
ತಿರುವು ಪಡೆದುಕೊಂಡ ಕುತ್ತಾರು ಗ್ಯಾಂಗ್ ರೇಪ್
ಮಂಗಳೂರು: ಮಂಗಳೂರಿನ ಕುತ್ತಾರಿನ ಕೋಡಿ ಎಂಬಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ತಿರುವು ಪಡೆದುಕೊಂಡಿದೆ. ಪ್ರಕರಣದ ಮೂರನೇ ಆರೋಪಿಯನ್ನು ಪೊಲೀಸರೇ ಫಿಕ್ಸ್ ಮಾಡಿದ ಆರೋಪ ಕೇಳಿಬರುತ್ತಿದ್ದು, ಪೊಲೀಸರ ವಿರುದ್ಧ ಅಪಸ್ವರ ಕೇಳಿಬರುತ್ತಿದೆ.
ಮಂಗಳೂರುನ ಕುತ್ತಾರ್ ಕೋಡಿ ಎಂಬಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪಡೀಲ್ ನಿವಾಸಿ ಮನೀಶ್ ಎಂಬಾತನನ್ನು ಪೊಲೀಸರು ಫಿಕ್ಸ್ ಮಾಡಿರುವ ಆರೋಪ ಕೇಳಿಬರುತ್ತಿದ್ದು, ಉಳ್ಳಾಲದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಅಪಸ್ವರ ಕೇಳಿಬರುತ್ತಿದೆ.
ಆರೋಪಿ ಮನೀಶ್ ಪರ ವಕೀಲರು ಆರೋಪ ಮಾಡಿದ್ದು, ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದಾರೆ. ಯುವತಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರು ಮೂವರನೇ ಆರೋಪಿಯನ್ನಾಗಿ ಮನೀಶ್ನನ್ನು ಬಂಧಿಸಿದ್ದರು. ಆದರೆ ಮೂರನೇ ಆರೋಪಿ ಮನೀಶ್ ಅಂದು ಮಂಗಳೂರು ಬಿಟ್ಟು ಹೊರಗೆ ಹೋಗಿಯೇ ಇಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಅಂದು ಮಂಗಳೂರು ನಗರದ ಲಾಲ್ಬಾಗ್ನಲ್ಲಿರುವ ಬಾರ್ನಲ್ಲಿದ್ದ ಸಿಸಿಟಿವಿ ದೃಶ್ಯ ಪತ್ತೆಯಾಗಿದ್ದು, ರಾತ್ರಿ ಹತ್ತರಿಂದ 12 ಗಂಟೆಯ ವರೆಗೂ ಬಾರ್ನಲ್ಲಿ ಇದ್ದಿರುವುದು ತಿಳಿದುಬಂದಿದ್ದು, ಉಳ್ಳಾಲಕ್ಕೆ ಹೋಗಿರಲಿಲ್ಲ. ಆದರೂ ತನಗೂ, ಆ ರೇಪ್ ಪ್ರಕರಣಕ್ಕೂ ಸಂಬಂಧ ಇಲ್ಲವೆಂದು ಹೇಳಿದ್ದರೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ಮೂರನೇ ಆರೋಪಿ ಮನೀಶ್ ಪರ ವಕೀಲ ವಿಕ್ರಮ್ ರಾಜ್ ಹೇಳಿದ್ದಾರೆ.
ಆರೋಪಿಗಳು ಕಾರಿನಲ್ಲಿ ಯುವತಿ ಜೊತೆಗಿದ್ದರು. ಉಳ್ಳಾಲದ ರಾಣಿಪುರಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ಮಾಡಿದ್ದಾಗಿ ಪೊಲೀಸರು ಹೇಳಿದ್ದರು. ಮನೀಶ್ ಮಂಗಳೂರಿನಲ್ಲಿ ಇದ್ದ ಬಗ್ಗೆ ಸಾಕ್ಷ್ಯಗಳಿದ್ದು ಯಾವುದೇ ಕಾರಿನಲ್ಲಿ ಹೋಗಿರಲಿಲ್ಲ. ಮನೀಶ್ ಓಡಾಡಿದ್ದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಕೋರ್ಟಿಗೆ ಮನವಿ ಸಲ್ಲಿಸಿದ್ದೇವೆ ಎಂದು ವಕೀಲರು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ಗೆ ಈ ಬಗ್ಗೆ ನಿರ್ದೇಶನ ನೀಡುವಂತೆ ಕೋರ್ಟಿನಲ್ಲಿ ಕೇಳಿಕೊಂಡಿದ್ದೇವೆ. ಪೊಲೀಸರು ಮನೀಶ್ನನ್ನು ರೇಪ್ ಪ್ರಕರಣದಲ್ಲಿ ಫಿಕ್ಸ್ ಮಾಡಿ ಆತನ ಭವಿಷ್ಯ ಹಾಳು ಮಾಡಿದ್ದಾರೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ಕ್ರಿಮಿನಲ್ ಮಾಡಿದ್ದಾರೆ ಎಂದು ಮಂಗಳೂರು ಕೋರ್ಟ್ ಮುಂದೆ ವಕೀಲ ವಿಕ್ರಮ್ ರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.