
ವಾಕ್ಫ್ ಕಾಯಿದೆ ವಿರೋಧಿಸಿ ಪ್ರತಿಭಟನೆ: ಸಂಕಷ್ಟಕ್ಕೆ ಈಡಾದ ಜನತೆ
ಮಂಗಳೂರು: ವಾಕ್ಫ್ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ರಾಜ್ಯದ ಸರಕಾರ ಪ್ರೇರಿತ ಪ್ರತಿಭಟನೆಯ ವೇಳೆ ಮಂಗಳೂರು ಬೆಂಗಳೂರು ಹೆದ್ದಾರಿಯನ್ನು ಅರ್ಧ ದಿನ ಸಂಚಾರದಲ್ಲಿ ತೊಡಕು ಉಂಟಾಗುವಂತೆ ಮಾಡಿ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಆಸ್ಪತ್ರೆಗೆ ತೆರಳುವ ಆಂಬುಲೆನ್ಸ್ಗಳು, ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ತುರ್ತು ಕೆಲಸಕ್ಕೆ ಹೋಗುವ ಮಂದಿಯನ್ನು ವಿನಾಕಾರಣ ಸಂಕಷ್ಟಕ್ಕೆ ಈಡು ಮಾಡಲಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಪ್ರಕಟಣೆಯಲ್ಲಿ ಆರೋಪ ಮಾಡಿದ್ದಾರೆ.
ಹೈಕೋರ್ಟ್ ಆದೇಶವನ್ನು ಪಾಲಿಸುವಲ್ಲಿ ಸರಕಾರ ಹಾಗೂ ಪೊಲೀಸ್ ಇಲಾಖೆ ಸಂಪೂರ್ಣ ಎಡವಿದೆ. ಹಿಂದೂ ಸಂಘಟನೆಗಳು ಸಣ್ಣಪುಟ್ಟ ಕಾರ್ಯಕ್ರಮವನ್ನು ರಸ್ತೆ ಬದಿಯಲ್ಲಿ ಮಾಡಿದ ಮಾತ್ರಕ್ಕೆ ಜಾತ್ಯತೀತ ಎನಿಸಿಕೊಂಡವರು, ಎಡಪಕ್ಷಗಳ ಪುಡಾರಿಗಳು ದಿನದ 24 ಗಂಟೆ ಬೊಬ್ಬೆ ಹೊಡೆಯುತ್ತಾರೆ. ಇವತ್ತಿನ ಹೆದ್ದಾರಿ ಬಂದ್ ಮಾಡಿರುವುದು ಗೊತ್ತಿದ್ದರೂ ತಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದಲ್ಲದೆ, ಹೆದ್ದಾರಿ ಬಂದ್ ಖಂಡಿಸದೆ, ಸಮರ್ಥಿಸಿಕೊಂಡು ತಮ್ಮ ಹಿಂದೂ ವಿರೋಧಿ ನೀತಿಯನ್ನು ಜಗತ್ಜಾಹೀರು ಮಾಡಿದ್ದಾರೆ. ಇಂತಹ ಹೋರಾಟಗಾರರ ವಿರುದ್ಧ ಜನತೆ ಎಚ್ಚರಿಕೆಯಿಂದ ಇರಬೇಕು.
ಹೆದ್ದಾರಿ ಸಂಚಾರಕ್ಕೆ ತೊಡಗುಂಟು ಮಾಡಿದ ಪ್ರತಿಭಟನೆಯ ಆಯೋಜಕರ ವಿರುದ್ಧ ಸೂಕ್ತ ದಂಡನ ಕ್ರಮವನ್ನು ಹಾಗೂ ಹೆದ್ದಾರಿ ಕಾನೂನಿನಂತೆ ಐದು ನಿಮಿಷಕ್ಕಿಂತ ಹೆಚ್ಚು ಹೆದ್ದಾರಿ ತಡೆ ಮಾಡಿದ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೆದ್ದಾರಿ ಇಲಾಖೆಯನ್ನು ಶಾಸಕ ಡಾ. ಭರತ್ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.