ನರೇಗಾ: ಮೂಡುಬಿದಿರೆಯ 8 ಗ್ರಾಮ ಪಂಚಾಯತ್‌ನಲ್ಲಿ ಗುರಿ ಮೀರಿದ ಸಾಧನೆ!

ನರೇಗಾ: ಮೂಡುಬಿದಿರೆಯ 8 ಗ್ರಾಮ ಪಂಚಾಯತ್‌ನಲ್ಲಿ ಗುರಿ ಮೀರಿದ ಸಾಧನೆ!


ಮೂಡುಬಿದಿರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25ನೇ ಸಾಲಿನಲ್ಲಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಮೂಲಕ ತನ್ನ ವಾರ್ಷಿಕ ಗುರಿಯನ್ನು ಮೂಡುಬಿದಿರೆ ತಾಲೂಕು ತಲುಪಿ ಉತ್ತಮ ಸಾಧನೆ ಮಾಡಿ ಸೈ ಎನಿಸಿಕೊಂಡಿದೆ. 


ಮೂಡುಬಿದಿರೆ ತಾಲೂಕಿನಲ್ಲಿ ಒಟ್ಟು 12 ಗ್ರಾಮ ಪಂಚಾಯತ್‌ಗಳಿದ್ದು ಅವುಗಳಲ್ಲಿ ದರೆಗುಡ್ಡೆ, ವಾಲ್ಪಾಡಿ, ನೆಲ್ಲಿಕಾರು, ಶಿತಾ೯ಡಿ, ಬೆಳುವಾಯಿ, ಪಡುಮಾನಾ೯ಡು, ಇರುವೈಲು ಹಾಗೂ ಪುತ್ತಿಗೆ ಇವು ಸಾಧನೆ ಮಾಡಿರುವ 8 ಗ್ರಾ.ಪಂ.ಗಳು. ತಾಲೂಕಿಗೆ ಒಟ್ಟು ಮಾನವ ದಿನ ಸೃಜನೆಗಾಗಿ ೭೪,೯೧೬ ಗುರಿಯನ್ನು ನೀಡಿದ್ದು, 76,066 ತಲುಪಿ, ಶೇಕಡಾ 101.54 ರಷ್ಟು ಸಾಧನೆ ಮಾಡಿದೆ. 


ತಾಲೂಕಿನಲ್ಲಿಯೇ ದರೆಗುಡ್ಡೆ ಗ್ರಾಮ ಪಂಚಾಯತ್ ಹೆಚ್ಚಿನ ಮಾನವ ದಿನ ಸೃಜಿಸಿದೆ. ವರ್ಷದ ಆರಂಭದಲ್ಲೇ ಕೆಲಸಗಳನ್ನು ಆರಂಭಿಸಿ ಗುರಿ ತಲುಪುವಲ್ಲಿ ನಿರಂತರ  ಪ್ರಯತ್ನವನ್ನು ಪಂಚಾಯತ್‌ಗಳು ಮಾಡಿವೆ. ಮಾರ್ಚ್ ತಿಂಗಳಲ್ಲಿ ತೆರೆದ ಬಾವಿ, ಅಡಿಕೆ ಗಿಡ ನೆಡುವುದು, ಪರಂಬೋಕು ತೋಡು ಹೂಳೆತ್ತುವುದು ಹೀಗೆ  ಕಾಮಗಾರಿಗಳು ಆರಂಭವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ವರ್ಷದ ಮೊದಲ ತಿಂಗಳಿನಿಂದಲೇ ಶೇಕಡಾ 100 ರಷ್ಟು ಗುರಿಯನ್ನು ಸಾಧಿಸಲು ಪಂಚಾಯತ್‌ಗಳು ಹೆಜ್ಜೆ ಹಾಕುತ್ತಿತ್ತು. ಅದರ ಫಲಶೃತಿ ಈ ವರ್ಷದ ಗುರಿಯನ್ನು ತಲುಪಲು ಸಹಕಾರಿಯಾಗಿದೆ.


ಗುರಿಸಾಧನೆಯ ಗುಟ್ಟು:

