
ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಗೂಂಡಾಗಿರಿ: ಸೂಕ್ತ ನಿರ್ದೇಶನಕ್ಕೆ ಕೇಂದ್ರಗೃಹ ಸಚಿವರಿಗೆ ಪತ್ರ
ಬಂಟ್ವಾಳ: ಕರ್ನಾಟಕದಲ್ಲಿ ಕಾಂಗ್ರೆಸ್ ಬೆಂಬಲಿಗರ ಗೂಂಡಾಗಿರಿಯಿಂದಾಗಿ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ವಿರೋಧ ಪಕ್ಷದ ನಾಯಕರಿಗೆ ರಕ್ಷಣೆ ಇಲ್ಲದಂತಾಗಿರುವ ಹಿನ್ನಲೆಯಲ್ಲಿ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಬಿಜೆಪಿ ಬಂಟ್ವಾಳ ಮಂಡಲದ ಕಾರ್ಯದರ್ಶಿ ಪ್ರಭಾಕರಪ್ರಭು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೆಟ್ಟ, ಅವಾಚ್ಯ ಪದಗಳಿಂದ ನಿಂದಿಸುವ ಕಾಂಗ್ರೆಸ್ ಮುಖಂಡ, ರಾಜ್ಯದ ಸಚಿವ ಪ್ರಿಯಾಂಕ ಖರ್ಗೆಯವರನ್ನು ಉಲ್ಲೇಖಿಸಿ ವಿಧಾನ ಪರಿಷತ್ತಿನ ವಿಪಕ್ಷ ನಾಯಕ, ಪ.ಜಾತಿ ಸಮುದಾಯಗಳ ಪ್ರಬಲ ಮುಖಂಡರಾದ ಛಲವಾದಿ ನಾರಾಯಣ ಸ್ವಾಮಿಯವರು ಆಡಿದ ವ್ಯಂಗ್ಯದ ಗಾದೆಯ ಮಾತುಗಳಿಗೆ ಪ್ರತೀಕಾರವಾಗಿ ಸಚಿವರ ಬೆಂಬಲಿಗರು ವಿಪಕ್ಷ ನಾಯಕರಿಗೆ ಹಲ್ಲೆಗೆ ಮುಂದಾಗಿದ್ದಲ್ಲದೆ ಅತಿಥಿಗೃಹದಲ್ಲಿ ದಿಗ್ಬಂದನಕ್ಕೆ ಒಳಪಡಿಸಿರುವುದು ಖಂಡನೀಯವಾಗಿದ್ದು, ಈ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಕೆಟ್ಟ, ಕ್ರೂರಿತನದ ಘಟನೆಯಾಗಿದ್ದು, ಕರ್ನಾಟಕದ ರಾಜಕಾರಣಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ಒಬ್ಬರಿಗೊಬ್ಬರು ಟೀಕೆ, ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗಿದೆ.ಆದರೆ ಒಬ್ಬರ ಆರೋಪಕ್ಕೆ ದ್ವೇಷ ಸಾಧಿಸುವುದರಿಂದ ಆ ರಾಜಕೀಯ ನಾಯಕನ ದುರಾಹಂಕಾರದ ಮತ್ತು ಹೇಡಿತನದ ಸ್ವಭಾವ ಪ್ರಕಟಗೊಂಡಿರುತ್ತದೆ ಎಂದು ಪ್ರಭು ಮನವಿಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅದೆಷ್ಟೋ ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ಹೀನಾಯವಾಗಿ ನಿಂದಿಸಿರುವುದು, ಆರೋಪ ಹೋರಿಸಿರುವುದು ಪ್ರಜ್ಞಾವಂತ ನಾಗರಿಕರಿಗೆ ತಿಳಿದಿರುವ ವಿಚಾರವಾಗಿದೆ. ಟೀಕೆಗಳಿಗೆ ಪ್ರತಿ ಟೀಕೆ ಹಾಗೂ ಆರೋಪಗಳಿಗೆ ಪ್ರತ್ಯಾರೋಪಗಳಿಂದ ಉತ್ತರ ಕೊಡಬೇಕೇ ಹೊರತು ಈ ರೀತಿಯಾಗಿ ಬೆದರಿಸುವ ಕ್ರಮ ಯೋಗ್ಯ ರಾಜಕಾರಣಿಗಳ ಲಕ್ಷಣವಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ವಿರೋಧ ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಂದ ಕಿರುಕುಳ ಮತ್ತು ಅನಾವಶ್ಯಕವಾಗಿ ದೂರು ದಾಖಲಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಕರಣಗಳು ಕಂಡುಬಂದಿರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿರೋಧ ಪಕ್ಷದ ನಾಯಕರು ಹಾಗೂ ಶಾಸಕರಿಗೆ ಪೊಲೀಸ್ ರಕ್ಷಣೆ ಇಲ್ಲದಿದ್ದಾಗ ಜನಸಾಮಾನ್ಯರ ಗತಿ ಯಾವ ದಿಕ್ಕಿನತ್ತ ಸಾಗಬಹುದು ಎಂಬ ಆತಂಕ ಜನಸಾಮಾನ್ಯರಲ್ಲಿ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಜ್ಯದಲ್ಲಿರುವ ಸರ್ವ ಪಕ್ಷದ ನಾಯಕರು, ಶಾಸಕರು ಮತ್ತು ಜನಸಾಮಾನ್ಯರಿಗೆ ಅನಾವಶ್ಯಕವಾಗಿ ಕಿರುಕುಳ ಹಾಗೂ ಪ್ರಕರಣಗಳನ್ನು ದಾಖಲಿಸುವುದನ್ನು ತಪ್ಪಿಸಿ ಪೊಲೀಸ್ ಇಲಾಖೆಯ ಘನತೆ, ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಪ್ರಭಾಕರ ಪ್ರಭು ಆಗ್ರಹಿಸಿದ್ದಾರೆ.