
ದುಷ್ಟ ಶಕ್ತಿಗಳ ನಾಶಕ್ಕೆ ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ: ಚಕ್ರವರ್ತಿ ಸೂಲಿಬೆಲೆ
ಉಜಿರೆ: ಧರ್ಮಕ್ಕೆ ಆಘಾತವಾದಾಗ ಯಾರು ಸುಮ್ಮನಿರುತ್ತಾರೋ ಅವರು ಧರ್ಮದ್ರೋಹಿಗಳು. ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದಾಗ ಹಿಂದೂ ಸಮಾಜ ಎದುರಿಸಲು ಸದಾ ಸಿದ್ಧವಾಗಿರಬೇಕು. ಯುವ ಜನಾಂಗ ಮಲಗಿದ್ದಾಗ ಕುಂಭಕರ್ಣನಾದರೆ, ಎದ್ದಾಗ ದುಷ್ಟ ಶಕ್ತಿಗಳ ನಾಶಕ್ಕೆ ಹನುಮನಾಗಿ ಕೆಚ್ಚೆದೆಯಿಂದ ಎದುರಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಸಮಾಜವನ್ನು ವಿಸ್ತರಿಸುವ ಕೆಲಸ ಆಗಬೇಕಾಗಿದೆ. ಅದಕ್ಕಾಗಿ ಸರಕಾರವೇ ನೀಡಿದ ಮತಾಂತರದ ಕಾನೂನನ್ನು ಸಮರ್ಥವಾಗಿ ಸದುಪಯೋಗಿಸಿಕೊಂಡು ಧರ್ಮದ ರಕ್ಷಣೆಗೆ ಕಟಿಬದ್ಧರಾಗಬೇಕು ಎಂದು ಯುವ ಬ್ರಿಗೇಡ್ ನಾಯಕ, ಧಾರ್ಮಿಕ, ಸಾಮಾಜಿಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಏ.20 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ವತಿಯಿಂದ ನಡೆದ ಶ್ರೀರಾಮೋತ್ಸವದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸನಾತನ ಧರ್ಮವೆಂಬುದು ಕೇವಲ ಪ್ರಾಚೀನವಾದುದಷ್ಟೇ ಅಲ್ಲ, ಜಗತ್ತಿನ ಅತಿ ಹಳೆಯ ಹಾಗೂ ಇಂದಿನವರೆಗೆ ಜೀವಂತವಿರುವ ಏಕೈಕ ಧರ್ಮವಾಗಿದೆ. ಹೀಗಾಗಿ ಹಿಂದು ಧರ್ಮದ ತಂಟೆಗೆ ಬಂದರೆ ಅದಕ್ಕೆ ಸದಾ ಉತ್ತರಿಸಲು ಸಿದ್ಧವಾಗಬೇಕಾಗಿದೆ ಎಂದರು.
ಮಹಮದ್ ಬಿನ್ ಕಾಸಿಂನಂತೆ ಜಾತಿಯನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಂಡು ಆಳುವವರು ಇಂದಿಗೂ ನಮ್ಮನಡುವೆ ಇದ್ದಾರೆ ಎಂದು ಎಚ್ಚರಿಸಿದ ಅವರು ಬಿಂದು ಬಿಂದು ಸೇರಿ ಒಂದಾಗುವಂತೆ ಹಿಂದುಗಳು ಒಟ್ಟಾಗಿ ಎದುರಿಸುವ ಕಾಲ ಬಂದಿದೆ. ನಾವು ಬಂಗಾಲದ ಗೋಪಾಲ ಮುಖರ್ಜಿಯ ಏಕಾಂಗಿ ಹೋರಾಟದ ಆದರ್ಶ ಅನುಸರಿಸುವ ಸಂದರ್ಭ ಒದಗಿ ಬಂದಿದೆ ಎಂದರು. ಗಂಗೆ, ಸರಯೂ ಸ್ವಚ್ಛವಾದಾಗ ಕಾಶಿ ವಿಶ್ವನಾಥನ, ಅಯೋಧ್ಯೆಯ ರಾಮನ ಮಂದಿರ ಎದ್ದು ನಿಂತಿತು. ಅದೇ ರೀತಿ ಯಮುನೆ ನದಿ ಸ್ಛಚ್ಛವಾಗುವ ಕಾಲ ಸನ್ನಿಹಿತವಾಗಿದೆ. ಮಥುರೆಯಲ್ಲಿ ಶ್ರೀ ಕೃಷ್ಣನ ಭವ್ಯ ಮಂದಿರ ನೋಡುವ ಭಾಗ್ಯ ನಮಗೆ ಒದಗಿ ಬರಲಿದೆ ಎಂದು ಆಶಿಸಿದರು.
