
ಕುಡುಪು ಗುಪು ಹತ್ಯೆ ಪ್ರಕರಣ: ಸಿಒಡಿ ತನಿಖೆಗೆ ಆಗ್ರಹ
Wednesday, April 30, 2025
ಮಂಗಳೂರು: ನಗರದ ಹೊರವಲಯದ ಕುಡುಪುವಿನಲ್ಲಿ ನಡೆದ ಕೇರಳದ ವಯನಾಡು ಜಿಲ್ಲೆಯ ಅಶ್ರಫ್ ಎಂಬವರ ಗುಂಪು ಹತ್ಯೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು, ಪ್ರಕರಣವನ್ನು ಸಿಒಡಿ(ಸಿಐಡಿ) ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
‘ಹಲ್ಲೆಯಿಂದ ಉಂಟಾಗಿರುವ ಗಂಭೀರ ಗಾಯಗಳು ಮೃತ ದೇಹದ ಮೇಲೆ ಕಂಡುಬಂದರೂ ಸಹ ಪೊಲೀಸ್ ಇಲಾಖೆ ಕೂಡಲೇ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳದೆ ಪ್ರಕರಣವನ್ನು ಯುಡಿಆರ್ ಪ್ರಕರಣವೆಂದು ದಾಖಲಿಸಿಕೊಂಡಿರುತ್ತಾರೆ. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಅನುಮಾನ ಮತ್ತು ಆಕ್ರೋಶ ವ್ಯಕ್ತವಾದ ನಂತರ ಕೊಲೆ ಪ್ರಕರಣ ಎಂದು ದಾಖಲಿಸಲಾಗಿರುತ್ತದೆ. ಇಪ್ಪತ್ತನಾಲ್ಕು ಗಂಟೆ ಕಳೆದ ನಂತರವೇ ಇಂತಹ ಗಂಭೀರ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಇಲಾಖೆಯ ತನಿಖೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಇನಾಯತ್ ಅಲಿ, "ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಒಡಿ(ಸಿಐಡಿ) ತನಿಖೆ ನಡೆಸಿ, ನೈಜ ಆರೋಪಿಗಳನ್ನು ಪತ್ತೆ ಹಚ್ಚುವಂತೆ" ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರೆ.