ವಾಮಾಚಾರ, ಜೀವ ಬೆದರಿಕೆ ಆರೋಪ: ಮುಡಾ ಆಯುಕ್ತೆ ದೂರು

ವಾಮಾಚಾರ, ಜೀವ ಬೆದರಿಕೆ ಆರೋಪ: ಮುಡಾ ಆಯುಕ್ತೆ ದೂರು

ಮಂಗಳೂರು: ಉರ್ವದಲ್ಲಿರುವ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಇತ್ತೀಚಿಗೆ ಬ್ರೋಕರ್‌ಗಳಿಂದಾಗಿ ಸುದ್ದಿಯಾಗಿತ್ತು. ಸಾರ್ವಜನಿಕರಿಗೆ ಮುಡಾ ಕಚೇರಿಗೆ ಪ್ರವೇಶ ಇಲ್ಲ ಎಂಬುದು ವಿವಾದ ಸೃಷ್ಟಿಸಿತ್ತು. ಇದೀಗ ಬ್ರೋಕರ್‌ಗಳು ಮುಡಾ ಆಯುಕ್ತರಿಗೆ ಬೆದರಿಕೆ ಹಾಕಿ, ವಾಮಾಚಾರ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಮುಡಾ ಆಯುಕ್ತೆ ನೂರ್ ಝಹರಾ ಖಾನಂ ನೀಡಿದ ದೂರಿನಂತೆ ಬ್ರೋಕರ್‌ಗಳಾದ ಬ್ರೋಕರ್ ವಹಾಬ್ (25) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಬಿತ್ (25) ಎಂಬಿಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕಳೆದ ಜ.7ರಂದು ಮುಡಾ ಕಚೇರಿ ಒಳಕ್ಕೆ ನುಗ್ಗಿದ್ದ ಬ್ರೋಕರ್ ವ್ಯಕ್ತಿಯೊಬ್ಬ ಸಿಬಂದಿ ಇಲ್ಲದ ಸಂದರ್ಭದಲ್ಲಿ ಕಚೇರಿ ದಾಖಲೆಗಳನ್ನು ಪರಿಶೀಲಿಸಿ ಫೋಟೊ ನಕಲು ಮಾಡಿದ್ದ ಘಟನೆ ನಡೆದಿತ್ತು. ಇದರ ಸಿಸಿಟಿವಿ ವಿಡಿಯೋ ಹೊರ ಬಂದಿದ್ದರಿಂದ ಮುಡಾ ಕಚೇರಿಯ ಬ್ರೋಕರ್ ವ್ಯವಹಾರ ಜಗಜ್ಜಾಹೀರಾಗಿತ್ತು. ಆನಂತರ ಮೂಡಾ ಕಮಿಷನರ್ ನೂರ್ ಝಹರಾ ಅವರು, ಸಿಬಂದಿ ಹೊರತುಪಡಿಸಿ ಇತರ ಯಾರು ಕೂಡ ಕಚೇರಿ ಒಳ ಬರುವಂತಿಲ್ಲ ಎಂದು ನಿರ್ಬಂಧ ವಿಧಿಸಿದ್ದರು. 

ಇದರಿಂದ ಕಸಿವಿಸಿಗೊಳಗಾದ ಬ್ರೋಕರ್‌ಗಳು ಮುಡಾ ಕಮಿಷನರ್ ವಿರುದ್ಧ ಇತರ ಬ್ರೋಕರುಗಳನ್ನು ಒಟ್ಟುಗೂಡಿಸಿ ವಾಟ್ಸಪ್ ಗ್ರೂಪ್ ರಚಿಸಿ ಮಹಿಳಾ ಕಮಿಷನರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡಿದ್ದರು. ಅಧಿಕಾರಿ ಬಗ್ಗೆ ಅವಮಾನಕರ ಸಂದೇಶಗಳನ್ನು ಪೋಸ್ಟ್ ಮಾಡುವುದು, ಗುಂಪು ಕೂಡಿಕೊಂಡು ಕಚೇರಿ ಒಳಗೆ ಬಂದು ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಫೋನ್ ಮೂಲಕ ಜೀವ ಬೆದರಿಕೆ ಒಡ್ಡುವುದು ಮಾಡುತ್ತಿದ್ದರು.  

ಸಾರ್ವಜನಿಕರ ಮುಂದೆ ಕಮಿಷನರ್ ಅವರನ್ನು ಅವಮಾನಿಸುವುದು, ಜನರನ್ನು ಸೇರಿಸಿ ಶಾಂತಿ ಕದಡಲು ಯತ್ನಿಸಿದ್ದಲ್ಲದೆ, ವಾಮಾಚಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮುಡಾ ಕಮಿಷನರ್ ನೂರ್ ಝಹರಾ ದೂರಿನಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article