ಹಿಂದೂಗಳ ಜನ ಸಂಖ್ಯೆ ಕಡಿಮೆಯಾದಂತೆ ದೇಶದ ಮೂಲ ಸತ್ವ ಕಡಿಮೆಯಾಗುತ್ತದೆ. ಹೀಗಾಗಿ ಹಿಂದೂಗಳು ಜನ ಸಂಖ್ಯೆಯನ್ನು, ಹಿಂದೂ ಸಮಾಜವನ್ನು ವಿಸ್ತಾರಗೊಳಿಸಲು ಸರಕಾರ ನೀಡಿರುವ ಮತಾಂತರ ಕಾಯಿದೆಯನ್ನು ಅಸ್ತ್ರವನ್ನಾಗಿ ಸಮರ್ಥವಾಗಿ ಬಳಸಿಕೊಳ್ಳಬೇಕಾಗಿದೆ. ಸಮಾಜದ ವಿವಿಧ ಜಾತಿಯ ಸ್ವಾಮೀಜಿಗಳು, ಮುಖಂಡರುಗಳು ಹಿಂದೂ ಧರ್ಮದ ವಿಶೇಷತೆಗಳನ್ನು, ಶ್ರೇಷ್ಠತೆಗಳನ್ನು ಮನವರಿಕೆ ಮಾಡಿ ಇತರರನ್ನು ಒಲಿಸಿ ಹಿಂದೂ ಧರ್ಮಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ನಮ್ಮ ಹೃದಯ ವಿಶಾಲವಾಗಬೇಕು ಎಂದ ಅವರು ಬಜರಂಗದಳದ ಈ ಯೋಜನೆಯನ್ನು ಎಲ್ಲರೂ ಬೆಂಬಲಿಸುವಂತೆ ಮನವಿ ಮಾಡಿದರು.
ಹಿಂದೂಗಳ ವಿರುದ್ಧ ಮಾತನಾಡುವವರ ಬಗ್ಗೆ ಎಚ್ಚರವಾಗಿರಬೇಕು. ಕತ್ತಲೆ ಬಳಿಕ ಬೆಳಕು ಬರುವಂತೆ ಕಷ್ಟ, ದುಃಖ ನೋವಿನ ಬಳಿಕ ಸುಖ, ನೆಮ್ಮದಿ ಬಂದೇ ಬರುತ್ತದೆ. ಯೋಗಿ ಆದಿತ್ಯನಾಥರಿಂದ ನಮಗೆಲ್ಲ ಕುಂಭಮೇಳದ ಭಾಗ್ಯ, ಪುಣ್ಯ ಪ್ರಾಪ್ತಿಯಾಗಿದೆ. ಅಧರ್ಮ ತಾಂಡವವಾಡಿದಾಗ ರಾಮ ಅಧರ್ಮವನ್ನು ದ್ವಂಸ ಮಾಡಿ ಧರ್ಮ ಸಂಸ್ಥಾಪನೆ ಮಾಡಿದ. ರಾಮ ಹಿಂದುತ್ವವನ್ನು ಜಗದ್ವ್ಯಾಪಿಗೊಳಿಸಿದ್ದಾನೆ. ಸೇವೆ ಮಾಡುವ ಸಮಾಜ, ದೇಶವನ್ನು ವಿಸ್ತಾರ ಮಾಡೋಣ. ಜಗತ್ತಿನಲ್ಲಿ ಕಣ್ಣು ಕುಕ್ಕುವಂತೆ ಭವ್ಯ ಭಾರತವನ್ನು ನಿರ್ಮಿಸಲು ನಾವೆಲ್ಲ ಸನ್ನದ್ಧರಾಗೋಣ. ನಮ್ಮ ನಾಡನ್ನು ರಕ್ಷಿಸುವ ಕಾಲ ಇದೀಗ ಕೂಡಿ ಬಂದಿದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ವಿಷ್ಣು ಮರಾಠೆ ಅಧ್ಯಕ್ಷತೆ ವಹಿಸಿದ್ದರು. ವಿ.ಹಿಂ.ಪ.ದ ವಿಭಾಗ ಕಾರ್ಯದರ್ಶಿ ದೇವಿಪ್ರಸಾದ ಶೆಟ್ಟಿ ಪ್ರಸ್ತಾವಿಸಿದರು. ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಬಜರಂಗ ದಳ ಸಹಸಂಯೋಜಕ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು. ಸಂತೋಷ್ ಅತ್ತಾಜೆ ಸ್ವಾಗತಿಸಿ, ರಮೇಶ್ ಧರ್ಮಸ್ಥಳ ವಂದಿಸಿದರು.
ಸಂಜೆ ಶ್ರೀ ಶಾರದಾ ಮಂಟಪದಲ್ಲಿ ವೈದಿಕರಿಂದ ಹನುಮಯಾಗ ನಡೆಯಿತು. ಸಭಾ ಕಾರ್ಯಕ್ರಮದ ಮೊದಲು ರಂಜಿತ್ ಉಪ್ಪಳ ಅವರಿಂದ ಜೈ ಜೈ ಹನುಮಾನ್, ಮುರುಗ ಹರೋಹರ ಗೀತೆ, ಹಿಪ್ ಬಾಯ್ಸ್ ಕ್ರೂ ತಂಡದಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ನಡೆಯಿತು. ಉಜಿರೆಯ ಮುಖ್ಯ ವೃತ್ತದಿಂದ ಕಾರ್ಯಕರ್ತರ ಮೆರವಣಿಗೆ ನಡೆಯಿತು.
ವೇದಿಕೆಯಲ್ಲಿ ರಾಮ, ಸೀತೆ, ಲಕ್ಷ್ಮಣ ಪುಟಾಣಿ ಪಾತ್ರಧಾರಿಗಳು ಗಮನ ಸೆಳೆದರು. ಸಭಾಕಾರ್ಯಕ್ರಮದ ಬಳಿಕ ದಶ ಕಂಠ ರಾವಣನ ಪ್ರತಿಕೃತಿ ದಹನ ನಡೆಯಿತು.