ಒಳ ಮೀಸಲಾತಿ: ಸಮೀಕ್ಷಾ ಕಾರ್ಯ ಸ್ಥಗಿತ ಗೊಳಿಸುವಂತೆ ಮನವಿ

ಒಳ ಮೀಸಲಾತಿ: ಸಮೀಕ್ಷಾ ಕಾರ್ಯ ಸ್ಥಗಿತ ಗೊಳಿಸುವಂತೆ ಮನವಿ


ಮಂಗಳೂರು: ಒಳ ಮೀಸಲಾತಿ ಸಮೀಕ್ಷೆಯ ಹೆಸರಿನಲ್ಲಿ ಸಂವಿಧಾನ-ಕಾನೂನು ವಿರೋಧಿ ಕೆಲಸ ನಡೆಯುತ್ತಿದ್ದು, ರಾಜ್ಯದ ಪರಿಶಿಷ್ಟ ಜಾತಿಗಳ ಜನರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದ್ದು, ಅವರ ವಿರುದ್ಧ ತುರ್ತು ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಮೀಕ್ಷೆಯಲ್ಲಿನ ಸಂವಿಧಾನ ವಿರೋಧಿ ಅಕ್ರಮಗಳನ್ನು ಸರಿಪಡಿಸುವ ವರೆಗೆ, ಸಮೀಕ್ಷಾ ಕಾರ್ಯ ಸ್ಥಗಿತ ಗೊಳಿಸುವಂತೆ ದ.ಕ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಪೊಲೀಸ್ ಅಧಿಕ್ಷಕರಿಗೆ ದೂರು ಸಲ್ಲಿಸಲಾಯಿತು.

ದೂರಿನಲ್ಲಿ ತಮಗೂ ತಿಳಿದಿರುವಂತೆ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳ ನಡುವೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿದೆ. ಸದ್ರಿ ಆಯೋಗವು 58,932 ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಇಂದಿನಿಂದ, ಮೇ 05 ರಿಂದ, ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸುತ್ತದೆ ಎಂದು ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.

ಸದ್ರಿ ಆಯೋಗದ ಅಧ್ಯಕ್ಷರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಅವುಗಳ ಪೈಕಿ ‘ಯು ಟ್ಯೂಬ್ ಚಾನೆಲ್’ ಕೂಡಾ ಒಂದು. ಈ ಚಾನೆಲ್‌ಗಾಗಿ ಇತ್ತೀಚೆಗೆ ಪತ್ರಕರ್ತ ಯತಿರಾಜ್ ಬ್ಯಾಲಹಳ್ಳಿ ಎಂಬವರು ನ್ಯಾ. ಹೆಚ್.ಎನ್. ನಾಗಮೋಹನದಾಸ್ ಅವರ ವಿಶೇಷ ವಿಡಿಯೋ ಸಂದರ್ಶನ ನಡೆಸಿರುತ್ತಾರೆ. ಈ ಸಂದರ್ಶನದ ವೇಳೆ ರಾಜ್ಯದಲ್ಲಿ ನಡೆಯಲಿರುವ ಪರಿಶಿಷ್ಟ ಜಾತಿಗಳ ಸಮೀಕ್ಷೆ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುವ ಪತ್ರಕರ್ತರು, ರಾಜ್ಯದಲ್ಲಿ ಸಾಕಷ್ಟು ಕಡೆ ಪರಿಶಿಷ್ಟ ಜಾತಿಗಳ ಜನರು ಕ್ರೈಸ್ತ ಅಥವಾ ಇಸ್ಲಾಂ ಧರ್ಮಗಳಿಗೆ ಮತಾಂತರ ಆಗಿದ್ದು, ಸಮೀಕ್ಷೆಯಲ್ಲಿ ಅವರ ಪಾತ್ರದ ಬಗ್ಗೆಯೂ ಪ್ರಶ್ನೆ ಕೇಳುತ್ತಾರೆ.

