
‘ಸೀಮಾಧಿಪತಿ’ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ
ಪುತ್ತೂರು: ಇತಿಹಾಸ ಪ್ರಸಿದ್ದ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಎ.10ರಂದು ಆರಂಭಗೊಂಡಿದ್ದು, ಶನಿವಾರ ಬೆಳಗ್ಗೆ 10.40ಕ್ಕೆ ಧ್ವಜಾವರೋಹಣದೊಂದಿಗೆ ಸಮಾಪನಗೊಂಡಿತು. ಶುಕ್ರವಾರ ಸಂಜೆ ದೇವಾಲಯದಿಂದ ಸಾವಿರಾರು ಭಕ್ತರೊಂದಿಗೆ ಕಾಲ್ನಡಿಗೆಯ ಮೂಲಕ ಅವಭ್ರತ ಸ್ನಾನಕ್ಕೆ ವೀರಮಂಗಲಕ್ಕೆ ತೆರಳಿದ ದೇವರ ಸವಾರಿಯು ಶನಿವಾರ ಬೆಳಗ್ಗೆ 13 ಕಿ.ಮೀ. ದೂರದ ವೀರಮಂಗಲ ಕುಮಾರಧಾರ ನದಿಗೆ ತಟಾಕಕ್ಕೆ ತಲುಪಿತು. ಅಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವಭೃಥ ಸ್ನಾನ ಮುಗಿಸಿ ಶನಿವಾರ ಬೆಳಗ್ಗೆ 10.15ಕ್ಕೆ ದೇವಾಲಯಕ್ಕೆ ಮರಳಿತು.
ಬೆಳಗ್ಗೆ ವೀರಮಂಗಲ ವಿಷ್ಣುಮೂರ್ತಿ ದೇವಾಲಯಕ್ಕೆ ತಲುಪಿ ಅಲ್ಲಿ ಕಟ್ಟೆ ಪೂಜೆ ಸ್ವೀಕರಿಸಿದ ದೇವರು ಬಳಿಕ ಕುಮಾರಧಾರಾ ನದಿಯ ತಟದಲ್ಲಿರುವ ಕಟ್ಟೆಯಲ್ಲಿ ಪುಷ್ಪ ಕನ್ನಡಿ ತೆರವು ಮಾಡಿ ನದಿಗೆ ಅವಭ್ರತ ಸ್ನಾನಕ್ಕೆ ಇಳಿದರು. ಅದಕ್ಕೂ ಮುನ್ನ ದಾರಿಯುದ್ದಕ್ಕೂ ಕಟ್ಟೆಪೂಜೆಗಳು, ಸುಮಾರು 10,000ಕ್ಕೂ ಹೆಚ್ಚು ಹಣ್ಣುಕಾಯಿ ಸೇವೆಯನ್ನು ಸ್ವೀಕರಿಸಿದರು. ದೇವರ ಸವಾರಿ ಮರಳಿ ಬರುವ ಸಂದರ್ಭದಲ್ಲಿ ವಿವಿಧ ವಾಹನಗಳಲ್ಲಿ ವಾದ್ಯಘೋಷ, ಶ್ರೀ ಮಹಾಲಿಂಗೇಶ್ವರ ದೇವರ ಭಕ್ತಿ ಗೀತೆ, ಭಕ್ತಾಧಿಗಳಿಂದ ಶಿವನಾಮ ಸ್ಮರಣೆ ನಡೆಯಿತು.
ಶುಕ್ರವಾರ ಸಂಜೆ ದೇವರೊಂದಿಗೆ ಅವಭೃತ ಸ್ನಾನಕ್ಕೆ ಬರಿಗಾಲಿನಲ್ಲಿ ಭಕ್ತಿ, ಶ್ರದ್ಧೆಯೊಂದಿಗೆ ತೆರಳಿದ ಸಾವಿರಾರು ಭಕ್ತರು ವೀರಮಂಗಲ ಕುಮಾರಧಾರ ನದಿಯಲ್ಲಿ ದೇವರೊಂದಿಗೆ ಸ್ನಾನ ಮುಗಿಸಿ ಮರಳಿ ದೇವರೊಂದಿಗೆ ದೇವಾಲಯಕ್ಕೆ ಆಗಮಿಸಿದರು. ದೇವರ ಮೂಲ ಉತ್ಸವ ಮೂರ್ತಿಯೊಂದಿಗೆ ಸವಾರಿಯು ದೇವಾಲಯದ ಒಳಾಂಗಣ ಪ್ರವೇಶಿಸಿತು. ಒಂದು ಸುತ್ತು ಉತ್ಸವ ನಡೆದು ಬಳಿಕ ಧ್ವಜಾವರೋಹಣ ನಡೆಯಿತು.
ಜಾತ್ರೋತ್ಸವದ ಆರಂಭದಿಂದ ಹಿಡಿದು ಧ್ವಜಾವರೋಹಣದವರೆಗೆ ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬಂದಿ ನಿರಂತರ ಬಂದೋಬಸ್ತ್ ನಡೆಸಿದರು. ಅವಭೃಥ ಸವಾರಿಯ ಉದ್ದಕ್ಕೂ ಹಾಗೂ ದೇವರ ವೀರಮಂಗಲ ಅವಭೃಥ ಸ್ನಾನದ ಬಳಿ ಭಕ್ತರು ಅಪಾಯಕಾರಿ ಸ್ಥಳದಲ್ಲಿ ನೀರಿಗೆ ಇಳಿಯದಂತೆ ಪೊಲೀಸರು ನಿಗಾ ವಹಿಸಿದರು.
ದೈವಗಳ ನೇಮ
ಎ.10 ರಿಂದ ಕೊಡಿ ಏರಿ ಜಾತ್ರೆ ಆರಂಭಗೊಂಡು ಎ.19 ರಂದು ಕೊಡಿ ಇಳಿದ ಬಳಿಕ ಎರಡು ದಿನ ದೈವಗಳ ನೇಮ, ಚೂರ್ಣೋತ್ಸವ, ವಸಂತಕಟ್ಟೆ ಪೂಜೆ ನಡೆಯುತ್ತದೆ. ಶನಿವಾರ ರಾತ್ರಿ ಹುಲಿಭೂತ, ರಕ್ತೇಶ್ವರಿ ನೇಮ ನಡೆದು ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ ಜರಗಿತು.