
ಪ್ರತ್ಯೇಕ ಟ್ರಾನ್ಸ್ಫಾರ್ಮರ್ ಸ್ಥಾಪಿಸಲು ಮನವಿ
ಮಂಗಳೂರು: ಬಜಾಲ್ ಜಲ್ಲಿಗುಡ್ಡೆ (ಜಾರಬಳಿ) ಪ್ರದೇಶದಲ್ಲಿ ಪ್ರತ್ಯೇಕ ವಿದ್ಯುತ್ ಟ್ರಾನ್ಸ್ಫಾರ್ಮರ್ ಸ್ಥಾಪಿಸಲು, ಕಟ್ಟಪುನಿ ಅಂಗನವಾಡಿ ಬಳಿ ಹಾದು ಹೋಗಿರುವ ಅಪಾಯಕಾರಿ ಸರ್ವಿಸ್ ವಿದ್ಯುತ್ ತಂತಿ ಸರಿಪಡಿಸಲು ಒತ್ತಾಯಿಸಿ ಮಾ.೧೧ರಂದು ಮಂಗಳೂರು ವಿದ್ಯುತ್ ಶಕ್ತಿ ಸರಬರಾಜು ಕಂಪನಿ ನಿಯಮಿತದ ಅಧಿಕಾರಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜನಿಯರ್ ಸತೀಶ್ ಅವರಿಗೆ ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿಯಿಂದ ಮನವಿಯನ್ನು ಸಲ್ಲಿಸಲಾಯಿತು.
ಮಂಗಳೂರಿನ ಅಳಪೆ ದಕ್ಷಿಣ ವಾರ್ಡಿನ ಪಕ್ಕಲಡ್ಕ ಬಸ್ ನಿಲ್ದಾಣದಿಂದ ಹಿಡಿದು ಬಜಾಲ್ ವಾರ್ಡಿನ ಜಾರ ಬಳಿ ಪ್ರದೇಶದವರೆಗೂ ನೂರಾರು ಮನೆಗಳಿವೆ. ಈ ಎಲ್ಲಾ ಮನೆಗಳಿಗೆ ಸಂಪರ್ಕಿಸುವ ವಿದ್ಯುತ್ ಜಾಲವನ್ನು ನಿಯಂತ್ರಿಸಲು ಮಾತ್ರ ಒಂದೇ ಒಂದು ಟ್ರಾನ್ಸ್ ಫಾರ್ಮರ್ ಇದ್ದು, ಅದು ವಿಪರೀತವಾದ ಒತ್ತಡವನ್ನು ನಿಯಂತ್ರಿಸುತ್ತಿದೆ. ಈಗಾಗಲೇ ಈ ಪರಿಸರದಲ್ಲಿ ಬಹುತೇಕ ಮನೆಗಳು ನಿರ್ಮಾಣವಾಗಿದ್ದು, ಮತ್ತಷ್ಟು ಹೊಸ ಹೊಸ ಮನೆಗಳು ನಿರ್ಮಾಣ ಹಂತದಲ್ಲಿವೆ. ಅದರಂತೆ ದಿನದಿಂದ ದಿನಕ್ಕೆ ವಿದ್ಯುತ್ ಬೇಡಿಕೆಗಳು ಕೂಡಾ ಏರಿಕೆಯಾಗ ತೊಡಗಿದೆ.
ಈ ಭಾಗದಲ್ಲಿ ನಿರ್ಮಾಣಗೊಂಡಿರುವ ಎಲ್ಲಾ ಮನೆಗಳಿಗೆ ವಿದ್ಯುತ್ ಬಳಕೆಯಲ್ಲಿ ಗಣನೀಯ ಏರಿಕೆಯಿಂದ ವಿದ್ಯುತ್ ಜಾಲದ ಮೇಲೆ ಒತ್ತಡ ನಿರ್ಮಾಣಗೊಂಡಿದೆ. ಅದರ ಪರಿಣಾಮವಾಗಿ ಪಕ್ಕಲಡ್ಕ ಬಸ್ ನಿಲ್ದಾಣದಲ್ಲಿ ಇರುವ ಏಕೈಕ ಟ್ರಾನ್ಸ್ ಫಾರ್ಮರ್ಗೆ ಓವರ್ ಲೋಡ್ ಸೃಷ್ಟಿಯಾಗಿದ್ದು, ಆಗಾಗ್ಗೆ ವಿದ್ಯುತ್ ಕಡಿತ ಮತ್ತು ಟ್ರಾನ್ಸ್ ಫಾರ್ಮರ್ ವೈಫಲ್ಯಗಳು ಉಂಟಾಗುತ್ತಿವೆ. ಮೊನ್ನೆ ಸುರಿದ ಗಾಳಿ ಮಳೆಗೆ ಜಲ್ಲಿಗುಡ್ಡೆ ( ಜಾರ ಬಳಿ)ಸುತ್ತಮುತ್ತಲ ಭಾಗದಲ್ಲಿ ದಿನವಿಡೀ ಕರೆಂಟು ಇಲ್ಲದೆ ಈ ಭಾಗದ ಜನ ಹಲವು ಸಮಸ್ಯೆಗಳನ್ನು ಅನುಭವಿಸಿದ್ದಾರೆ. ಒಂದು ದಿನ ಸುರಿದ ಗಾಳಿ ಮಳೆಗೆ ಈ ರೀತಿಯ ತೊಂದರೆಯನ್ನು ಅನುಭವಿಸಿರುವ ನಿವಾಸಿಗಳು ಇನ್ನು ಮಳೆಗಾಲದಲ್ಲಿ ಯಾವ ರೀತಿಯ ಸಮಸ್ಯೆ ಸೃಷ್ಟಿಯಾಗಲಿವೆ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.
ನಿಯೋಗದಲ್ಲಿ ಡಿವೈಎಫ್ಐ ಮುಖಂಡ, ಬಜಾಲ್ ವಾರ್ಡ್ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್, ಅಧ್ಯಕ್ಷ ಅಯಾಜ್ ಜಲ್ಲಿಗುಡ್ಡೆ, ಕೋಶಾಧಿಕಾರಿ ಕಮಲಾಕ್ಷ ಬಜಾಲ್, ದೀಪಕ್ ಬಜಾಲ್, ಜಯಪ್ರಕಾಶ್ ಜಲ್ಲಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.