ಎಸ್‌ಪಿಬಿ ಜನ್ಮದಿನೋತ್ಸವ: ‘ಬಾಲಗಾನ ಯಶೋಯಾನ’ 24 ಗಂಟೆಗಳ ಕಾಲ ನಿರರ್ಗಳ ಗಾಯನ

ಎಸ್‌ಪಿಬಿ ಜನ್ಮದಿನೋತ್ಸವ: ‘ಬಾಲಗಾನ ಯಶೋಯಾನ’ 24 ಗಂಟೆಗಳ ಕಾಲ ನಿರರ್ಗಳ ಗಾಯನ

ಮಂಗಳೂರು: ಖ್ಯಾತ ಗಾಯಕ ಗಾನ ಗಂಧರ್ವ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನೋತ್ಸವದ ಅಂಗವಾಗಿ ಯಶವಂತ ಎಂ.ಜಿ. ಅವರಿಂದ ‘ಬಾಲಗಾನ ಯಶೋಯಾನ’ 24 ಗಂಟೆಗಳ ಕಾಲ ನಿರರ್ಗಳ ಗಾಯನ ಕಾರ್ಯಕ್ರಮವನ್ನು  ಜೂ.3ರಂದು ಅಪರಾಹ್ನ 3ರಿಂದ ಜೂ.4ರ ಅಪರಾಹ್ನ 3ರ ವರೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಾಲಿಕೆ ಮಾಜಿ ಸದಸ್ಯ, ಗಾಯಕ ಜಗದೀಶ ಶೆಟ್ಟಿ, ಜೂ.3ರಂದು ಮಧ್ಯಾಹ್ನ 1.30ಕ್ಕೆ ವಿರಾಜಪೇಟೆಯ ಡಿವೈಎಸ್‌ಪಿ ಎಸ್.ಮಹೇಶ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಜೂ.4ರಂದು ಅಪರಾಹ್ನ 3 ಗಂಟೆಗೆ ಸಮಾರೋಪದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

24 ಗಂಟೆಗಳ ನಿರಂತರ ಗಾಯನ..

ಗಾಯಕ ಯಶವಂತ ಎಂ.ಜಿ ಅವರು ಮಾತನಾಡಿ, ಇದೊಂದು ಅಪೂರ್ವ ಕಾರ್ಯಕ್ರಮವಾಗಿದ್ದು, 24 ಗಂಟೆಗಳ ಕಾಲ ನಿರಂತರವಾಗಿ ಗಾಯಕ ಎಸ್‌ಪಿಬಿ ಅವರು ಹಾಡಿದ ಶೇ.90ರಷ್ಟು ಕನ್ನಡ ಚಿತ್ರಗೀತೆಗಳು, ಶೇ.5ರಷ್ಟು ಭಕ್ತಿ ಗೀತೆಗಳು ಹಾಗೂ ಶೇ.೫ರಷ್ಟು ಭಾವಗೀತೆಗಳನ್ನು ಹಾಡಲಿದ್ದೇನೆ. ಇದಕ್ಕಾಗಿ  ಅವರ ೨೪೦ಕ್ಕಿಂತ ಹೆಚ್ಚಿನ ಹಾಡುಗಳನ್ನು ಸಿದ್ಧಮಾಡಿಕೊಂದ್ದೇನೆ. ಇದೊಂದು ವಿಶ್ವದಾಖಲೆಯಾಗುವ ಕಾರ್ಯಕ್ರಮ ಎಂದು ಹೇಳಿದರು.

ನಿರಂತರ ಗಾಯನದಲ್ಲಿ ಒಂದೊಂದು ಗಂಟೆಗೆ 5 ನಿಮಿಷಗಳ ವಿರಾಮ ಇರುತ್ತದೆ. ಬರೀ ಜ್ಯೂಸ್‌ವನ್ನು ಕುಡಿದುಕೊಂಡೇ ಹಾಡುವ ಕೆಲಸ ಮಾಡುತ್ತೇನೆ. ನನ್ನ ಜತೆಯಲ್ಲಿ ಗಿಟಾರ್‌ನಲ್ಲಿ ರಾಜ್‌ಗೋಪಾಲ್, ಕೀಬೋರ್ಡ್‌ನಲ್ಲಿ ದೀಪಕ್ ಜಯಶೀಲನ್, ಡ್ರಮ್ಸ್ ಮತ್ತು ರಿದಂನಲ್ಲಿ ವಾಮನ್ ಕೆ, ತಬಲದಲ್ಲಿ ಪ್ರಜ್ವಲ್ ಆಚಾರ್ಯ, ಕೊಳಲಿನಲ್ಲಿ ವರ್ಷ ಬಸ್ರೂರ್ ಹಾಗೂ ಸಿತಾರ್‌ನಲ್ಲಿ ಸುಮುಖ್ ಆಚಾರ್ಯ ಭಾಗವಹಿಸಲಿದ್ದಾರೆ. ಈ ವಿಶ್ವದಾಖಲೆಯಲ್ಲಿ ಅವರು ಕೂಡ ಭಾಜನರಾಗುತ್ತಾರೆ. ಒಂದೊಂದು ಗಂಟೆ ಕೂತು ಒಂದೊಂದು ಗಂಟೆ ನಿಂತು ಹಾಡುವ ಯೋಜನೆ ಇಟ್ಟುಕೊಂಡಿದ್ದೇನೆ. ಈ ಸೋಲೋ ಹಾಡುಗಳ ಮೂಲಕ ಖ್ಯಾತ ಗಾಯಕ ಎಸ್‌ಪಿಬಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ ಎಂದರು. 

ಗಾಯಕ ಪ್ರಶಾಂತ್ ಸಾಲ್ಯಾನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article