ಬಳಿಕ ಪ್ರತ್ಯೇಕವಾಗಿಯೇ ಕಾಂಪ್ಯಾಕ್ಟರ್ ಮೂಲಕ ರವಾನಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯಗತವಾಗಬೇಕು ಎಂದರು.
15 ಸಾವಿರ ದಂಡ...
ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ಪ್ರತ್ಯೇಕವಾಗಿ ಕಸ ನೀಡುವಂತೆ ಪಾಲಿಕೆ ಈ ಹಿಂದೆಯೇ ಸೂಚಿಸಿದೆ. ಆದರೆ, ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಪ್ರತೀನಿತ್ಯ ಮಂಗಳೂರಿನಲ್ಲಿ 200 ಮೆಟ್ರಿಕ್ ಟನ್ ಕಸ ಸಂಗ್ರಹವಾಗುತ್ತದೆ. ಎ. 21ರಿಂದ ಹಸಿಕಸ, ಒಣಕಸ ಹಾಗೂ ಸ್ಯಾನಿಟರಿ ಕಸವನ್ನು ಪ್ರತ್ಯೇಕವಾಗಿ ನೀಡದೇ ಇದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಆರಂಭಿಕವಾಗಿ 500ರೂ.ನಿಂದ ಆರಂಭಿಸಿ 15 ಸಾವಿರ ರೂ. ವರೆಗೂ ದಂಡ ವಿಧಿಸಲಾಗುವುದು. ಮತ್ತೆಯೂ ಪ್ರತ್ಯೇಕಿಸಿ ನೀಡದೇ ಇದ್ದಲ್ಲಿ ನೀರಿನ ಸಂಪರ್ಕವನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಾಲಿಕೆ ಮೂಲಕ ಹಿಂದೆ ಮನೆಗಳಿಗೆ ನೀಡಲಾಗಿದ್ದ ಕ್ಯೂಆರ್ ಕೋಡ್ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಕಾರ್ಮಿಕರಿಗೆ ನೀಡಿದ ಡಿವೈಸ್ಗಳು ಸರಿಯಾಗಿಲ್ಲ. ಈ ಕಾರಣದಿಂದಾಗಿ ಮೊಬೈಲ್ ಆ?ಯಪ್ ಮೂಲಕ ಸ್ಕ್ಯಾನ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ 90 ಸಾವಿರ ಸ್ಥಳಗಳಲ್ಲಿ ಕೋಡ್ ಇದೆ. ಅವುಗಳಲ್ಲಿ ಸ್ಕ್ಯಾನ್ ಮಾಡಬೇಕು. ಜತೆಗೆ ನಗರದ ಬ್ಲ್ಯಾಕ್ ಸ್ಪಾಟ್ಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗುವುದು ಎಂದರು.