
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ರಾತ್ರಿ 9 ಗಂಟೆಗೆ ಮಂಗಳೂರು ಅಘೋಷಿತ ಬಂದ್
ಮಂಗಳೂರು; ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಸಹಜ ಸ್ಥಿತಿಗೆ ಮರಳಿ ಯಾವುದೇ ಅಹಿತಕರ ಘಟನೆಗಳು ನಡೆಯದಿದ್ದರೂ ಮಂಗಳೂರು ಮಾತ್ರ ಅಘೋಷಿತವಾಗಿ ‘ಬಂದ್’ ಆಗುತ್ತಿದೆ. ಪೊಲೀಸರೇ ಅಘೋಷಿತ ಕರ್ಫ್ಯೂ ಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಕಾನೂನು ಸುವ್ಯವಸ್ಥೆಯ ನೆಪವೊಡ್ಡಿ ರಾತ್ರಿ 9 ಗಂಟೆಗೆ ಬಾರ್, ರೆಸ್ಟೋರೆಂಟ್ಗಳನ್ನು ಬಲವಂತವಾಗಿ ಬಂದ್ ಮಾಡಿಸಲಾಗುತ್ತಿದೆ
ಬಜ್ಪೆಯಲ್ಲಿ ನಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕಗ್ಗೊಲೆಯನ್ನ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮರುದಿವಸವೇ ಬಂದ್ ಗೆ ಕರೆ ನೀಡಿತ್ತು. ಬಂದ್ ಗೆ ಕರೆ ನೀಡಿ ಅದರ ನೆಪದಲ್ಲಿ ಬಸ್ಸಿಗೆ ಕಲ್ಲೆಸೆದಿದ್ದಕ್ಕೆ ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಈಗಾಗಲೇ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂದ್ಗೆ ಕರೆ ನೀಡಿದವರ ವಿರುದ್ಧ ಕೇಸು ಜಡಿದ ಪೊಲೀಸರೇ ಇದೀಗ ಯಾವುದೇ ಮುನ್ಸೂಚನೆ ನೀಡದೆ ನಗರವನ್ನು ಬಂದ್ ಮಾಡಿಸುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಮಂಗಳೂರು ನಗರದ ಕೆಲವು ಕಡೆ ಮತ್ತು ಉಳ್ಳಾಲದಲ್ಲಿ ಬಾರ್, ರೆಸ್ಟೋರೆಂಟ್, ಫಾಸ್ಟ್ ಪುಡ್, ಹೊಟೇಲ್, ಇನ್ನಿತರ ಅಂಗಡಿಗಳನ್ನ ಪೊಲೀಸರು ಏಕಾಏಕಿ ಬಂದ್ ಮಾಡಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಇಲ್ಲದಿದ್ದರೂ ಮುಂಜಾಗ್ರತೆ ನೆಪದಲ್ಲಿ ರೆಸ್ಟೋರೆಂಟ್ ಗಳನ್ನ ಪೊಲೀಸರು 9 ಗಂಟೆಗೆ ಒಳನುಗ್ಗಿ ಬಂದ್ ಮಾಡಿಸುವುದು ಎಷ್ಟು ಸರಿ? ಮೊದಲೇ ಸೂಚನೆ ಕೊಟ್ಟಿದ್ದರೆ ಓಕೆ, ಯಾವುದೇ ಸೂಚನೆ ಇಲ್ಲದೆ ಹೊಟೇಲ್ ಬಂದ್ ಮಾಡಿಸಿದರೆ ಮಾಡಿಟ್ಟ ಊಟ, ತಿಂಡಿಗಳನ್ನು ಏನು ಮಾಡಬೇಕು ಎಂದು ಹೊಟೇಲ್ ಮಾಲಕರು ಪ್ರಶ್ನಿಸಿದ್ದಾರೆ.
ಮಂಗಳೂರು ನೈಟ್ ಲೈಫ್..
