ಬಂಟ್ವಾಳ ವ್ಯಾಪಕ ಮಳೆ: ಅಪಾರ ಹಾನಿ

ಬಂಟ್ವಾಳ ವ್ಯಾಪಕ ಮಳೆ: ಅಪಾರ ಹಾನಿ


ಬಂಟ್ವಾಳ: ಕಳೆದೆರಡು ದಿನಗಳಿಂದ ಗಾಳಿ, ಮಳೆಗೆ ಬಂಟ್ವಾಳ ತಾಲೂಕಿನಾದ್ಯಂತ ವ್ಯಾಪಕ ಹಾನಿಯಾಗಿದೆ.


ಕಾವಳ ಪಡೂರು ಗ್ರಾಮದ ಕೈಲಾರು ಎಂಬಲ್ಲಿ ಅಬೂಬಕ್ಕರ್ ಸಿದ್ದಿಕ್ ಹಾಗೂ ಅಶ್ರಫ್ ರವರ ಮನೆಯ ಪಕ್ಕದ ಆವರಣ ಗೋಡೆ ಕುಸಿದು ಬಿದ್ದಿದ್ದು ಯಾವುದೇ ಹಾನಿಯಾಗಿರುವುದಿಲ್ಲ.


ಕಳ್ಳಿಗೆ ಗ್ರಾಮದ ಜೂಲಿಯನ ಪಿಂಟೋ ಎಂಬವರ ಮನೆಗೆ ಮರ ಬಿದ್ದು ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪಂಜಿಕಲ್ಲು ಗ್ರಾಮದ ಪುಂಚೋಡಿ ಎಂಬಲ್ಲಿ ರಮೇಶ ಎಂಬವರ ಮನೆಯ ಬದಿಯಲ್ಲಿರುವ ಗುಡ್ಡ ಜರಿದು ಬಿದ್ದಿದ್ದು, ಮನೆಗೆ ಯಾವುದೇ ಹಾನಿ ಉಂಟಾಗಿಲ್ಲ. ಅದೇ ಗ್ರಾಮದ ಕೆಳಗಿನ ಪಂಜಿಕಲ್ಲು ಎಂಬಲ್ಲಿ ಭಾಗ್ಯ ಎಂಬವರ ಮನೆಯ ಕಂಪೌಂಡ್ ಕುಸಿದು ಬಿದ್ದಿದೆ. ಬಿ.ಮೂಡ ಗ್ರಾಮದ ಗಂಗಾಧರ ಎಂಬವರ ಮನೆಯ ಮೇಲೆ ಮರ ಬಿದ್ದಿದ್ದು ಆಂಶಿಕವಾಗಿ ಹಾನಿಯಾಗಿದ್ದು,ಸುದ್ದಿತಿಳಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿದರು.


ಮಂಚಿ ಗ್ರಾಮದ ಕುಕ್ಕಾಜೆ ಪತ್ತುಮುಡಿ ಹನೀಫ್ ಎಂಬವರ ಮನೆ ಬದಿ ಕಾಂಪೌಂಡ್ ಕುಸಿದು ಬಿದ್ದರೆ, ಅಮ್ಮುಂಜೆ ಗ್ರಾಮದ ಸುಮಲತಾ ಎಂಬವರ ಮನೆಪಕ್ಕದ ತಡೆಗೋಡೆ ಕುಸಿದು ಮನೆಯ ಅಡಿಪಾಯ ಭಾಗಶಃ ಹಾನಿಯಾಗಿದೆ. ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ಯಾರಿ ವಾಸ್ತವ್ಯವಿಲ್ಲದ ಮನೆಯ ತಡೆಗೋಡೆ ಕುಸಿದಿದೆ.


ಶನಿವಾರ ಬೆಳಗ್ಗಿನಿಂದಲೂ ಬಿರುಸಾದ ಮಳೆ, ಗಾಳಿ ಬೀಸಿದ್ದರೂ, ನೇತ್ರಾವತಿ ನದಿಯಲ್ಲಿ ನೀರಿನ ಹರಿವಿನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬಂದಿಲ್ಲ. ಬೆಳಗ್ಗೆ 3.9 ಮಿ.ಮೀ.ನಲ್ಲಿ ನೇತ್ರಾವತಿ ಹರಿಯುತಿತ್ತು.


ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ನಷ್ಟದ ಬಗ್ಗೆ ಅಂದಾಜಿಸಿ ತಹಶೀಲ್ದಾರರಿಗೆ ವರದಿ ಸಲ್ಲಿದ್ದಾರೆ.




Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article