ಪುತ್ತೂರಿನಲ್ಲಿ ಆನೆಗೆ ಮೊದಲ ಬಲಿಯಾದ ವೃದ್ಧೆ: ಪೆರ್ಲಂಪಾಡಿ ಪರಿಸರದಲ್ಲಿ ಭೀತಿಯ ವಾತವಾರಣ

ಪುತ್ತೂರಿನಲ್ಲಿ ಆನೆಗೆ ಮೊದಲ ಬಲಿಯಾದ ವೃದ್ಧೆ: ಪೆರ್ಲಂಪಾಡಿ ಪರಿಸರದಲ್ಲಿ ಭೀತಿಯ ವಾತವಾರಣ


ಪುತ್ತೂರು: ಚುಮುಚುಮು ಮುಂಜಾನೆಯ ಹೊತ್ತಿನಲ್ಲಿ ಬದುಕಿನ ತುತ್ತಿಗಾಗಿ ದುಡಿಮೆ ಮಾಡಲು ಹೊರಟ ಮಹಿಳೆಯೊಬ್ಬರು ಕಾಡಾನೆಯ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಪುತ್ತೂರಿನ ಕೊಳ್ತಿಗೆಯ ಪೆರ್ಲಂಪಾಡಿ ಎಂಬಲ್ಲಿ ಮಂಗಳವಾರ ನಡೆದಿದೆ. ಅರಣ್ಯದಂಚಿನಲ್ಲಿರುವ ಪೆರ್ಲಂಪಾಡಿ ಪ್ರದೇಶದಲ್ಲಿ ಜನವಸತಿ ಪ್ರದೇಶಗಳೂ ಹೆಚ್ಚಾಗಿದ್ದು, ಆನೆಯ ದಾಳಿ ಘಟನೆ ನಡೆದ ಬಳಿಕ ಈ ಭಾಗದಲ್ಲಿ ಇದೀಗ ಭಯದ ವಾತಾವರಣ ನಿರ್ಮಾಣಗೊಂಡಿದೆ.

ಇಲ್ಲಿನ ಕಣಿಯಾರು ಮಲೆ ಅರಣ್ಯದ ಅಂಚಿನಲ್ಲಿರುವ ಹರ್ತ್ಯಡ್ಕ ಸಿಆರ್‌ಸಿ ಕಾಲೊನಿಯ ನಿವಾಸಿ ಸೆಲ್ಲಮ್ಮ (65) ಅವರು ಮೃತಪಟ್ಟ ಮಹಿಳೆ.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ ಕಣಯಾರು ಮಲೆ ರಬ್ಬರ್ ತೋಟದಲ್ಲಿ ಈ ಕಾಡಾನೆ ದಾಳಿ ನಡೆದಿದ್ದು, ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ಕಳೆದ ವರ್ಷವೂ ಕಾಡಾನೆ ದಾಳಿಯಿಂದ ಪ್ರಾಣಹಾನಿಯಾದ ಘಟನೆಗಳು ನಡೆದಿತ್ತು. ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ವೃದ್ಧ ಮಹಿಳೆಯೊಬ್ಬರನ್ನು ಕಾಡಾನೆ ಆಹುತಿ ಪಡೆದುಕೊಂಡಿದೆ.

ಮಂಗಳವಾರ ಮುಂಜಾನೆ ರಬ್ಬರ್ ಪ್ಲಾಂಟೇಶನ್‌ಗೆ ಹೋಗಿದ್ದ ಸೆಲ್ಲಮ್ಮ ಅವರು ಮರಗಳಿಂದ ರಬ್ಬರ್ ಹಾಲು ಸಂಗ್ರಹಿಸುತ್ತಿದ್ದ ಸಂದರ್ಭ ಸುಮಾರು 7.30ರ ಸಮಯದಲ್ಲಿ ಕಾಡಾನೆ ದಾಳಿ ನಡೆಸಿತ್ತು. ಹಾಲು ಸಂಗ್ರಹದಲ್ಲಿಯೇ ಮುಳುಗಿದ್ದ ವೃದ್ಧ ಮಹಿಳೆಗೆ ಆನೆ ಬಂದದ್ದು ತಿಳಿಯಲಿಲ್ಲ. ಆನೆ ಆಕೆಯ ಬೆನ್ನಿನ ಭಾಗಕ್ಕೆ ತುಳಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬದಲಿಗೆ ಬಂದ ವೃದ್ಧೆ

ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕಾರ್ಮಿಕನೊಬ್ಬನ ಬದಲಿಗೆ ಸೆಲ್ಲಮ್ಮ ರಬ್ಬರ್ ಹಾಲು ಸಂಗ್ರಹ ಬಂದಿದ್ದರು. ವೃದ್ಧೆಯಾದ ಕಾರಣ ಆನೆಯಿಂದ ತಪ್ಪಿಸಿಕೊಳ್ಳಲು ಆಕೆಯಿಂದ ಸಾಧ್ಯವಾಗಲಿಲ್ಲ. ಆಕೆಯನ್ನು ಕೊಂದು ಹಾಕುವುದನ್ನು ಕಣ್ಣಾರೆ ಕಂಡ ಕಾರ್ಮಿಕರು ಭಯಭೀತರಾಗಿ ಪ್ಲಾಂಟೇಶನ್ ಬಿಟ್ಟು ಓಡಿದ್ದಾರೆ. ಆನೆಯಿಂದ ಸಾವಿಗೀಡಾದ ಆಕೆಯ ಶವವನ್ನು ಸ್ಥಳದಲ್ಲಿಯೇ ಇಟ್ಟು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬರುವ ತನಕ ಕಾರ್ಮಿಕರು ಹಾಗೂ ಕುಟುಂಬದವರು ಕಾದಿದ್ದು, ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈ ಹಾಗೂ ಅಧಿಕಾರಿಗಳು ಬಂದ ನಂತರವೇ ಅಂತಿಮ ವಿಧಿವಿಧಾನಗಳಿಗೆ ಮುಂದಾದರು. 

ಭಯಭೀತ ಕಾರ್ಮಿಕರು: ಆಕ್ರೋಶ

ಕಳೆದ ಒಂದು ವರ್ಷದಿಂದ ಕಾಡಾನೆಗಳ ಹಿಂಡು ಈ ಪರಿಸರದಲ್ಲಿಯೇ ಓಡಾಡಿಕೊಂಡಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಕಾರ್ಮಿಕರು ಮಾಹಿತಿ ನೀಡಿದ್ದರು. ಆದರೆ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮವಾಗಿ ವೃದ್ಧೆಯೊಬ್ಬರ ಸಾವಿಗೆ ಕಾರಣವಾಗಿದೆ. ಈ ಬಗ್ಗೆ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಪರಿಹಾರ ಹಾಗೂ ಮೃತ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸ ಕೊಡುವಂತೆ ಆಗ್ರಹಿಸಿದ್ದಾರೆ. 

ಮುಂಜಾನೆ 6 ಗಂಟೆಗೆ ತಮ್ಮ ಮನೆಯಿಂದ ಸುಮಾರು 2 ಕಿಲೋಮೀಟರ್ ದೂರದ ರಬ್ಬರ್ ತೋಟಕ್ಕೆ ಕಾಡಿನ ಹಾದಿಯಲ್ಲಿ ನಡೆದು ಬರದು ಕಾರ್ಮಿಕರು ಇದೀಗ ಆನೆಯ ದಾಳಿಯ ಬಳಿಕ ತಮ್ಮ ಕೆಲಸ ನಿರ್ವಹಿಸಲೂ ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಅರಣ್ಯ ಅಧಿಕಾರಿಗಳ ನಿರ್ದೇಶನದಂತೆ ಮುಂದಿನ ಒಂದು ವಾರದ ಕಾಲ ಘಟನೆ ನಡೆದ ರಬ್ಬರ್ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ನಿಲ್ಲಿಸಲಾಗಿದೆ. ಕಾರ್ಮಿಕರು ರಬ್ಬರ್ ತೋಟಕ್ಕೆ ಹೋಗುವ ಮೊದಲು ಅರಣ್ಯ ಸಿಬ್ಬಂದಿಗಳ ತಂಡ ತೋಟದ ವೀಕ್ಷಣೆ ನಡೆಸಿದ ಬಳಿಕವೇ ಕಾರ್ಮಿಕರು ಕೆಲಸ ನಿರ್ವಹಿಸುವುದು. ರಬ್ಬರ್ ಹಾಲು ಸಾಗಿಸಲು ವಾಹನದ ವ್ಯವಸ್ಥೆಯನ್ನು ಕಲ್ಪಿಸಲು ಪುತ್ತೂರು ಶಾಸಕ ಮತ್ತು ಅಧಿಕಾರಿಗಳಿಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಶಾಸಕರು ಕೂಡಾ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಈ ಘಟನೆಯ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article