
ಉಳ್ಳಾಲದಲ್ಲಿ ಸುದೀರ್ಘವಾಗಿ ಗೆಲುವು ಸಾಧಿಸಿದವರು ಜನರ ಬದುಕನ್ನು ಸೋಲಿಸಿದ್ದಾರೆ: ಸಂತೋಷ್ ಬಜಾಲ್
ಉಳ್ಳಾಲ: ಇತಿಹಾಸ ಪ್ರಸಿದ್ಧ ಉಳ್ಳಾಲ ಯಾವ ಹಂತಕ್ಕೆ ಅಭಿವೃದ್ಧಿಗೊಳ್ಳಬೇಕಿತ್ತು ಆದರೆ ಯಾವುದೇ ಅಭಿವೃದ್ಧಿ ಕಾಣದೆ ಇಂತಹ ಪರಿಸ್ಥಿತಿಗೆ ತಂದಿಡಲು ಯಾರು ಕಾರಣ. ಉಳ್ಳಾಲದಲ್ಲಿ ಜನಪ್ರತಿನಿಧಿಯೊಬ್ಬರು ಸುದೀರ್ಘವಾಗಿ ಗೆಲ್ಲುತ್ತಾ ಬರುತ್ತಿದ್ದರೂ ಇಲ್ಲಿನ ಜನರ ಬದುಕಿನ ಪ್ರಶ್ನೆ ಮಾತ್ರ ಸೋಲುತ್ತಾ ಬಂದಿದೆ ಎಂದು CPIM ಜಿಲ್ಲಾ ಯುವ ನಾಯಕರಾದ ಸಂತೋಷ್ ಬಜಾಲ್ ಅವರು ಹೇಳಿದರು.
ಅವರು CPIM ನೇತೃತ್ವದಲ್ಲಿ ಉಳ್ಳಾಲ ತಾಲೂಕಿನಾದ್ಯಂತ ಜರುಗಿದ ಎರಡು ದಿನಗಳ ವಾಹನ ಪ್ರಚಾರ ಜಾಥಾವನ್ನು ತೊಕ್ಕೋಟುನಲ್ಲಿ ಸಮಾರೋಪಗೊಳಿಸುತ್ತಾ ಈ ಮಾತುಗಳನ್ನು ಹೇಳಿದರು. ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಎಪ್ರಿಲ್ 29ರಂದು ನಡೆಯಲಿರುವ ಹಕ್ಕೊತ್ತಾಯ ಸಮಾವೇಶದ ಸಂದೇಶವನ್ನು ಸಾರಲು ಈ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
1962 ರಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ಉಳ್ಳಾಲದಲ್ಲಿ ಶಾಸಕರಾಗಿ ಆಯ್ಕೆಯಾದ ಕೃಷ್ಣ ಶೆಟ್ಟಿ ಆ ಕಾಲಕ್ಕೆ ಭೂಮಾಲಕರ ವಿರುದ್ಧ ಗೇಣಿದಾರರ ಪರವಾಗಿ ಗಟ್ಟಿಯಾಗಿ ನಿಂತು ಬಡ ರೈತರಿಗೆ ಭೂಮಿಯ ಹಕ್ಕನ್ನು ಒದಗಿಸಿಕೊಟ್ಟ ಜನನಾಯಕ. ಮುಂದೆ 1983 ರಲ್ಲಿ ಸಿಪಿಐಎಂ ಶಾಸಕರಾಗಿ ಆಯ್ಕೆಯಾದ ಮೇಷ್ಟ್ರು ರಾಮಚಂದ್ರ ರಾವ್ ಹಲವು ಜನಪರ ಯೋಜನೆಗಳನ್ನು ತಂದವರು. ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಕಾನೂನು ಜಾರಿಗೊಳಿಸಿದವರು. ಸದ್ಯ ಚುನಾವಣೆಯಲ್ಲಿ ಹಣವು ಹೊಳೆಯಾಗಿ ಹರಿದು ವ್ಯಾಪಾರಿ ಹಿತಾಸಕ್ತಿಗಳೇ ಮೇಲುಗೈ ಸಾಧಿಸಿದಾಗ ಜನರ ಬವಣೆಗಳು, ಬದುಕಿನ ಪ್ರಶ್ನೆಗಳು ನೇಪತ್ಯೆಕ್ಕೆ ಸರಿದವು ಅಭಿವೃದ್ಧಿ ಕುಂಟಿತವಾದವು. ಸಿಪಿಐಎಂ ಮಾತ್ರ ತನ್ನ ಆಶಯದಿಂದ ಹಿಂದೆ ಸರಿದಿಲ್ಲ ಜನರ ಬದುಕಿನ ಪ್ರಶ್ನೆಗಳನ್ನು, ಉಳ್ಳಾಲದ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟು ನಿರಂತರ ಹೋರಾಟದ ಕಣದಲ್ಲಿದೆ. ಶಿಕ್ಷಣ ಉದ್ಯೋಗ ಆರೋಗ್ಯದ ಹಕ್ಕುಗಳ ಸಹಿತ ಹಲವು ಮೂಲಭೂತ ಸೌಕರ್ಯಗಳ ಒತ್ತಾಯಕ್ಕೆ ನಡೆಯುವ ಹೋರಾಟವನ್ನು ಉಳ್ಳಾಲದ ಜನತೆ ಬೆಂಬಲಿಸಬೇಕಾಗಿದೆ ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಾಥಾ ತಂಡದ ನಾಯಕರೂ, CPIM ಉಳ್ಳಾಲ ವಲಯ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್ ಅವರು, ಎರಡು ದಿನಗಳಲ್ಲಿ 28 ಕಡೆಗಳಲ್ಲಿ ಜಾಥಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿಗೊಂದು ಇರಬೇಕಾದ ಮೂಲಭೂತ ಸೌಕರ್ಯಗಳು ಯಾವುದೂ ಕೂಡ ಉಳ್ಳಾಲದಲ್ಲಿಲ್ಲದೆ ಜನತೆ ಪರದಾಡಬೇಕಾದ ಪ್ರಸಂಗ ಒದಗಿ ಬಂದಿದೆ. ಶಿಕ್ಷಣ ಉದ್ಯೋಗ ಆರೋಗ್ಯ ಉಳ್ಳವರ ಸೊತ್ತಾಗಿದೆಯೇ ಹೊರತು ಬಡವರಿಗಾಗಿ ಯಾವುದೇ ಸೌಕರ್ಯ ಗಳಿಲ್ಲ. ಇದರಿಂದಾಗಿ ಜನತೆ ರೋಸಿಹೋಗಿದ್ದು,ಆ ಮೂಲಕ ಜನತೆಯ ಧ್ವನಿಯಾಗಲಿರುವ ಎಪ್ರಿಲ್ 29ರಂದು ಎಲ್ಲಾ ವಿಭಾಗದ ಜನತೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ CPIM ಜಿಲ್ಲಾ ನಾಯಕರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್, ಜಯಂತಿ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ರಫೀಕ್ ಹರೇಕಳ, ಶೇಖರ್ ಕುಂದರ್, ಉಳ್ಳಾಲ ವಲಯ ಮುಖಂಡರಾದ ಪ್ರಮೋದಿನಿ, ವಿಲಾಸಿನಿ, ರೋಹಿದಾಸ್, ಸುಂದರ ಕುಂಪಲ, ಪದ್ಮಾವತಿ ಶೆಟ್ಟಿ, ನವೀನ್ ಗಿರಿಯಮೂಲೆ, ಮುಡಿಪು ವಲಯದ ನಾಯಕರಾದ ರಿಜ್ವಾನ್ ಹರೇಕಳ, ರಜಾಕ್ ಮುಡಿಪು, ಇಕ್ಬಾಲ್ ಹರೇಕಳ, ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ್ ಅಡ್ಯಂತಾಯ, ವಿವಿಧ ಸಂಘಟನೆಗಳ ಮುಖಂಡರಾದ ರಮೇಶ್ ಉಳ್ಳಾಲ, ಯು.ಬಿ. ನಾರಾಯಣ, ಅನ್ಸಾರ್ ಫೈಸಲನಗರ, ಮುಸ್ತಾಫ ಮತ್ತಿತರರು ಉಪಸ್ಥಿತರಿದ್ದರು.