
ಏಳು ಮೇಳಗಳೊಂದಿಗೆ ಕಟೀಲು ಮೇಳದ ಮುಂದಿನ ತಿರುಗಾಟ
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಬಯಲಾಟ ಮಂಡಳಿಯ ಮುಂದಿನ ತಿರುಗಾಟ ಏಳು ಮೇಳಗಳೊಂದಿಗೆ ನಡೆಯಲಿದೆ ಎಂದು ಕಟೀಲು ದೇಗುಲದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ರವಿವಾರ ಹೂಪ್ರಶ್ನೆಯ ಮೂಲಕ ದೇವರ ಒಪ್ಪಿಗೆ ಸಿಕ್ಕಿದ್ದು ಮುಂದಿನ ನ. 16ರಂದು ನೂತನ ಮೇಳದೊಂದಿಗೆ ತಿರುಗಾಟ ನಡೆಯಲಿದೆ ಎಂದರು.
ಕಟೀಲು ಒಂದನೇ ಮೇಳ ಯಾವಾಗ ಆರಂಭವಾಗಿತ್ತು ಎಂಬ ಮಾಹಿತಿ ಇಲ್ಲ. ಎರಡನೆಯ ಮೇಳ 1975, ಮೂರನೇ ಮೇಳ 82, ನಾಲ್ಕನೇ ಮೇಳ 93ರಲ್ಲಿ 2010ರಲ್ಲಿ ಐದನೇ ಹಾಗೂ 2013ರಲ್ಲಿ ಆರನೇ ಮೇಳ ಆರಂಭವಾಗಿತ್ತು. ವರ್ಷಂಪ್ರತಿ ನೋಂದಣಿಯಾಗುತ್ತಿರುವ ಆಟಗಳ ಸಂಖ್ಯೆ ಹೆಚ್ಚುತ್ತಿದ್ದು ಏಳನೆಯ ಮೇಳ ಆರಂಭಿಸಲಾಗುತ್ತಿದೆ. ವಾರ್ಷಿಕ ಸುಮಾರು 1,050 ಪ್ರದರ್ಶನಗಳಲ್ಲಿ 450 ಆಟ ಖಾಯಂ ಆಗಿವೆ. ಮುಂಗಡ ಬುಕ್ಕಿಂಗ್ 7 ಸಾವಿರಕ್ಕೂ ಹೆಚ್ಚು ಆಟಗಳಿದ್ದು ಕಳೆದ ವರ್ಷ ೮೪೪ ಆಟ ಬುಕ್ಕಿಂಗ್ ಇತ್ತು ಎಂದರು.
ಬೆಂಗಳೂರು, ಮೈಸೂರು ಪ್ರದೇಶದಲ್ಲಿ ಆಟ ಆಡಿಸಲು ಬೇಡಿಕೆ ಇದೆ. 5ಕ್ಕೂ ಹೆಚ್ಚು ಬಯಲಾಟ ನಿರ್ದಿಷ್ಟ ಅವಧಿಯಲ್ಲಿ ಬುಕ್ಕಿಂಗ್ ಇದ್ದರೆ ಅಲ್ಲಿಯೂ ಆಟ ಆಡಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಆಡಳಿತ ಮಂಡಳಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಮೇಳದ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ , ಬಿಪಿನ್ಪ್ರಸಾದ್ ಶೆಟ್ಟಿ ಕೊಡೆತ್ತೂರು ಗುತ್ತು, ಪ್ರವೀಣ್ದಾಸ್ ಭಂಡಾರಿ ಕೊಡೆತ್ತೂರು ಗುತ್ತು, ಗಣೇಶ್ ಶೆಟ್ಟಿ ಐಕಳ ಉಪಸ್ಥಿತರಿದ್ದರು.