
ಎಂಆರ್ಪಿಎಲ್ನಿಂದ ಸಿಗದ ಸವಲತ್ತು: ಪಿಲಿಚಾಮುಂಡಿ ದೈವಸ್ಥಾನಕ್ಕೆ ಕಾರ್ಮಿಕರಿಂದ ಪಾದಯಾತ್ರೆ
Saturday, April 5, 2025
ಮಂಗಳೂರು: ಎಂಅರ್ಪಿಎಲ್ ಸಂಸ್ಥೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಿಗಬೇಕಾದ ನೈಜ ಸವಲತ್ತುಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಸಂಸದರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿ, ಎಂಅರ್ಪಿಎಲ್ ಸಂಸ್ಥೆಯ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಅಧಿಕಾರಿಗಳು ಹಾಗೂ ಕರ್ಮಚಾರಿ ಸಂಘದ ಜೊತೆ ಇತ್ತೀಚೆಗೆ ಮಹತ್ವದ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಮಿಕರಿಗೆ ವಿಮಾ ಸೌಲಭ್ಯ, ಆರೋಗ್ಯ ಭದ್ರತೆ, ವಿಶೇಷ ಭತ್ಯೆ ಮುಂತಾದ ಪ್ರಮುಖ ಕಾರ್ಮಿಕರ ಬೇಡಿಕೆಗಳಿಗೆ ಮೂರು ದಿನಗಳ ಒಳಗೆ ಎಅರ್ಪಿಎಲ್ ಸಂಸ್ಥೆ ಲಿಖಿತವಾಗಿ ಉತ್ತರ ನೀಡಬೇಕು ಎಂದು ಸಭೆಯಲ್ಲಿ ಹಾಜರಿದ್ದ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಂಸದರು ಸೂಚಿಸಿದ್ದರು. ಆದರೆ ಇಷ್ಟರವರೆಗೆ ಯಾವುದೇ ಬೇಡಿಕೆಗಳಿಗೆ ಸಂಸ್ಥೆಯು ಸ್ಪಂದನೆ ನೀಡದೆ ದುರ್ವತನೆ ತೋರಿದ ಎಂಅರ್ಪಿಎಲ್ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ದೇವರು, ದೈವಗಳು ಮನಸ್ಸು ನೀಡಲಿ ಎಂದು ಕರ್ಮಚಾರಿ ಸಂಘದ ವತಿಯಿಂದ ಎಂಅರ್ಪಿಎಲ್ ಮುಖ್ಯ ಗೇಟ್ನ ಮಹಾಗಣಪತಿ ದೇವಸ್ಥಾನದಿಂದ ಎಲ್ಲಾ ಕಾರ್ಮಿಕರು ಮತ್ತು ಕುಟುಂಬಿಕರು ಒಟ್ಟು ಸೇರಿ ಪ್ರಾರ್ಥನೆ ಸಲ್ಲಿಸಿ ಬೃಹತ್ ಪಾದಯಾತ್ರೆ ಕೈಗೊಂಡು ಕಾರಣಿಕ ಕ್ಷೇತ್ರ ಪೆರ್ಮುದೆ ಕಾಯರ್ ಕೋಡಿ ಪಿಲಿಚಾಮುಂಡಿ ದೈವಸ್ಥಾನದವರೆಗೆ ಪಾದಯಾತ್ರೆ ನಡೆಸಿ ಅಲ್ಲಿ ಕಾರ್ಮಿಕರಿಗೆ ಸಂಸ್ಥೆಯಿಂದ ದೊರೆಯುವ ಎಲ್ಲಾ ಸವಲತ್ತುಗಳು ಸಿಗಲಿ ಮತ್ತು ಸವಲತ್ತುಗಳು ಸಿಗದೆ ಹಾಗೆ ತಡೆಯೊಡ್ಡುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಪಿಲಿ ಚಾಮುಂಡಿ ದೈವ ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಕಾರ್ಮಿಕ ಮುಖಂಡರಾದ ಪ್ರಶಾಂತ್ ಮುಡಾಯಿಕೊಡಿ, ಕರ್ಮಚಾರಿ ಸಂಘದ ಅಧ್ಯಕ್ಷ ನಿತಿನ್ ಬಿಸಿರೋಡು, ಉಪಾಧ್ಯಕ್ಷ ಪ್ರಸಾದ್ ಅಂಚನ್, ಸುರೇಶ್ ಪೊಸ್ರಾಲ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜತೆ ಕಾರ್ಯದರ್ಶಿ ಸುನೀಲ್ ಬೋಳ, ಸುರೇಶ್ ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ, ಎಸ್ಸಿ ಮೋರ್ಚಾ ವಿಭಾಗದ ಅಧ್ಯಕ್ಷ ಸಂತೋಷ್, ಮಾಜಿ ಅಧ್ಯಕ್ಷ ಪ್ರವೀಣ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.