ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಗೊಳಿಸಲ್ಲ ಎಂದು ಮುಖ್ಯಮಂತ್ರಿ  ಟಗರು ಧ್ವನಿಯಲ್ಲಿ ಘೋಷಿಸಲಿ: ಹಾಜಿ ಅಬ್ದುಲ್ ರಶೀದ್

ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ಗೊಳಿಸಲ್ಲ ಎಂದು ಮುಖ್ಯಮಂತ್ರಿ ಟಗರು ಧ್ವನಿಯಲ್ಲಿ ಘೋಷಿಸಲಿ: ಹಾಜಿ ಅಬ್ದುಲ್ ರಶೀದ್


ಉಳ್ಳಾಲ: ಕೇಂದ್ರ ಸರ್ಕಾರ ಹಲವಾರು ಮುಸ್ಲಿಂ ವಿರೋಧಿ ಕಾಯಿದೆಗಳನ್ನು ಜಾರಿಗೆ ತಂದು ಮುಸ್ಲಿಮರ ಮನಸನ್ನು ಘಾಸಿ ಗೊಳಿಸುವ ಕೆಲಸ ನಡೆಯುತ್ತಾ ಇದೆ. ಇತ್ತೀಚೆಗೆ ವಕ್ಫ್ ತಿದ್ದುಪಡಿ ಮಸೂದೆ ಜಾರಿ ಮಾಡಿ ಕೇಂದ್ರ ಸರ್ಕಾರ ಮುಸ್ಲಿಮರ ಮನಸನ್ನು ಘಾಸಿಗೊಳಿಸಿ ಅಲ್ಪಸಂಖ್ಯಾತರ ಸೊತ್ತುಗಳನ್ನು ಕಬಳಿಸುವ ಜಾಯಮಾನ ನಡೆಯುತ್ತಿದೆ ಎಂದು ದರ್ಗಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.

ಅವರು ತೊಕ್ಕೊಟ್ಟು ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರ ಸೊತ್ತುಗಳನ್ನು ಒಳಗೊಂಡಿರುವ ವಕ್ಫ್ ಮಂಡಳಿಗೆ ಮುಸ್ಲಿಮರನ್ನು ನೇಮಕ ಮಾಡುವ ಬದಲು ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಿಸಿ ಕಲಹ ಬರುವ ರೀತಿಯಲ್ಲಿ ಮಾಡಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧೆಡೆ ಹೋರಾಟ ನಡೆಯುತ್ತಿದೆ. ಎ.18 ರಂದು ಸಂಜೆ ಅಡ್ಯಾರ್ ಕಣ್ಣೂರು ಶಾ ಗಾರ್ಡನ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ನಡೆಯಲಿದೆ. ಇದರಲ್ಲಿ ಎಲ್ಲಾ ಮುಸ್ಲಿಂ ಸಮುದಾಯದ ಜನರು ಭಾಗವಹಿಸುವ ಮೂಲಕ ಕೇಂದ್ರ ಸರ್ಕಾರವನ್ನು ಎಚ್ಚರ ಗೊಳಿಸಬೇಕು ಎಂದು ಕರೆ ನೀಡಿದರು.

