
ಯುವಕನಿಗೆ ಹಲ್ಲೆ: ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು
ಉಡುಪಿ: ಯುವಕನೋರ್ವನಿಗೆ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಿದ ಆರೋಪದ ಮೇರೆಗೆ ಮಣಿಪಾಲ ಠಾಣೆಯ ಕಾನ್ಸ್ಟೇಬಲ್ ಶರಣಬಸವ ವಿರುದ್ದ ಕರ್ನಾಟಕ ಪೋಲಿಸ್ ಇಲಾಖೆ ಸುಮೊಟೋ ಪ್ರಕರಣ ದಾಖಲಿಸಿದೆ.
ಪ್ರಕರಣದ ವಿವರ
ಮಾ. 27ರಂದು ರಾತ್ರಿ 9 ಗಂಟೆ ಸುಮಾರಿಗೆ ಮಣಿಪಾಲ ಆರ್ಎಸ್ಬಿ ಸಭಾಭವನ ಬಳಿ ಮಣಿಪಾಲ ಠಾಣೆಯ ಸಿಬ್ಬಂದಿಯೊಬ್ಬರು ಮೊಬೈಲ್ ಕಳೆದುಕೊಂಡಿದ್ದಾರೆ ಎಂದು ಆರೋಪಿ ಶರಣಬಸವ ಹಾಗೂ ಇತರ ಸಿಬ್ಬಂದಿ ಹುಡುಕುತ್ತಿದ್ದರು. ಆ ವೇಳೆ ಅಲ್ಲಿಯೇ ನಿಂತಿದ್ದ ಸುಮಂತ್ ಎಂಬಾತನನ್ನು ವಿಚಾರಿಸಿದ್ದರು. ವಿಚಾರಿಸುವ ವೇಳೆ ಸಿಬ್ಬಂದಿ ಶರಣಬಸವ ವಿನಾಕಾರಣ ಸುಮಂತ್ನಿಗೆ ಹಲ್ಲೆ ನಡೆಸಿದ್ದು, ಯುವಕನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿತ್ತು. ನಂತರ ಸ್ಥಳೀಯರು ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥಗೊಳಿಸಿದರು.
ಅದಾದ ಸ್ವಲ್ಪಹೊತ್ತಿನಲ್ಲಿ ಸ್ಥಳೀಯ ಜಿಮ್ನಲ್ಲಿ ಸ್ನೇಹಿತರೊಂದಿಗೆ ಬರ್ತ್ ಡೇ ಆಚರಣೆ ನಡೆಸಿ ವಾಪಸಾಗುತ್ತಿದ್ದ ಯುವಕನನ್ನು ಆರೋಪಿ ಶರಣಬಸವ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಆ ಬಗ್ಗೆ ಅಂದು ರಾತ್ರಿ ದೂರು ನೀಡಲು ಠಾಣೆಗೆ ತೆರಳಿದ ಯುವಕನಿಗೆ ಪಿಎಸ್ಐ ಅನಿಲ್ ಕುಮಾರ್ ಗದರಿಸಿ ಕಳುಹಿಸಿದ್ದರು. ನಂತರ ಎಸ್ಪಿಯವರನ್ನು ಭೇಟಿ ಮಾಡಿ ಪ್ರಕರಣ ಬಗ್ಗೆ ವಿವರಿಸಿದ ಯುವಕನ ಪ್ರಾಥಮಿಕ ಮಾಹಿತಿ ಆಧರಿಸಿ ಸುಮೊಟೋ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.