ಅಬ್ದುಲ್ ರಹ್ಮಾನ್ ಕೊಲೆ-ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ: 15 ಮಂದಿ ವಿರುದ್ಧ ಎಫ್‌ಐಆರ್, ಅಲ್ಲಲ್ಲಿ ಬಂದ್, ಕಲ್ಲು ತೂರಾಟ

ಅಬ್ದುಲ್ ರಹ್ಮಾನ್ ಕೊಲೆ-ಜಿಲ್ಲೆಯಲ್ಲಿ ಆತಂಕದ ಪರಿಸ್ಥಿತಿ: 15 ಮಂದಿ ವಿರುದ್ಧ ಎಫ್‌ಐಆರ್, ಅಲ್ಲಲ್ಲಿ ಬಂದ್, ಕಲ್ಲು ತೂರಾಟ


ಮಂಗಳೂರು: ಬಂಟ್ವಾಳ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಮಂಗಳವಾರ ನಡೆದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ (34) ಕೊಲೆಯ ನಂತರ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಚೋದನಕಾರಿ ಸಂದೇಶ, ಕೊಲೆ ಬೆದಿಕರೆಗಳು ಪರಿಸ್ಥಿತಯನ್ನು ಬಿಗಾಡಯಿಸುತ್ತಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದ್ದು, ಹೊರ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಲಾಗಿದೆ. ಎಡಿಜಿಪಿ ಆರ್. ಹಿತೇಂದ್ರ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದಾರೆ.


15 ಮಂದಿ ವಿರುದ್ಧ ಎಫ್‌ಐಆರ್:

ಪ್ರಕರಣವನ್ನು ಬೇಧಿಸಲು ಪೊಲೀಸರ ಐದು ತಂಡ ರಚಿಸಲಾಗಿದ್ದು,  ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕೊಲೆ ಯತ್ನಕ್ಕೊಳಗಾಗಿದ್ದ ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರು ಎನ್ನಲಾಗಿದೆ. ಕಲಂದರ್ ಶಾಫಿ ನೀಡಿದ ಮಾಹಿತಿಯಂತೆ ಪ್ರಕರಣ ದಾಖಲಾಗಿದೆ.


ಧಪನ:

ಅಬ್ದುಲ್ ರಹ್ಮಾನ್ ಮೃತದೇಹವನ್ನು ಇಂದು ಉಳ್ಳಾಲದ ಕುತ್ತಾರು ಮದನಿನಗರರದಿಂದ  ಕೊಳತ್ತಮಜಲಿನವರೆಗೆ ಮೆರವಣಿಗೆಯಲ್ಲಿ ಸಾಗಿಸಿ ಬಳಿಕ ಕೊಳತ್ತಮಜಲು ಮಸೀದಿಯಲ್ಲಿ ದಫನ ಕಾರ್ಯ ನಡೆಸಲಾಯಿತು.

ಮೃತದೇಹ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದಂತೆ ಸಹಸ್ರಾರು ಸಂಖ್ಯೆಯ ಮುಸ್ಲಿಂ ಸಮುದಾಯದವರು ಜಮಾಯಿಸಿದ್ದರು. ಮನೆಯ ಬಳಿಯೂ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದರು.

ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. 

ಆಕ್ರೋಶ:

ಮೃತದೇಹ ಫರಂಗಿಪೇಟೆ ತಲುಪಿದಾಗ ಮಳೆಯನ್ನು ಲೆಕ್ಕಿಸದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರ ಗುಂಪು ರಸ್ತೆ ತಡೆ ನಡೆಸಿ ಹತ್ಯೆಯನ್ನು ಖಂಡಿಸಿದರು. ರಹ್ಮಾನ್ ಪರ ಘೋಷಣೆಗಳನ್ನು ಕೂಗಿದ ಆಕ್ರೋಶಿತ ಗುಂಪು ಸರಕಾರದ ವಿರುದ್ಧ ಘೋಷಣೆ ಕೂಗಿತು. ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿತು. ಆಕ್ರೋಶಿತ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಬಳಿಕ ಪೊಲೀಸರು ಆಕ್ರೋಶಿತರನ್ನು ಸಮಾಧಾನಪಡಿಸಿ ಗುಂಪನ್ನು ಚದುರಿಸಿ ಆಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟರು.

