
ಪುತ್ತೂರು ದೇವಳದಲ್ಲಿ ವಿಷು ಕಣಿ ಉತ್ಸವ ಬಲಿ
ಪುತ್ತೂರು: ಸೌರಯುಗಾದಿ ವಿಷುವಿನ ಅಂಗವಾಗಿ ಸೋಮವಾರ ಮಹತೋಭಾರ ಮಹಾಲಿಂಗೇಶ್ವರ ದೇವಾಲಯದ ಒಳಾಂಗಣದಲ್ಲಿ ವಿಶೇಷವಾಗಿ ವಿಷುಕಣಿ ಉತ್ಸವ ಬಲಿ ನಡೆಯಿತು.
ಪ್ರಾತ:ಕಾಲ ದೇವರ ಗರ್ಭಗುಡಿಯ ನಡೆ ತೆರೆದು ವಿಷುಕಣಿ ದರ್ಶನದ ಬಳಿಕ ಭಕ್ತರು ದೇವರನ್ನು ಭೇಟಿಮಾಡಿ ವಿಷು ಕಾಣಿಕೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಅನಂತರ ದೇವಾಲಯದ ಒಳಾಂಗಣದಲ್ಲಿ ವಿಷು ಕಣಿ ಪ್ರಯುಕ್ತ ದೇವರ ಉತ್ಸವ ಬಲಿ ನಡೆಯಿತು.
ಸುತ್ತುಗಳ ವಿಶೇಷ ಆಕರ್ಷಣೆ
ವಿಶೇಷವಾಗಿ ಮೊದಲಿಗೆ ತಂತ್ರ ಸುತ್ತು, ಅನಂತರ ಉಡಿಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ವಸಂತಕಟ್ಟೆ ಪೂಜೆ, ಸೇವೆಯ ವಾದ್ಯ ಸುತ್ತುಗಳು, ಶಂಖ, ಜಾಗಟೆ ಸುತ್ತು, ಬ್ಯಾಂಡ್ ವಾಲಗ ಸುತ್ತು ಮತ್ತು ಸರ್ವ ವಾದ್ಯ ಸುತ್ತು ನಡೆಯಿತು. ಬಳಿಕ ದೇವರು ಒಳಗಾಗಿ ಮಹಾಪೂಜೆ ನಡೆದು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಮಧ್ಯಾಹ್ನ ವಿಷು ಕಣಿಯ ಅಂಗವಾಗಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಸೌರಮಾನ ಯುಗಾದಿ ವಿಷುಕಣಿಯು ಜಾತ್ರೆಯ ಸಂದರ್ಭದಲ್ಲಿಯೇ ಬರುವುದರಿಂದ ಪ್ರತಿ ವರ್ಷವೂ ಬೆಳಗ್ಗಿನ ದೇವರ ಉತ್ಸವ ಬಲಿ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಮಧ್ಯಾಹ್ನ ಸಾವಿರಾರು ಮಂದಿ ವಿಷುವಿನ ವಿಶೇಷ ಅನ್ನಪ್ರಸಾದ ಸ್ವೀಕರಿಸಿದರು.
ಸಂಜೆ ದೇವಳದ ಹೊರಾಂಗಣದಲ್ಲಿ ದೇವರ ಬಲಿ ಉತ್ಸವ ನಡೆದ ಬಳಿಕ ಪೂರ್ವಶಿಷ್ಟ ಸಂಪ್ರದಾಯದಂತೆ ದೇವರ ಚಂದ್ರಮಂಡಲ ಉತ್ಸವ ನಡೆದು ಅನಂತರ ದೇವರ ಪೇಟೆ ಸವಾರಿ ನಡೆಯಿತು.
ಎ.15 ರಂದು ಸಂಜೆ ಉತ್ಸವ, ಬನ್ನೂರು, ಅಶೋಕನಗರ, ರೈಲ್ವೆ ಮಾರ್ಗ ಸವಾರಿ ನಡೆಯಲಿದೆ.