
ಮೂಡುಬಿದಿರೆಯಲ್ಲಿ ಮಾತೃ ಪೂಜನದೊಂದಿಗೆ ನವಚೇತನ ಶಿಬಿರ ಸಮಾಪ್ತಿ
Saturday, April 19, 2025
ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್(ರಿ), ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 5 ದಿನಗಳ ಕಾಲ ನಡೆದ ನವಚೇತನ ಶಿಬಿರವು ಮಾತೃ ಪೂಜನದೊಂದಿಗೆ ಶನಿವಾರ ಸಮಾಪ್ತಿಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಜವನೆರ್ ಬೆದ್ರ ಫೌಂಡೇಷನ್ (ರಿ) ಸ್ಥಾಪಕಾಧ್ಯಕ್ಷ ಅಮರ್ ಕೋಟೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶದಲ್ಲಿ ಯೋಗ ಕುರಿತು ಕಲಿಯುವ ಯೋಗ ಎಲ್ಲರಿಗೂ ಇದೆ ಎಲ್ಲರೂ ಯೋಗಾಭ್ಯಾಸ ಕುರಿತು ಅಧ್ಯಯನ ನಡೆಸಿ ಅದರ ಮಹತ್ವ ತಿಳಿದು ಎಲ್ಲರಿಗೂ ತಿಳಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋಪಾಲಕೃಷ್ಣ ದೇವಸ್ಥಾನದ ಮುಕ್ತೆಸರರಾದ ಗುರುಪ್ರಸಾದ್ ಹೊಳ್ಳ ಅವರು ಮಾತನಾಡಿ, ಜವನೆರ್ ಬೆದ್ರ ಸಂಘಟನೆಯ ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಶಂಸಿಸಿ ಮಕ್ಕಳನ್ನು ಒಗ್ಗೂಡಿಸಿ ಅದ್ಭುತವಾಗಿ ಸಂಘಟಿಸಿದ ಅಬ್ಬಕ್ಕ ಬ್ರಿಗೇಡ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಯೋಗ ತರಬೇತಿ ನೀಡಿದ್ದ ಆರ್ಟ್ ಆಫ್ ಲಿವಿಂಗ್ನ ಯೋಗ ಶಿಕ್ಷಕಿ ಸುನಿತಾ ಉದಯ್ ಅವರಿಗೆ ಗೌರವಾರ್ಪಣೆ ನಡೆಯಿತು.
ಯುವ ಸಂಘಟನೆಯ ಸಂಚಾಲಕ ನಾರಾಯಣ ಪಡುಮಲೆ ಉಪಸ್ಥಿತರಿದ್ದರು.
ಅಬ್ಬಕ್ಕ ಬ್ರಿಗೇಡ್ ಸಂಚಾಲಕಿ ಸಹನಾ ನಾಯಕ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಪೂಜಾರಿ ಅವರು ಸಂಘಟನೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದ್ದರು. ಮಾರ್ಗದರ್ಶಕಿ ಸುಮಲತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಕಾರ ಜಾಗೃತಿ ಪ್ರಮುಖ ಅಮಿತಾ ಗಣೇಶ್ ವಂದಿಸಿದರು.
ಶಿಬಿರದಲ್ಲಿ ಯೋಗ ಪ್ರಾಣಾಯಾಮ, ಧ್ಯಾನ, ಜ್ಞಾನ/ ಆಟಗಳು ಹಾಗೂ ಪೋಷಕರಿಗೆ ಪಾದ ಪೂಜೆ ನಡೆಯಿತು.