
ಮರ ಪ್ರಾಧಿಕಾರ ಹೈಕೋರ್ಟ್ ಆದೇಶ ಪಾಲಿಸಲು ಆಗ್ರಹ
ಮಂಗಳೂರು: ಮರ ಪ್ರಾಧಿಕಾರ ರಚನೆಗೆ ಹೈಕೋರ್ಟ್ ಗಡುವು ನೀಡಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಆದಷ್ಟು ಶೀಘ್ರ ಕಾರ್ಯೋನ್ಮುಖವಾಗಬೇಕು ಎಂದು ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘ ಒತ್ತಾಯಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಫರ್ನಾಂಡಿಸ್, ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ರ ಪ್ರಕಾರ ರಾಜ್ಯದ ಎಲ್ಲ ನಗರ ಪಾಲಿಕೆಗಳು, ಪುರಸಭೆ, ಪಟ್ಟಣ ಪಂಚಾಯತ್ನಂತಹ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮರ ಪ್ರಾಧಿಕಾರ ರಚಿಸಲು 5 ತಿಂಗಳ ಕಾಲಾವಕಾಶ ನೀಡಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಆದೇಶವನ್ನು ಸರ್ಕಾರ ಪಾಲನೆ ಮಾಡಬೇಕು ಎಂದರು.
ಸರ್ಕಾರದ ಅಧಿಸೂಚನೆ ಮೂಲಕ ಮರ ಪ್ರಾಧಿಕಾರ ರಚಿಸಬೇಕು ಎನ್ನುವುದು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಕಾಯ್ದೆ ಜಾರಿಯಾಗಿ 46 ವರ್ಷಗಳೇ ಕಳೆದರೂ ಹೆಚ್ಚಿನ ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರಾಧಿಕಾರ ರಚಿಸಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಧಿಕಾರವನ್ನು ರಚಿಸಲಾಗಿದ್ದರೂ ಕಾಯ್ದೆಯ ನಿಯಮಗಳ ಪ್ರಕಾರ ಮಾಡಿಲ್ಲ ಎಂದು ಆರೋಪಿಸಿದರು.
ಈ ಕುರಿತು ಸಂಘದ ವತಿಯಿಂದ 2024ರ ಫೆಬ್ರವರಿ 26ರಂದು ರಾಜ್ಯಪಾಲರು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮರ ಪ್ರಾಧಿಕಾರ ರಚಿಸಲು ಮನವಿ ಮಾಡಲಾಗಿತ್ತು. ಯಾವುದೇ ಕ್ರಮ ಕೈಗೊಳ್ಳದ ಕಾರಣ ರಾಜ್ಯ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದೆವು. ಇದೀಗ ಏ.೪ರಂದು ಹೈಕೋರ್ಟ್ ಆದೇಶ ಹೊರಡಿಸಿದ್ದು, ಮರ ಪ್ರಾಧಿಕಾರ ರಚನೆಗೆ 5 ತಿಂಗಳ ಗಡುವು ನೀಡಿದೆ. ಇನ್ನಾದರೂ ಕಾಯ್ದೆ ಪ್ರಕಾರ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಬೇಕು ಎಂದು ಬೆನೆಡಿಕ್ಟ್ ಫರ್ನಾಂಡಿಸ್ ಆಗ್ರಹಿಸಿದರು.
ಸಂಘಟನೆ ಪ್ರಮುಖರಾದ ಅಶ್ವಿನಿ ಭಟ್, ಆರ್ಯ ಅಶೋಕ್, ಆರತಿ ಅಶೋಕ್, ಸರೋಜಾ ಪ್ರಕಾಶ್ ಉಪಸ್ಥಿತರಿದ್ದರು.