
ರಸ್ತೆ ಮಧ್ಯೆ ಪಾಕ್ ಧ್ವಜ: ಕಿಡಿಗೇಡಿಗಳಿಗಾಗಿ ಪೊಲೀಸರ ಶೋಧ
ಕುಂದಾಪುರ: ಭಾರತ ಮತ್ತು ಪಾಕಿಸ್ಥಾನಗಳ ನಡುವೆ ಬಿಸಿ ವಾತಾವರಣ ಏರ್ಪಟ್ಟಿದ್ದ ಈ ವೇಳೆಯಲ್ಲೇ ಯಾರೋ ಕಿಡಿಗೇಡಿಗಳು ಕುಂದಾಪುರದಲ್ಲಿ ಪಾಕ್ ಧ್ವಜ ನೆಟ್ಟಿದ್ದಾರೆ.
ಕೋಟೇಶ್ವರ ಸಮೀಪದ ಕಾಳಾವರ-ಜಪ್ತಿ ರಸ್ತೆಯ ದಬ್ಬೆಕಟ್ಟೆ ಎಂಬಲ್ಲಿ ಕಿಡಿಗೇಡಿಗಳು ಮೇ 16ರಂದು ಬೆಳಗ್ಗೆ ಪಾಕಿಸ್ಥಾನ ಧ್ವಜವಿರುವ ಪ್ಲಾಸ್ಟಿಕ್ ಬ್ಯಾನರನ್ನು ರಸ್ತೆಗೆ ಮೊಳೆ ಹೊಡೆದು ಹಾಸಿದ್ದು ಕಂಡುಬದಿದೆ!
ಜಪ್ತಿಯ ಸಚಿನ್ (29) ಬೈಕ್ನಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಜಪ್ತಿ ಗ್ರಾಮದ ದಬ್ಬೆಕಟ್ಟೆ ಎಂಬಲ್ಲಿ ರಸ್ತೆಯ ಮೇಲೆ ಯಾರೋ ಕಿಡಿಗೇಡಿಗಳು ಪಾಕ್ ಧ್ವಜದ ಪ್ಲಾಸ್ಟಿಕ್ ಬ್ಯಾನರನ್ನು ರಸ್ತೆಗೆ ಮೊಳೆ ಹೊಡೆದು ಹಾಸಿದ್ದನ್ನು ಗಮನಿಸಿದರು. ಸ್ವಲ್ಪ ದೂರದಲ್ಲಿ ಇನ್ನೊಂದು ಕಡೆಯೂ ಅದೇ ರೀತಿ ರಸ್ತೆಗೆ ಪ್ಲಾಸ್ಟಿಕ್ ಬ್ಯಾನರನ್ನು ಹಾಸಿದ್ದು ಕಂಡುಬದಿದೆ. ಮೊಳೆಯಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಬಾರದೆಂದು ಸಚಿನ್ ಇದನ್ನು ಅಲ್ಲಿಂದ ತೆಗೆದು ಬದಿಗೆ ಹಾಕಿದ್ದಾರೆ. ತಕ್ಷಣ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಸಚಿನ್ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.