ಪ್ರತಿ ಬಾರಿಯೂ ಹೆಚ್ಚು ಹೆಚ್ಚು ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆನ್ನುವ ಉದ್ದೇಶದಿಂದ ಸಭೆ, ಅಭಿಯಾನ, ಆಟೋ ಪ್ರಚಾರದಂತಹ ಐಇಸಿ ಕಾರ್ಯಕ್ರಮದ ಮೂಲಕ ಜನರಿಗೆ ಮಾಹಿತಿ ನೀಡಿ, ಜನರನ್ನು ಈ ಕೆಲಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲಾಗುತ್ತದೆ. ವರ್ಷದ ಆರಂಭದಿಂದಲೇ ಶೇಕಡಾ 100 ಕ್ಕೆ ನಿರಂತರ ಪ್ರಯತ್ನ ನಡೆಯುತ್ತಿತ್ತು. ಪಂಚಾಯತ್‌ಗಳು ಶೇ.100 ಕ್ಕೆ ಪೈಪೋಟಿಯನ್ನು ನಡೆಸಿದೆ. ವಾಲ್ಪಾಡಿ ಗ್ರಾಮ ಪಂಚಾಯತ್ ಸತತ 12 ತಿಂಗಳುಗಳು ಶೇ.100 ರಷ್ಟು ಗುರಿ ಸಾಧಿಸಿದೆ. ಗುರಿ ಸಾಧನೆ ಒಂದೆಡೆಯಾದರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು, ಕೃಷಿ ತೋಟಗಳು ತಲೆ ಎತ್ತಿ ನಿಂತಿದೆ. ಅಡಿಕೆ, ತೆಂಗು, ಕಾಳುಮೆಣಸು, ವಿಲ್ಯದೆಲೆ, ದನದಹಟ್ಟಿ, ಕೋಳಿ ಶೆಡ್ಡು, ಆಡು ಶೆಡ್ಡು, ತೆರೆದ ಬಾವಿ, ಬಚ್ಚಲುಗುಂಡಿ, ಪೌಷ್ಠಿಕ ತೋಟ ಹೀಗೆ ವೈಯಕ್ತಿಕ ಕೆಲಸಗಳು ನರೇಗಾ ಫಲಾನುಭವಿಗಳ ಜಮೀನಿನಲ್ಲಿ ರಚನೆಯಾಗಿ ಫಲಾನುಭವಿಗಳ ಮೊಗದಲ್ಲಿ ಸಂತಸ ಕಾಣುತ್ತಿದೆ. ಇನ್ನು ಗ್ರಾಮದಲ್ಲಿ ಅಂಗನವಾಡಿ,ಎನ್ ಆರ್ ಎಲ್ ಎಮ್ ಸಂಜೀವಿನಿ  ಕಟ್ಟಡ, ಸ್ಮಶಾನ ಶೆಡ್, ಘನತ್ಯಾಜ್ಯ ಘಟಕ, ತೋಡು ಹೂಳೆತ್ತುವುದು, ರಸ್ತೆ ಅಭಿವೃದ್ಧಿಯಂತಹ ಅನೇಕ ಕೆಲಸಗಳು ಕೂಡ ಅನುಷ್ಠಾನಗೊಂಡಿದ್ದು, ಸಾರ್ವಜನಿಕರಿಗೆ ಅ ನುಕೂಲವಾಗಿದೆ. 

ಆನ್‌ಲೈನ್ ಅರ್ಜಿ-ಕ್ರಿಯಾಯೋಜನೆ:

ಗ್ರಾಮದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಯನ್ನು ನೀಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಗ್ರಾಮದ ಅನುಷ್ಠಾನ ಇಲಾಖೆಯಾದ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅದಿ ಕಾರಿ, ಪಂಚಾಯತ್ ನರೇಗಾ ಸಿಬ್ಬಂದಿ, ಅಧ್ಯಕ್ಷರು ಹಾಗೂ ಸದಸ್ಯರುಗಳ ಪ್ರೋತ್ಸಾಹದಿಂದ ಸುಲಭವಾಗಿ ಕೆಲಸಗಳು ಕಾರ್ಯರೂಪಕ್ಕೆ ಬಂದಿವೆ. 2025-26ನೇ ಸಾಲಿನ ಕಾಮಗಾರಿಗಳಿಗೆ ಈಗಾಗಲೇ ಅರ್ಜಿಯನ್ನು ಪಡೆದು ಆನ್‌ಲೈನ್ ಮೂಲಕ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಆಯುಕ್ತಾಲಯದ ಸೂಕ್ತ ನಿರ್ದೇಶನದಂತೆ ಮುಂದಿನ ವರ್ಷವು ಹೊಸ ಹುರುಪಿನೊಂದಿದೆ ಇನ್ನಷ್ಟು ಫಲಾನುಭವಿಗಳಿಗೆ ಸೌಲಭ್ಯವನು ಒದಗಿಸುವ ಕಾರ್ಯ ಪಂಚಾಯತ್‌ಗಳು ಮಾಡಲಿವೆ. 

ವಿವಿಧ ಕಾಮಗಾರಿಗಳು:

ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಿನ ಜನರು ಬಾವಿಯ ನೀರನ್ನೇ ದಿನನಿತ್ಯದ ಬಳಕೆಗೆ ಬಳಸುತ್ತಾರೆ. ಅದರಲ್ಲಿಯೂ ಕುಡಿಯಲು ಬಾವಿಯ ನೀರನ್ನೇ ಉಪಯೋಗಿಸುತ್ತಾರೆ. ಹೀಗಾಗಿ ಸುಮಾರು 116 ಬಾವಿಗಳನ್ನು, ಕೃಷಿಕರಿಗೆ ಹಾಗೂ ಸ್ವ ಉದ್ಯೋಗಿಗಳಿಗೆ ಸಾಥ್ ನೀಡುವ 190 ತೋಟಗಾರಿಕೆ ಕೆಲಸಗಳು, 65 ದನದ  ಹಟ್ಟಿ, 19 ಬಸಿಗಾಲುವೆ, 17 ಕೋಳಿ ಶೆಡ್ಡು, 7 ಆಡು ಶೆಡ್ಡು, 1 ಹಂದಿ ಶೆಡ್, 23 ಗೊಬ್ಬರ ಗುಂಡಿ, 27 ಬಚ್ಚಲು ಗುಂಡಿ, 9 ಪೌಷ್ಠಿಕ ತೋಟ, 1 ಗೋಬರ್ ಗ್ಯಾಸ್, 8 ಸಿಸಿ ರಸ್ತೆ, 1 ಅಂಗನವಾಡಿ, 2 ನಾಲಾ ಹೂಳೆತ್ತುವುದು, 4 ಮಣ್ಣಿನ ರಸ್ತೆ, 1 ಚರಂಡಿ ನಿರ್ಮಾಣ, 51 ವಸತಿ, 11 ವೈಯಕ್ತಿಕ ಶೌಚಾಲಯ, 1 ಶಾಲಾ  ಆವರಣ ಗೋಡೆ ಹಾಗೂ 8 ಶಾಲಾ ಶೌಚಾಲಯ ಹೀಗೆ ಒಟ್ಟು 575 ನರೇಗಾ ಯೋಜನೆಯಲ್ಲಿ ಅನುಷ್ಠಾನ ಮಾಡಲಾಗಿದೆ.

2025-26 ನೂತನ ವರ್ಷ ಇನ್ನೇನು ಆರಂಭಗೊಂಡಿದ್ದು, ನೂತನ ಕಾಮಗಾರಿಗಳು ನಡೆಯಲಿದ್ದು, ನರೇಗಾ ಫಲಾನುಭವಿಗಳಿಗೆ ಇನ್ನಷ್ಟು ಕೆಲಸಗಳನ್ನು ನೀಡಲಾಗುತ್ತಿದೆ. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಹಾಗೂ ಸಹಾಯಕ ನಿರ್ದೇಶಕರುಗಳ ನಿರ್ದೇಶನ ಹಾಗೂ ಪ್ರಗತಿ ಪರಿಶೀಲನಾ  ಸಭೆಗಳಿಂದ ಗ್ರಾಮದಲ್ಲಿ ಅನೇಕ ಕಾಮಗಾರಿಗಳು ತಲೆಎತ್ತಿ ನಿಲ್ಲಲಿದೆ.


ಎಪ್ರಿಲ್‌ನಲ್ಲಿ ನರೇಗಾ ದಿನಕೂಲಿ ದರವನ್ನು ಕೇಂದ್ರದಲ್ಲಿ ಪರಿಷ್ಕೃತ ಮಾಡಲಾಗುತ್ತದೆ. ಅದರಂತೆ ಹಿಂದಿನ ವರ್ಷ ೩೪೯ ರೂ. ಇದ್ದಂತಹ ದಿನಕೂಲಿಯು 2025-26ನೇ ವರ್ಷಕ್ಕೆ 370 ರೂ. ಹೆಚ್ಚಳವಾಗಿದೆ.

ಈ ತಾಲೂಕಿನಲ್ಲಿ ಹೆಚ್ಚು ವೈಯಕ್ತಿಕ ಕೆಲಸಗಳು ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅರ್ಜಿ ಸಲ್ಲಿಸಿ ನರೇಗಾ ಕೆಲಸವನ್ನು ಪಡೆದಿದ್ದಾರೆ. ಅದರೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸಗಳು ನಡೆದಿವೆ. ತಾಲೂಕಿನ ಮಾನವದಿನ ಗುರಿ ಸಾಧನೆಗಾಗಿ ಸಿಬ್ಬಂದಿಗಳು ಆಡಳಿತ ಮಂಡಳಿ ಹಾಗೂ ನರೇಗಾ ಫಲಾನುಭವಿಗಳು ಉತ್ತಮ ಸಹಕಾರ ನೀಡಿದ್ದಾರೆ‌ ಎಂದು ಮೂಡುಬಿದಿರೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ ಬಿ. ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿವರು ಸಿಬ್ಬಂದಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಪಂಚಾಯತ್‌ಗಳಿಗೆ ಭೇಟಿ ನೀಡಿ,  ಜನರಿಗೆ ಕೆಲಸವನ್ನು ನೀಡಿ ಗುರಿ ಸಾಧಿಸುವಂತೆ ತಿಳಿಸುತ್ತಿದ್ದರು. ಜನರಿಗೆ ಕೆಲಸ ಅದರೊಂದಿಗೆ ತಾಲೂಕಿನ ಪ್ರಗತಿಗೆ ಪೈಪೋಟಿ ನಡೆಸಿ, ಉತ್ತಮ ಸಾಧನೆ ನಮ್ಮ ತಾಲೂಕಿನಲ್ಲಾಗಿದೆ ಎಂದು ಮೂಡುಬಿದಿರೆ ತಾ.ಪಂ. ಸಹಾಯಕ ನಿರ್ದೇಶಕ (ಪ್ರಭಾರ)  ಸಾಯಿಷ್ ಚೌಟ ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article