ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯ ಸಮಿತಿ (ಕುಪ್ಮಾ) ಸಭೆ
ಮಂಗಳೂರು: ನಗರದ ಓಷಿಯನ್ ಪರ್ಲ್ ಹೊಟೇಲ್ನಲ್ಲಿ ಅನುದಾನ ರಹಿತ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಗಳ ಸಂಘ ರಾಜ್ಯ ಸಮಿತಿ (ಕುಪ್ಮಾ)ಯ ಸಭೆಯು ಗೌರವ ಅಧ್ಯಕ್ಷ ಡಾ. ಕೆ.ಸಿ ನಾಕ್, ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮತ್ತು ಕಾರ್ಯದರ್ಶಿ ನರೇಂದ್ರ ನಾಯಕ್ ಅವರ ಮುಂದಾಳತ್ವದಲ್ಲಿ ನಡೆಯಿತು.
ಈ ಸಭೆಯಲ್ಲಿ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಮಾರ್ಚ್ 25 ರಂದು ನಡೆದಿರುವ ಒಂದು ದಿನದ ಕುಪ್ಮಾ ಜಿಲ್ಲಾ ಸಮಿತಿಯ ಸಂಯೋಜಕರ ಕಾರ್ಯಾಗಾರದ ನಿರ್ಣಯದ ಕುರಿತಂತೆ ಚರ್ಚೆ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೇ.31 ರ ಒಳಗಡೆ ಜಿಲ್ಲಾ ಸಮಿತಿಯನ್ನು ರಚನೆ ಮಾಡಲು ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ ವಿವಿಧ ಜಿಲ್ಲೆಯ ಜವಾಬ್ದಾರಿಯನ್ನು ಈ ಸಭೆಯಲ್ಲಿ ನೀಡಲಾಯಿತು. ರಾಜ್ಯದ ಖಾಸಗಿ ಪದವಿ ಪೂರ್ವ ಕಾಲೇಜುಗಳ ಸಮಸ್ಯೆಗಳ ಕುರಿತಂತೆ ಪಟ್ಟಿ ಮಾಡಿ ರಾಜ್ಯ ಸಮಿತಿಗೆ ಕಳುಹಿಸಿಕೊಡುವ ಬಗ್ಗೆ ನಿರ್ಣಯಿಸಲಾಯಿತು. ಅಂದಾಜು ಒಂದು ಸಾವಿರ ಕಾಲೇಜುಗಳ ಸದಸ್ಯತ್ವವನ್ನು ಮಾಡುವ ಗುರಿಯನ್ನು ನಿಗದಿ ಪಡಿಸಲಾಯಿತು. ಎಲ್ಲಾ ಸಮಸ್ಯೆಗಳ ಪರಿಹಾರಕ್ಕೋಸ್ಕರ ಮುಂದಿನ ದಿನಗಳಲ್ಲಿ ಶಿಕ್ಷಣ ಸಚಿವರ ಜೊತೆ ಮಾತುಕತೆ ನಡೆಸಲು ಸಮಯ ನಿಗಿದಿ ಪಡಿಸುವಂತೆಯೂ ಚರ್ಚಿಸಲಾಯಿತು.
ಸಭೆಯಲ್ಲಿ ಕುಪ್ಮಾದ ರಾಜ್ಯದ ಗೌರವ ಅಧ್ಯಕ್ಷ ಹಾಗೂ ಶಕ್ತಿ ಪ.ಪೂ. ಕಾಲೇಜಿನ ಸಂಸ್ಥಾಪಕ ಡಾ. ಕೆ.ಸಿ. ನಾಕ್, ಇನ್ನೊರ್ವ ಗೌರವ ಅಧ್ಯಕ್ಷ ಹಾಗೂ ಶಾರದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ರಾಜ್ಯ ಅಧ್ಯಕ್ಷ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ರಾಜ್ಯ ಕಾರ್ಯದರ್ಶಿ ಹಾಗೂ ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ರಾಜ್ಯ ಉಪಾಧ್ಯಕ್ಷ ಹಾಗೂ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಹಾಗೂ ಸೂರಜ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮಂಜುನಾಥ್ ರೇವಣ್ಕರ್, ರಾಜ್ಯ ಉಪಾಧ್ಯಕ್ಷ ಹಾಗೂ ಎಕ್ಸಲೆಂಟ್ ಮೂಡಬಿದ್ರಿಯ ಅಧ್ಯಕ್ಷ ಯುವರಾಜ್ ಜೈನ್, ಜೊತೆ ಕಾರ್ಯದರ್ಶಿ ವಿಶ್ವನಾಥ್ ಶೇಷಾಚಲ, ಕುಪ್ಮಾ ರಾಜ್ಯ ಸಮಿತಿ ಸದಸ್ಯರಾದ ಬಿ.ಎ. ನಾಝೀರ್, ಫಾ. ವಿನ್ಸೆಂಟ್ ಕ್ರಾಸ್ತ, ಅಲ್ಬನ್ ರೋಡ್ರಿಗಸ್, ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಮೇಶ್ ಕೆ., ಸಂಯೋಜಕ ಕರುಣಾಕರ್ ಬಲ್ಕೂರ್ ಉಪಸ್ಥಿತರಿದ್ದರು.
