
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಹೋರಾಟ ತೀವ್ರಗೊಳಿಸಲು ನಿರ್ಧಾರ
ಮಂಗಳೂರು: ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಹೋರಾಟವನ್ನು ತೀವ್ರಗೊಳಿಸಲು ಹೋರಾಟ ಸಮಿತಿ ನಿರ್ಧರಿಸಿದ.
ನಗರದ ಖಾಸಗಿ ಹೊಟೇಲ್ನಲ್ಲಿ ಇಂದು ನಡೆದ ಸಮಾಲೋಚನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಐವನ್ ಡಿ. ಸೋಜಾ, ಕರಾವಳಿಯಲ್ಲಿ ಹೈಕೋರ್ಟ್ ಪೀಠವಾಗದ ಹೊರತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟವನ್ನು ತೀವ್ರಗೊಳಿಸುವ ದಿಸೆಯಲ್ಲಿ ರಾಜಕೀಯ ಬೇಧ ಇಲ್ಲದೆ ವಿದ್ಯಾರ್ಥಿಗಳ ಸಹಿತಿ ವಿವಿಧ ಸಂಘ ಸಂಸ್ಥೆಗಳ ಮುಂದಾಳುಗಳೊಂದಿಗೆ ಸಮಾಲೋಚಿಸಿ ಹೋರಾಟದ ರೂಪುರೇಷೆಯನ್ನು ನಿರ್ಧರಿಸಲಾಗಿದೆ ಎಂದರು.
ಹೈಕೋರ್ಟ್ ಪೀಠಕ್ಕಾಗಿ ನೂರು ಮಂದಿ ಬೆಂಗಳೂರಿಗೆ ತೆರಳಿ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನಾಯಾಧೀಶರು, ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಒತ್ತಾಯಿಸಿಸಲಾಗುವುದು, ಸಾರ್ವಜನಿಕರಿಗೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠದ ಅಗತ್ಯವಾಗಿದೆ ಎಂದು ಒತ್ತಾಯಿಸಿ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನಾಯಾಧೀಶರು, ಮುಖ್ಯಮಂತ್ರಿಗಳಿಗೆ ವಿದ್ಯಾರ್ಥಿಗಳಿಂದ ಒಂದು ಲಕ್ಷ ಪೋಸ್ಟ್ಕಾರ್ಡ್ಗಳನ್ನು ಬರೆಯಲಾಗುವುದು, ಜತೆಗೆ ಚುನಾಯಿತ ಜನ ಪ್ರತಿನಿಧಿಗಳಿಂದ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ರಾಜ್ಯಪಾಲರು, ಹೈಕೋರ್ಟ್ ಮುಖ್ಯ ನಾಯಾಧೀಶರು, ಮುಖ್ಯಮಂತ್ರಿಗಳಿಗೆ ಪತ್ರ ಬರೆಸಲಾಗುವುದು ಎಂದರು.
ಹೋರಾಟಕ್ಕೆ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಕಚೇರಿಯೊಂದನ್ನು ತೆರೆಯಲಾಗುವುದು, ಪಕ್ಷಾತೀತವಾಗಿ ಹಿರಿಯರ ಸಮಿತಿಯನ್ನು ರಚಿಸಲಾಗುವುದು, ವಿವಿಧ ಸಚಿವರುಗಳ ಭೇಟಿ ಸೇರಿದಂತೆ ಹೈಕೋರ್ಟ್ ಪೀಠಕ್ಕೆ ಪೂರಕವಾಗಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳೂರಿನಲ್ಲಿರುವ ಹಿಂದಿನ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಹೈಕೋರ್ಟ್ ಪೀಠಕ್ಕಾಗಿ ಕೇಳಲಾಗಿದೆ. ಜತೆಗೆ ಮೂಲ್ಕಿಯಲ್ಲಿ 135 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇಲ್ಲಿಯೂ ಹೈಕೋರ್ಟ್ ಪೀಠ ತೆರೆಯಬಹುದು. ಹೈಕೋರ್ಟ್ ಪೀಠ ಮಂಜೂರಾದರೆ ಬಜೆಟ್ನಲ್ಲಿ ಹಣ ನಿಗದಿ ಪಡಿಸಬೇಕು, ಹೈಕೋರ್ಟ್ನ ಐದು ಮಂದಿ ನ್ಯಾಯಾಧೀಶ ತಂಡ ಭೇಟಿ ನೀಡಿ ಹೈಕೋರ್ಟ್ ಪೀಠ ಸ್ಥಾಪನೆಗೆ ಸೂಕ್ತ ಸ್ಥಳವವನ್ನು ಗುರುತಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳಿವೆ. ಹುಬ್ಬಳ್ಳಿ - ಧಾರವಾಡ, ಗುಲ್ಬರ್ಗದಲ್ಲಿ ಹೈಕೋರ್ಟ್ನ ಸಂಚಾರಿ ಪೀಠ ಇದೆ. ಕರಾವಳಿ ಭಾಗದಲ್ಲಿ ಧಾರವಾಡ, ಗುಲ್ಬರ್ಗಕ್ಕಿಂತ ಹೆಚ್ಚು ಪ್ರಕರಣಗಳಿವೆ. ಮಂಗಳೂರಿನಲ್ಲಿ ‘ಕೆನಕ್ಟಿವಿಟಿ’ ಉತ್ತಮವಾಗಿರುವುದರಿಂದ ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಂಗಳೂರು, ಕೊಡಗು ಜಿಲ್ಲೆಗಳಿಗೂ ಅನುಕೂಲವಾಗಲಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಹೈಕೋರ್ಟ್ ಪೀಠ ಸ್ಥಾಪನೆಗೆ ಹೋರಾಟ ಮಾಡಿ ಯಶಸ್ವಿಯಾಗಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿರುವ ಡಿ. ಬಿ. ಹಿರೇಮಠ ಮಾತನಾಡಿ ಹೈ ಕೋರ್ಟ್ ಪೀಠ ಸ್ಥಾಪನೆಯಿಂದ ಈ ಭಾಗದ ಬಡ ಕಕ್ಷಿದಾರರಿಗೆ ಆರ್ಥಿಕವಾಗಿ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಇಲ್ಲಿ ಹೈಕೋರ್ಟ್ ಪೀಠದ ಅಗತ್ಯ ಇದೆ. ಹೋರಾಟಕ್ಕೆ ಸರ್ವರ ಬೆಂಬಲ ಅಗತ್ಯ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮಾಜಿ ರಾಜ್ಯಸಭಾ ಸದಸ್ಯ ಇಬ್ರಾಹಿಂ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಹೆಚ್. ವಿ. ರಾಘವೇಂದ್ರ ಸೇರಿದಂತೆ ವಿವಿಧ ವಕೀಲರ ಸಂಘಗಳ ಅಧ್ಯಕ್ಷರು, ವಿವಿಧ ಸಂಘಟನೆಗಳು ಮುಂದಾಳುಗಳು ಉಪಸ್ಥಿತರಿದ್ದರು.