
ಅರ್ಧದಲ್ಲಿ ನಿಂತಿರುವ ವಸತಿ ಯೋಜನೆ ಪೂರ್ಣಗೊಳಿಸಿ, ಮನೆ ಇಲ್ಲದ ಮಂಗಳೂರಿನ ಬಡವರಿಗೆ ಸೂರು ಒದಗಿಸಿ
Saturday, April 19, 2025
ಮಂಗಳೂರು: ದುಬಾರಿ ನಗರ ಮಂಗಳೂರಿನಲ್ಲಿ ಸಣ್ಣದಾದ ಮನೆ ಹೊಂದುವುದು ಸ್ವಂತ ನಿವೇಶನ ಇಲ್ಲದ ಕಡಿಮೆ ಆದಾಯದ ಜನ ಸಾಮಾನ್ಯರ ಬಹುಕಾಲದ ಕನಸು. ಅದಕ್ಕಾಗಿ ಕಳೆದ ಎರಡು ದಶಕಗಳಿಂದ ಮಂಗಳೂರು ನಗರ ಪಾಲಿಕೆಗೆ ಮನೆ, ನಿವೇಶನ ಒದಗಿಸುವಂತೆ ಅರ್ಜಿ ಸಲ್ಲಿಸಿ ಕಾಯುತ್ತಲೆ ಇದ್ದಾರೆ. ಹತ್ತು ವರ್ಷಗಳ ಹಿಂದೆ ತೀವ್ರವಾದ ಹೋರಾಟದ ತರುವಾಯ ರಾಜೀವ ಗಾಂಧಿ ವಸತಿ ನಿಗಮದ ಅಡಿ ನಾಲ್ಕು ಮಹಡಿಗಳ ವಸತಿ ಸಂಕೀರ್ಣ ನಿರ್ಮಿಸಿ ಅರ್ಹ ವಸತಿ ರಹಿತರಿಗೆ ಮನೆ ಒದಗಿಸಲು ಅಂದಿನ ಸರಕಾರ ತೀರ್ಮಾನಿಸಿತು. ಅದಕ್ಕಾಗಿ ಸುರತ್ಕಲ್ ಇಡ್ಯಾ ಜನತಾ ಕಾಲನಿಯಲ್ಲಿ 600 ರಷ್ಟು ಮನೆ ನಿರ್ಮಾಣದ ಯೋಜನೆ ಕೈಗೆತ್ತಿಕೊಳ್ಳಲಾಯಿತು.
ಆದರೆ, ಸ್ಥಳೀಯ ಶಾಸಕರು, ಮಂಗಳೂರು ನಗರ ಪಾಲಿಕೆಯಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಆಡಳಿತದ ಬಡವರ ಕುರಿತಾದ ತಾತ್ಸಾರ ಮನೋಭಾವದಿಂದ ಇಡ್ಯಾ ಗ್ರಾಮದ ಈ 600 ಮನೆಗಳ ವಸತಿ ಸಂಕೀರ್ಣಗಳ ಯೋಜನೆ ಅರ್ಧದಲ್ಲಿ ನಿಂತಿದೆ. ಕಳೆದ ನಾಲ್ಕು ವರ್ಷಗಳಿಂದ ಪೂರ್ತಿ ಸ್ಥಗಿತಗೊಂಡಿದೆ.
ಇದರಿಂದ ಆರ್ಹ ಫಲಾನುಭವಿಗಳು, ಸ್ವಂತದ್ದೊಂದು ಸೂರು ಇಲ್ಲದ ಬಡಪಾಯಿಗಳು ತೊಂದರೆಗೆ ಒಳಗಾಗಿದ್ದಾರೆ. ಈ ಯೋಜನೆ ಪೂರ್ಣಗೊಳ್ಳದೆ ಹೊಸ ವಸತಿ ಯೋಜನೆಗಳೂ ಜಾರಿಗೆ ಬರುವುದಿಲ್ಲ.
ಆಳುವವರು ಬಡವರ ಕುರಿತಾದ ಈ ನಿರ್ಲಕ್ಷ್ಯವನ್ನು ಖಂಡಿಸಿ, ಅರ್ಧದಲ್ಲಿ ನಿಂತಿರುವ ವಸತಿ ಯೋಜನೆ ತಕ್ಷಣ ಪೂರ್ಣಗೊಳಿಸಲು ಆಗ್ರಹಿಸಿ, ಹೊಸ ವಸತಿ ಯೋಜನೆಗಳನ್ನು ವಸತಿ ರಹಿತರಿಗಾಗಿ ಕೈಗೆತ್ತಿಕೊಳ್ಳಲು ಒತ್ತಾಯಿಸಿ ಮತ್ತೆ ಹೋರಾಟವನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ.
ಅದರ ಭಾಗವಾಗಿ ಏ.21 ರಂದು ಬೆಳಗ್ಗೆ 10.30ಕ್ಕೆ ಕಾನ ಜನತಾ ಕಾಲನಿಯಲ್ಲಿರುವ ಅರ್ಧದಲ್ಲಿ ನಿಂತಿರುವ ವಸತಿ ಸಂಕೀರ್ಣಗಳ ಮುಂಭಾಗ ಪ್ರತಿಭಟನಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.