ಎಸ್ಸಿಎಸ್ಟಿ ಒಳಮೀಸಲಾತಿ ಮಾಹಿತಿ ಕಾರ್ಯಾಗಾರ

ಎಸ್ಸಿಎಸ್ಟಿ ಒಳಮೀಸಲಾತಿ ಮಾಹಿತಿ ಕಾರ್ಯಾಗಾರ

ಮಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮೀಸಲಾತಿಯ ಬಗ್ಗೆ ಅರಿವು ಹಾಗೂ ಈ ಕುರಿತಾಗಿ ಸಮುದಾಯದಲ್ಲಿ ಜನ ಜಾಗೃತಿ ಮೂಡಿಸಲು ಅನುವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾ ಕೊರಗರ ಸಂಘವು ಹಮ್ಮಿಕೊಂಡ ಮಾಹಿತಿ ಕಾರ್ಯಾಗಾರ ಭಾನುವಾರ ಮಂಗಳೂರಿನ ಕೋಡಿಕಲ್ ನಲ್ಲಿರುವ ಕೊರಗ ಸಂಘದ ನೂತನ ಕಟ್ಟಡದ ಸಭಾಂಗಣದಲ್ಲಿ ನೆರವೇರಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಮೂಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆಯವರು ಮಾತನಾಡಿ, ಜಾತಿ ಜನಗಣತಿ ಮತ್ತು ಒಳಮೀಸಲಾತಿಯ ಮಹತ್ವ , ಅದರ ಅನಿವಾರ್ಯತೆಯ ಬಗ್ಗೆ ವಿವರಿಸಿದರು. 

ಸಮಾಜದಲ್ಲಿ ತೀರಾ ತಳಸ್ಥರದಲ್ಲಿರುವ ಅಜಲು, ಅಸ್ಪೃಶ್ಯತೆ, ಬಡತನ, ಅವಮಾನಗಳಿಂದ ನಲುಗಿ ಹೋಗಿರುವ ಇನ್ನೂ ಕೂಡ ಅಭಿವೃದ್ಧಿಯ ಅಂಚಿನಲ್ಲಿರುವ ಕೊರಗ ಸಮುದಾಯವು ಇಂದು ಸಂಘಟಿತರಾಗಿ ನಾಳೆಯ ಒಳ್ಳೆಯ ದಿನಗಳಿಗಾಗಿ ಹಂಬಲಿಸುತ್ತಾ ಈ ರೀತಿಯಾದ ಜನ ಜಾಗ್ರತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸಮಯೋಚಿತವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 

ಒಳ ಮೀಸಲಾತಿಯ ಅನುಷ್ಠಾನ ಪ್ರಕ್ರಿಯೆಯಲ್ಲಿ ಸರಕಾರವು ಪರಿಶಿಷ್ಟ ಜಾತಿಗಳ ಪಟ್ಟಿ ಮಾಡಿ ಮನೆ ಮನೆ ಸಮೀಕ್ಷೆ ನಡೆಸುತ್ತಿರುವ ಹಾಗೆಯೇ ಪರಿಶಿಷ್ಟ ಪಂಗಡಗಳ ಒಳಗೆ ಕೂಡ ಮನೆ ಮನೆ ಸಮೀಕ್ಷೆ ನಡೆಸಿ ಆ ಸಮುದಾಯಗಳ ಆರ್ಥಿಕ , ಸಾಮಾಜಿಕ , ಔದ್ಯೋಗಿಕ ಮತ್ತು ಮೂಲಭೂತ ಸೌಕರ್ಯಗಳ ಅಂಕಿ ಅಂಶಗಳನ್ನು ದಾಖಲಿಸಿ ಪರಿಶಿಷ್ಟ ಪಂಗಡಗಳಿಗೆ ಆಯೋಗವು ಶಿಫಾರಸ್ಸು ಮಾಡಿರುವ ಶೇಕಡಾ 7ರ ಮೀಸಲಾತಿಯನ್ನು ಹಂಚಿಕೆ ಮಾಡಿದರೆ ಸರಕಾರದ ಆಶಯವು ಈಡೇರಬಹುದು , ಅದಲ್ಲದೇ ರಾಜ್ಯದಲ್ಲಿ ಪಟ್ಟಿ ಮಾಡಲಾಗಿರುವ ೫೧ ಬುಡಕಟ್ಟು ಪಂಗಡಗಳನ್ನು ಒಂದೇ ತಕ್ಕಡಿಯಲ್ಲಿ ಅಳತೆ ಮಾಡಿದರೆ ಕೊರಗ ಸಮುದಾಯವು ಇನ್ನಷ್ಟು ಅನ್ಯಾಯಕ್ಕೆ ಒಳಗಾಗುವ ಸಾಧ್ಯತೆಗಳು ಇದೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಈ ಕುರಿತು ಕೊರಗ ಸಂಘಟನೆಗಳು ಎಚ್ಚೆತ್ತು ಪ್ರತ್ಯೇಕವಾಗಿ ಅಧ್ಯಯನವನ್ನು ಕೈಗೊಳ್ಳಲು ಸರಕಾರವನ್ನು ಒತ್ತಾಯಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು. 

ದಕ್ಷಿಣ ಕನ್ನಡ ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಸುಂದರ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕೊರಗ ಸಂಘದ ಕಾರ್ಯದರ್ಶಿ ಬಾಬು ಪಾಂಗಾಳ ಮತ್ತು ಶಶಿಕಲಾ ಕೋಡಿಕಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article