ಬಂದ್, ಕಲ್ಲು ತೂರಾಟ:

ಸುರತ್ಕಲ್‌ನಲ್ಲಿ ಖಾಸಗಿ ಬಸ್ಸೊಂದಕ್ಕೆ ಕಲ್ಲು ತೂರಿ ಹಾನಿಗೊಳಿಸಲಾಗಿದೆ. ಯಾವುದೇ ಅಪಾಯವಾಗಿಲ್ಲ. ಬಂಟ್ವಾಳದ ಕೈಕಂಬದಲ್ಲಿರುವ ಬೈಕ್ ಶೋರೂಂಗೆ ಕಲ್ಲುತೂರಿ ಬಲವಂತವಾಗಿ ಬಂದ್ ಗೊಳಿಸಲಾಗಿದೆ. ಫರಂಗಿಪೇಟೆ, ಬಿ. ಸಿ. ರೋಡ್‌ನಲ್ಲಿ ಇಂದು ಅಘೋಷಿತ ಬಂದ್‌ನ ವಾತಾವರಣವಿತ್ತು. ಈ ಭಾಗದಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿದಿಲ್ಲ. ಸರಕಾರಿ ಬಸ್‌ಗಳು ಎಂದಿನಂತೆ ಸಂಚರಿಸಿದ್ದವು. ಅಂಗಡಿ, ಮುಂಗಟ್ಟುಗಳು ಬಂದ್ ಆಗಿದ್ದವು.

ರಾಜೀನಾಮೆ:

ಜಿಲ್ಲೆಯಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಇದನ್ನು ತಡೆಯುವಲ್ಲಿ ಗೃಹ ಇಲಾಖೆಯ ವೈಫಲ್ಯ ಮತ್ತು ಮುಸ್ಲಿಮರ ಕಡೆಗಣನೆ ಬೇಸತ್ತು ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದಿಂದ ಹಿಡಿದು ರಾಜ್ಯ ಘಟಕದವರೆಗಿನ ವಿವಿಧ ಹುದ್ದೆಯಲ್ಲಿರುವ ಮುಸ್ಲಿಮ್ ಮುಖಂಡರು ಮತ್ತು ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ಪ್ರಕಟಿಸುವ ನಿಟ್ಟಿನಲ್ಲಿ ನಾಳೆ ಸಭೆ ನಡೆಸಲಿದ್ದಾರೆ. ಈಗಾಗಲೇ ದ. ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಮಾಜಿ ಮೇಯರ್ ಕೆ. ಆಶ್ರಫ್, ಉಳ್ಳಾಲ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಮೀರ್ ರಾಜೀನಾಮೆ ನೀಡಿದ್ದಾರೆ.

ಘಟನೆ:

ಮಂಗಳವಾರ ಮಧ್ಯಾಹ್ನ ಅಬ್ದುಲ್ ರಹ್ಮಾನ್  ಮತ್ತು ಕಲಂದರ್ ಶಾಫಿ ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್  ಮಾಡಿ ಕುರಿಯಾಳ ಗ್ರಾಮದ ಇರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುತ್ತಿದ್ದ ವೇಳೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳೊಂದಿಗೆ ದಾಳಿ ಮಾಡಿ ಪರಾರಿಯಾಗಿತ್ತು, ರಹ್ಮಾನ್ ಸಾವಿಗೀಡಾಗಿದ್ದರೆ, ಶಾಫಿ ಪ್ರಾಣಾಪಾಯಿಂದ ಪಾರಾಗಿದ್ದಾರೆ. ಮೊಹಮ್ಮದ್ ನಿಸಾರ್ ಎಂಬಾತ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article