
ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಜಾ: ಶಾಸಕರು ಗರಂ
ಕುಂದಾಪುರ: ನಗರದ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಯ ಇ-ಆಫೀಸ್ನ 5 ಮಂದಿ ಡಾಟಾ ಎಂಟ್ರಿ ಸಿಬ್ಬಂದಿಗಳನ್ನು ಸರ್ಕಾರ ಕರ್ತವ್ಯ ವಿಮುಕ್ತಿಗೊಳಿಸಿದ ಬಗ್ಗೆ ಭಾರೀ ಗೊಂದಲ ಉಂಟಾಗಿದೆ.
ಈ ಸಿಬ್ಬಂದಿಗಳಿಗೆ ಮೇ 1 ರಿಂದ ಕರ್ತವ್ಯಕ್ಕೆ ಹಾಜರಾಗುವುದು ಬೇಡ ಎಂದು ಸರ್ಕಾರದಿಂದ ಆದೇಶ ಬಂದಿದೆ ಎನ್ನಲಾಗಿದೆ. ಆಸ್ಪತ್ರೆಗೆ ಬಂದ ರೋಗಿಗಳನ್ನು ಇಲ್ಲಿ ಡಾಕ್ಟರುಗಳು ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಆದರೆ, ಬಂದವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಇ-ಆಫೀಸ್ ಕಾರ್ಯಾಚರಿಸದೆ ಭಾರೀ ಗೊಂದಲ ಉಂಟಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಂಗಳವಾರ ಬೆಳಿಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ತೊಂದರೆಗೊಳಗಾದವರ ಅಹವಾಲುಗಳನ್ನು ಆಲಿಸಿದರು. ಕೌಂಟರ್ ಮುಂದೆ ಮೈಲುದ್ದ ಇದ್ದ ರೋಗಿಗಳು ಮತ್ತವರ ಸಂಬಂಧಿತರ ಸರತಿ ಸಾಲುಗಳನ್ನು ಕಂಡು ವ್ಯಥೆಪಟ್ಟರು. ಅವರ ಸಮಸ್ಯೆಗಳನ್ನು ವಿಚಾರಿಸಿ ಅರಿತುಕೊಂಡರು.
ಆಸ್ಪತ್ರೆಯಿಂದಲೇ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಕರೆ ಮಾಡಿ, ಅಲ್ಲಿನ ಸಮಸ್ಯೆಗಳನ್ನು ವಿವರಿಸಿದರು. ಮಧ್ಯಾಹ್ನ 3 ಗಂಟೆಯೊಳಗೆ ಸಿಬ್ಬಂದಿಗಳಿಗೆ ಮರು ನೇಮಕ ಆದೇಶ ಪತ್ರ ರವಾನೆ ಮಾಡದಿದ್ದರೆ, ತೊಂದರೆಗೊಳಗಾದವರೊಂದಿಗೆ ಆಸ್ಪತ್ರೆಯಲ್ಲಿ ಧರಣಿ ನಡೆಸುವುದಾಗಿಯೂ ಎಚ್ಚರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಗಂಟಿಹೊಳೆ, ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಒಳ್ಳೆಯ ಹೆಸರಿದೆ. ಆದರೆ, ಸರ್ಕಾರ ಸಿಬ್ಬಂದಿಗಳಿಗೆ ಸಂಬಳ ಪಾವತಿಸಲಾಗದೆ ಕುಂಟು ನೆಪಗಳನ್ನು ಹೇಳಿ ಪ್ರತಿ ಇಲಾಖೆಯಿಂದಲೂ ಸಿಬ್ಬಂದಿಗಳನ್ನು ವಜಾ ಮಾಡುತ್ತಿದೆ. ಈ ಆಸ್ಪತ್ರೆಯ ಇ-ಆಫೀಸ್ ಸಿಬ್ಬಂದಿಗಳಿಗೆ ಕಾರಣ ನೀಡದೇ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಇದರಿಂದಾಗಿ ದೂರದಿಂದಲೂ ಬರುವ ಸಾವಿರಾರು ಜನರು ಸಂಕಷ್ಟಕ್ಕೊಳಗಾಗಿದ್ದಾರೆ.
ಶಿಕ್ಷಣ ಇಲಾಖೆ, ಪೌರ ಕಾರ್ಮಿಕರು ಹೀಗೆ ಹಲವು ಇಲಾಖೆಗಳಲ್ಲಿನ ಸಿಬ್ಬಂದಿಗಳನ್ನು ವಜಾ ಮಾಡುತ್ತಿದೆ. ಇದ್ದವರಿಗೂ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇಷ್ಟೆಲ್ಲ ಇರುವಾಗ ಸರ್ಕಾರ ಬೆಲೆ ಏರಿಕೆ ಎಂದು ಬೊಬ್ಬೆ ಹಾಕುತ್ತಿದೆ. ಇದು ಲಜ್ಜೆಗೆಟ್ಟ ಸರ್ಕಾರ. ಇದೇ ಧೋರಣೆ ಮುಂದುವರೆಸಿ, ಸರ್ಕಾರ ಎಲ್ಲೆಡೆಯ ವ್ಯವಸ್ಥೆಗಳನ್ನು ಹಾಳುಗೆಡವಿದರೆ ನಾವು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸಂತ್ರಸ್ತರೊಂದಿಗೆ ಭಾರೀ ಪ್ರತಿಭಟನೆ ನಡೆಸುವೆವು ಎಂದು ಸರ್ಕಾರವನ್ನು ಎಚ್ಚರಿಸಿದರು.
ಎಚ್ಛೆತ್ತ ಸರ್ಕಾರ-ಸಿಬ್ಬಂದಿ ಮುಂದುವರೆಸಿ ಆದೇಶ:
ರಾಜ್ಯದಲ್ಲಿ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳನ್ನು ಕಡಿತಗೊಳಿಸುತ್ತಿರುವ ವಿಷಯ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರ ಗಮನಕ್ಕೆ ಬಂದ ನಂತರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ವಿವರಿಸಿದ್ದಾರೆ. ಕುಂದಾಪುರ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಮತ್ತು ತಾಯಿ ಮಕ್ಕಳ ಹೆರಿಗೆ ಆಸ್ಪತ್ರೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದ 5 ಮಂದಿ ಡಾಟಾ ಎಂಟ್ರಿ ಆಪರೇಟರ್ಗಳನ್ನು ಕೆಲಸದಲ್ಲಿ ಮುಂದುವರಿಸುವ ಬಗ್ಗೆ ಕೋರಿಕೆ ಸಲ್ಲಿಸಿದ್ದಾರೆ.
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಸಿಬ್ಬಂದಿಯನ್ನು ಕಡಿತಗೊಳಿಸದಂತೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಅದರಂತೆ ಎಲ್ಲಾ ಸಿಬ್ಬಂದಿಗಳು ತಮ್ಮ ಕರ್ತವ್ಯದಲ್ಲಿ ಮುಂದುವರೆಯಲು ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.