
ಗಾಂಜಾ ಮಾರಾಟ ಯತ್ನ: ಬಂಧನ
Monday, April 14, 2025
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು 80 ಬಡಗಬೆಟ್ಟು ಗ್ರಾಮದ ತಾಂಗೋಡೆ 2ನೇ ಕ್ರಾಸ್ ಬಳಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಭಟ್ಕಳದ ಗುಲ್ಟಾರ್ ಸ್ಟ್ರೀಟ್ ನಿವಾಸಿ ಆರೀಬ್ ಅಹಮ್ಮದ್ (31) ಎಂದು ಗುರುತಿಸಲಾಗಿದೆ.
ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಉಡುಪಿಯ ಸೆನ್ ಪೊಲೀಸ್ ಠಾಣೆಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಮಣಿಪಾಲ ಸಮೀಪದ 80 ಬಡಗಬೆಟ್ಟು ಗ್ರಾಮದ ತಾಂಗೋಡೆ 2ನೇ ಕ್ರಾಸ್ ಬಳಿ ಆರೋಪಿ ಆರೀಬ್ ಅಹಮ್ಮದ್ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದ್ದು ತಪಾಸಣೆ ನಡೆಸಿದ ವೇಳೆ ಆತನ ಬಳಿ ಇದ್ದ ಚೀಲದಲ್ಲಿ ಗಾಂಜಾ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆಂಧ್ರ ಪ್ರದೇಶದ ವಿಜಯವಾಡದಿಂದ ಗಾಂಜಾ ಖರೀದಿಸಿರುವುದಾಗಿ ಆತ ಹೇಳಿಕೊಂಡಿದ್ದು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. 5 ಲಕ್ಷ 75 ಸಾವಿರ ರೂ. ಮೌಲ್ಯದ 7.304 ಕಿ.ಗ್ರಾಂ. ತೂಕದ ಗಾಂಜಾ, ಎರಡು ಮೊಬೈಲ್ ಸೇರಿದಂತೆ ಒಟ್ಟು 5,96,520 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.