
ನ್ಯಾಯಾಲಯಗಳ ಸಂಕೀರ್ಣದಲ್ಲಿ ಇ-ಸೇವಾ ಕೇಂದ್ರ
ಮಂಗಳೂರು: ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಮತ್ತು ವಿಸಿ ಕ್ಯಾಬಿನ್ ಅನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಶುಕ್ರವಾರ ಉದ್ಘಾಟಿಸಿದರು.
ಅರ್ಜಿದಾರರು ಸೇರಿದಂತೆ ಸಾರ್ವಜನಿಕರು ಹಾಗೂ ನ್ಯಾಯವಾದಿಗಳ ಅನುಕೂಲಕ್ಕಾಗಿ ದ.ಕ. ಜಿಲ್ಲಾ ನ್ಯಾಯಾಲಯದಲ್ಲಿಯೂ ಸೇವಾ ಕೇಂದ್ರ ಆರಂಭಿಸಲಾಗಿದ್ದು ಇಂತಹ ಕೇಂದ್ರಗಳು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಾರಂಭಗೊಂಡಿವೆ. ಇದರಲ್ಲಿ ಉಚಿತವಾಗಿ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಕೇಂದ್ರದ ಮೂಲಕ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಇರುವ ಪ್ರಕರಣದ ಪ್ರಸ್ತುತ ಸ್ಥಿತಿ, ಪ್ರಕರಣದ ವಿಚಾರಣೆಯ ಮುಂದಿನ ದಿನಾಂಕ, ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಪೂರಕ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಆದೇಶ, ತೀರ್ಪಿನ ಪ್ರಮಾಣೀಕೃತ ಪ್ರತಿಗಳನ್ನು ಪಡೆದುಕೊಳ್ಳಬಹುದು. ಅಗತ್ಯ ದಾಖಲೆಗಳ ಇ-ಫೈಲಿಂಗ್, ಇ-ಪೇಮೆಂಟ್ ಮಾಡಬಹುದಾಗಿದೆ.
ವಿಸಿ ಕ್ಯಾಬಿನ್ ಅನ್ನು ರಾಜ್ಯದ ಮತ್ತು ಹೊರ ರಾಜ್ಯಗಳ ವಿವಿಧ ನ್ಯಾಯಾಲಯಗಳ ನಡುವೆ ವೀಡಿಯೋ ಕಾನ್ಫರೆನ್ಸ್ ನಡೆಸಲು ಕೋರ್ಟ್ ಪಾಯಿಂಟ್ ಮತ್ತು ರಿಮೋಟ್ ಪಾಯಿಂಟ್ ಆಗಿ ಬಳಸಲಾಗುತ್ತದೆ. ಕಾರಾಗೃಹದಲ್ಲಿರುವ ಸಂಬಂಧಿಕರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಲು ಈ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ದೇಶದ ಯಾವುದೇ ನ್ಯಾಯಾಲಯದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ವಿಚಾರಣೆಯನ್ನು ನ್ಯಾಯವಾದಿಗಳು ಈ ಕೇಂದ್ರದ ಮೂಲಕ ಮಾಡಬಹುದು. ಆದರೆ ಅದಕ್ಕೆ ಪೂರ್ವದಲ್ಲಿ ಸಂಬಂಧಿಸಿದ ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಕಕ್ಷಿದಾರರು ಕೂಡ ದೇಶದ ಯಾವುದೇ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ ನಿಗದಿತ ನ್ಯಾಯಾಲಯದಿಂದ ಅನುಮತಿ ಪಡೆದು ವಿಸಿ ಕ್ಯಾಬಿನ್ ಮೂಲಕವೇ ಹಾಜರಾಗಬಹುದು ಎಂದು ಕೇಂದ್ರದ ತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿದರು.
ಉದ್ಘಾಟನ ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್., ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ, ವಕೀಲರ ಸಂಘದ ಅಧ್ಯಕ್ಷ ಎಚ್.ವಿ. ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.