ವಕ್ಫ್ ಎನ್ನುವುದು ಪ್ರವಾದಿಯವರ ಕಾಲದಲ್ಲೇ ಇತ್ತು. ವಕ್ಫ್ ಸೊತ್ತುಗಳು ಸರ್ಕಾರದಲ್ಲ, ಅಲ್ಲಾಹನದ್ದಾಗಿದೆ. ಕರ್ನಾಟಕದಲ್ಲಿ ವಕ್ಫ್ ಸೊತ್ತುಗಳು ಬಹಳಷ್ಟಿವೆ. ಆದರೆ ಅದರ ಯಜಮಾನರು ಕಾಳಜಿ ವಹಿಸದ ಕಾರಣ ಪಾಳು ಭೂಮಿ ಆಗಿ ಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕ ಸರ್ಕಾರ ಹಜ್ ಭವನ ಮಾಡಲು ತೀರ್ಮಾನಿಸಿ ಸರ್ಕಾರಿ ಜಾಗ ಹುಡುಕಿದರೂ ಸಿಗಲಿಲ್ಲ. ಕರ್ನಾಟಕ ಸರ್ಕಾರ ೨೦ ಕೋಟಿ ಮೀಸಲಿಟ್ಟರೂ ಜಾಗ ಸಿಗದ ವೇಳೆ ಇನಾಯತ್ ಅಲಿ ಅವರು ಬಜ್ಪೆಯಲ್ಲಿ ಹಜ್ ಭವನಕ್ಕೆ ಒಂದು ಎಕರೆ ಜಮೀನು ವಕ್ಫ್ ಮಾಡಿದ್ದು ನಮಗೆ ಗೊತ್ತಿದೆ. ಇದೇ ರೀತಿ ಹಿರಿಯರು ಕೂಡ ಮುಸ್ಲಿಮರ ಅಭಿವೃದ್ಧಿ ದೃಷ್ಟಿಯಿಂದ ಬೇರೆ ಬೇರೆ ಕಡೆ ಜಾಗ ವಕ್ಫ್ ಮಾಡಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಕ್ಫ್ ತಿದ್ದುಪಡಿ ಕಾಯ್ದೆ ಸಂಬಂಧಿಸಿದಂತೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡರೆ ಸಾಕಾಗದು. ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಘೋಷಣೆ ಮಾಡಿದಂತೆ ದಿಟ್ಟ ಧೀರತನದ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಕ್ಫ್ ತಿದ್ದುಪಡಿ ಕಾಯ್ದೆ ತಿರಸ್ಕರಿಸುವುದಾಗಿ ಟಗರು ಧ್ವನಿಯಲ್ಲಿ ಘೋಷಣೆ ಮಾಡಬೇಕು ಎಂದು ಸವಾಲೆಸೆದರು.

ವಕ್ಫ್ ಆಸ್ತಿ ಯಾರಿಂದಲೂ ಕಸಿದಿರುವಂತಹದಲ್ಲ. ಇದು ಪೂರ್ವಜರು ಸಮುದಾಯದ ಅಭಿವೃದ್ಧಿಗಾಗಿ ನೀಡಿದ ಕೊಡುಗೆ. ಕಸಿದ ಆಸ್ತಿ ವಕ್ಫ್ ಆಗುವುದಿಲ್ಲ. ಇದಕ್ಕೆ ಇಸ್ಲಾಮಿನಲ್ಲಿ ಅವಕಾಶ ಇಲ್ಲ ಎಂದರು.

ಆರಂಭದಿಂದಲೂ ಮುಸ್ಲಿಂ ವಿರುದ್ಧ ಕಾನೂನು ಜಾರಿಗೆ ತರುವಲ್ಲಿ ಅತ್ಯುತ್ಸಾಹ ತೋರುತ್ತಾ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎನ್‌ಆರ್‌ಸಿ, ಸಿಎಎ ಜಾರಿಗೆ ತರಲು ಮುಂದಾಗಿತ್ತು. ಬಳಿಕ ತ್ರಿಬಲ್ ತಲಾಕ್ ಕಾನೂನು ಜಾರಿ ಮಾಡಿತು. ಈಗ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕನೂ ಕೂಡ ವಿರೋಧಿಸಬೇಕು ಎಂದು ಹೇಳಿದರು.

ಉಳ್ಳಾಲ ಉರೂಸ್ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಉಳ್ಳಾಲ ದರ್ಗಾ ಉರೂಸ್ ಎ.24 ರಿಂದ ಆರಂಭವಾಗಲಿದ್ದು, ಈ ಬಾರಿ ಮೂರು ವರ್ಷ ದ ಬಳಿಕ ನಡೆಯುತ್ತಿದೆ. ಈಗಿನ ಆಡಳಿತ ಮಂಡಳಿಗೆ ವಕ್ಫ್ ನಿಯಮ ಪ್ರಕಾರ ಮೂರು ವರ್ಷಗಳ ಅಧಿಕಾರಾವಧಿ ಇದೆ. ಈ ಅವಧಿಯಲ್ಲಿ ಅವರು ಉತ್ಸಾಹದಿಂದ ಉರೂಸ್ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ದರ್ಗಾ ಮಾಜಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ ಹಾಜಿ, ಸದಸ್ಯ ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article