
ಸುಹಾಸ್ ಮನೆಗೆ ಶಾಸಕ ಗುರುರಾಜ್, ನೆಟ್ಟಾರ್ ಪತ್ನಿ ಸಹಿತ ಹಲವರ ಭೇಟಿ
ಬಂಟ್ವಾಳ: ಬಜಪೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಅವರ ಬಂಟ್ವಾಳ ತಾಲೂಕಿನ ಕಾರಿಂಜ ಸಮೀಪದ ಪುಳಿಮಜಲುವಿನಲ್ಲಿರುವ ಮನೆಗೆ ಮಂಗಳವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಹಿತ ಹಲವರು ಸಹಾಸ್ ಮನೆಗೆ ಭೇಟಿಯಿತ್ತು ಸಾಂತ್ವನ ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ಭೇಟಿ ನೀಡಿ ಸಹಾಸ್ ಹೆತ್ತವರಿಗೆ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ ವಯಕ್ತಿಕ ನೆಲೆಯಲ್ಲಿ 1 ಲಕ್ಷ ರೂ. ಆರ್ಥಿಕ ನೆರವು ನೀಡಿದರು.
ಅದೇ ರೀತಿ ಸುಹಾಸ್ ಶೆಟ್ಟಿ ಅವರ ಅಂತ್ಯಕ್ರಿಯೆ ವೇಳೆ ಆಗಮಿಸಿದ್ದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೀಡಿದ ಭರವಸೆಯಂತೆ 5 ಲಕ್ಷ ರೂ.ವಿನ ಚೆಕ್ನ್ನು ತಮ್ಮ ಆಪ್ತ ಕಾರ್ಯದರ್ಶಿ ಮೂಲಕ ಮನೆಗೆ ತಲುಪಿಸಿದ್ದಾರೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಸಹಾಸ್ ಮನೆಗೆ ಭೇಟಿಯಿತ್ತು ಸಾಂತ್ವನ ಹೇಳಿದರು.
ಪ್ರವೀಣ್ ನೆಟ್ಟಾರು ಪತ್ನಿ ಭೇಟಿ:
ಕೆಲ ಸಮಯಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬೆಳ್ಳಾರೆಯ ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನ ಅವರು ಕೂಡ ಸುಹಾಸ್ ಮನೆಗೆ ಭೇಟಿಯಿತ್ತು ಹೆತ್ತವರು ಹಾಗೂ ಕುಟುಂಬಸ್ಥರಿಂದ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡು ಸುಹಾಸ್ ಹೆತ್ತವರನ್ನು ಸಮಾಧಾನಪಡಿಸಿ ಸಾಂತ್ವನ ಹೇಳಿದರಲ್ಲದೆ ನಾವು ನಿಮ್ಮ ಜೊತೆ ಸದಾ ಇರುವುದಾಗಿ ಭರವಸೆ ನೀಡಿದರು.
ಕಾವಳಮೂಡೂರು ಗ್ರಾ.ಪಂ. ಅಧ್ಯಕ್ಷ ಅಜಿತ್ ಶೆಟ್ಟಿ, ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ಸುದರ್ಶನ್ ಬಜ, ಸಹಾಸ್ ಮಾವ ಚಂದ್ರಶೇಖರ್ ಶೆಟ್ಟಿ ಪುಳಿಮಜಲು ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು.
ಸೋಮವಾರ ಮಾಜಿ ಸಂಸದ ಗೋಪಾಲ್ ಶೆಟ್ಟಿ ಮುಂಬೈ ಸಹಿತ ಹಲವಾರು ಪ್ರಮುಖರು ಭೇಟಿ ನೀಡಿ ಕುಟುಂಬಸ್ಥರಿಗೆ ಹಾಗೂ ಹೆತ್ತವರಿಗೆ ಸಾಂತ್ವನ ಹೇಳಿದರು.
ಹಾಗೆಯೇ ಖ್ಯಾತ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ, ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್, ರವಿರಾಜ್ ಬಿ.ಸಿ.ರೋಡ್ ಮೊದಲಾದವರು ಸಹಾಸ್ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವನ ಹೇಳಿದರು.