ಮಂಗಳೂರು ರಾತ್ರಿ 7 ಗಂಟೆಯಾಗುತ್ತಿದ್ದಂತೆ ಡೆಡ್ ಸಿಟಿ ಆಗುತ್ತಿದೆಯೆಂದು ಡಿಸಿಎಂ ಡಿಕೆ ಶಿವಕುಮಾರ್ ಇತ್ತೀಚೆಗೆ ಅಸೆಂಬ್ಲಿಯಲ್ಲಿ ಪ್ರಸ್ತಾಪಿಸಿದ್ದರು. ಈಗ ಬಜಪೆಯಲ್ಲಿ ನಡೆದಿರುವ ಕೊಲೆಯನ್ನ ಮುಂದಿಟ್ಟು ಪೊಲೀಸರೇ ನಗರದಲ್ಲಿ ಜನಸಂಚಾರ ಇಲ್ಲದಂತೆ ಮಾಡುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ ಸಹ ಪೊಲೀಸರು ರಸ್ತೆಯುದ್ಧಕ್ಕೂ ಸೈರನ್ ಮೊಳಗಿಸಿ ಅತ್ತಿಂದಿತ್ತ ಓಡಾಡಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ಉಗಿದು ಬಂದ್ ಮಾಡಿಸಿದರೆ, ರೆಸ್ಟೋರೆಂಟ್ ಗಳಲ್ಲಿ ಒಳನುಗ್ಗಿ ಗ್ರಾಹಕರನ್ನೇ ಹೆದರಿಸಿ ಓಡಿಸುವ ಯತ್ನ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಲ್ಲಿ ಪ್ರಶ್ನಿಸಿದರೆ ನಮಗೆ ಮೇಲಿನ ಆದೇಶ ಇದೆಯೆಂದು ಸಬೂಬು ನೀಡುತ್ತಾರೆ.
ಬಸ್ಸುಗಳ ಸಂಚಾರವೂ 8-9 ಗಂಟೆಗೆ ಕ್ಲೋಸ್ ಆಗುವಂತೆ ಮಾಡುತ್ತಿದ್ದಾರೆ. ನಗರ ಸಂಚಾರಿ ಬಸ್ಸುಗಳನ್ನು ಬೇಗನೆ ನಿಲ್ಲಿಸಿದರೆ ಜನಸಾಮಾನ್ಯರ ಪಾಡೇನು. ಎಂದಿನಂತೆ ಕೆಲಸಕ್ಕೆ ಬಂದು ಹೋಗುವ ಜನರು ಬಸ್ ಸೌಕರ್ಯ ಇಲ್ಲದೆ ಹಿಡಿಶಾಪ ಹಾಕುವ ಸ್ಥಿತಿಯಾಗಿದೆ. ಅಹಿತಕರ ಘಟನೆ ಆಗುವ ಮೊದಲು ಎಚ್ಚತ್ತುಕೊಳ್ಳದ ಆರಕ್ಷಕರು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ವಾರ್ ಆಗುತ್ತಿರುವ ನೆಪದಲ್ಲಿ ಈಗೇನೋ ಆಗುತ್ತೆ ಎನ್ನುವಂತೆ ರಾತ್ರಿ ಸಂಚಾರವನ್ನು ಕಡಿತ ಮಾಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ರಾತ್ರಿ ವೇಳೆ ಗಸ್ತು ತಿರುಗಲಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿ. ಜನಸಾಮಾನ್ಯರಿಗೆ ರಕ್ಷಣೆ ನೀಡಲಿ. ಅದು ಬಿಟ್ಟು 9 ಗಂಟೆಗೆ ಸಂಚಾರ ಬಂದ್ ಆಗಬೇಕು ಎನ್ನುವುದು ಪರೋಕ್ಷವಾಗಿ ಕಿಡಿಗೇಡಿಗಳಿಗೆ ದುಷ್ಕೃತ್ಯ ಎಸಗಲು ಪ್ರೇರಣೆ ನೀಡಿದಂತಾಗುತ್ತದೆ ಎನ್ನುತ್ತಾರೆ ಬಾರ್ ಮಾಲಕರು.
ನಾವು ಚಿಕನ್ ಕಬಾಬ್ ಮಾಡಲು ಮಸಾಲ ತಯಾರಿಸಿಟ್ಟು ಬಾಣಲೆಯಲ್ಲಿ ಬಿಸಿ ಎಣ್ಣೆಯೂ ಸುಡುತ್ತಿರುವಾಗಲೇ ಪೊಲೀಸರು ಏಕಾಏಕಿ ಬಂದ್ ಮಾಡಿಸಿದರೆ ನಾವೇನು ಮಾಡುವುದು. ಹತ್ತು ನಿಮಿಷದಲ್ಲಿ ಬಂದ್ ಮಾಡದಿದ್ದರೆ ಪೊಲೀಸರು ನಮ್ಮ ಮೇಲೆರಗಲು ಬರುತ್ತಾರೆಂದು ತೊಕ್ಕೊಟ್ಟಿನ ಫಾಸ್ಟ್ ಫುಡ್ ವ್ಯಾಪಾರಿ ಅಳಲು ಹೇಳಿಕೊಂಡಿದ್ದಾರೆ.