ಈ ಪ್ರಶ್ನೆಗೆ ಆಯೋಗದ ಅಧ್ಯಕ್ಷರು ನೀಡುವ ಉತ್ತರವನ್ನು ಇಲ್ಲಿ ತಮ್ಮ ಪರಿಶೀಲನೆಗಾಗಿ ನೀಡಲಾಗಿದೆ. ನೀವು ಕ್ರೈಸ್ತ ಧರ್ಮಕ್ಕೆ ಸೇರಿದ್ದೇವೆ ಎಂದು ಪ್ರಮಾಣ ಪತ್ರ ತೆಗೆದುಕೊಂಡಿದ್ದರೆ, ನೀವು 101 ಜಾತಿ ಪಟ್ಟಿಯಲ್ಲಿ ಬರಲ್ಲ. ಇಸ್ಲಾಂ ಧರ್ಮಕ್ಕೆ ನೀವು ಮತಾಂತರಗೊಂಡಿದ್ದರೆ, ಆ ಹೆಸರಲ್ಲಿ ನೀವು ಜಾತಿ ಪ್ರಮಾಣ ಪತ್ರ ತೆಗೆದುಕೊಂಡಿದ್ದರೆ, ನೀವು ಈ 101 ಜಾತಿ ಪಟ್ಟಿಯಲ್ಲಿ ಬರಲ್ಲ. ಹಾಗಾಗಿ ಅಂತಹವರನ್ನು ಸಮೀಕ್ಷೆಯಲ್ಲಿ ಒಳಪಡಿಸಲು ಸಾಧ್ಯವಿಲ್ಲ. ಒಂದು ವೇಳೆ, ಹೊರಗಡೆ, ಆಚರಣೆಗೆ ನಾವು ಕ್ರೈಸ್ತರು, ಆದರೆ ಸರಕಾರದ ಅನುಕೂಲಗಳನ್ನು ಪಡೆಯುವುದಕ್ಕೆ, ಸರಕಾರಿ ದಾಖಲೆಗಳಲ್ಲಿ ನಾನು ಪರಿಶಿಷ್ಟ ಜಾತಿಯಂತಲೇ ಮುಂದುವರಿಸುತ್ತೇನೆ. ಆಗ ನಿಮ್ಮ ಉಪ ಜಾತಿಯನ್ನು ನೀವು ಬರೆಸಿದರೆ, ನಿಮ್ಮನ್ನು ಸಮೀಕ್ಷೆಗೆ ಒಳಪಡಿಸುತ್ತೇವೆ ಎನ್ನುತ್ತಾರೆ.

‘ಒಟ್ಟಾರೆಯಾಗಿ ಈ ಯಾವುದೇ ಮತಾಂತರ ಎನ್ನುವುದು ಪ್ರಶ್ನೆಯಾಗಿ ಉಳಿಯಲ್ಲ, ಬದಲು, ಅವರು ಸರ್ಟಿಫಿಕೇಟ್ ತೆಗೆದುಕೊಂಡಿದ್ದರೆ ಮಾತ್ರ ಸಮಸ್ಯೆ ಯಾಗುವಂತಹದ್ದು ಅಥವಾ ಅವರನ್ನು (ಸಮೀಕ್ಷೆಯಿಂದ) ಕೈ ಬಿಡುವಂತಹ ಪ್ರಮೇಯ ಬರುತ್ತದೆ?’ ಎಂದು ಸ್ಪಷ್ಟನೆಗಾಗಿ ಎಂಬಂತೆ ಮರು ಪ್ರಶ್ನೆ ಕೇಳುತ್ತಾರೆ. ಆಗ ಆಯೋಗದ ಅಧ್ಯಕ್ಷರು, ‘ನಿಜ, ನಿಜ’ ಎಂದು ಸ್ಪಷ್ಟನೆ ನೀಡುತ್ತಾರೆ.

ಸದ್ರಿ ಆಯೋಗದ ಅಧ್ಯಕ್ಷರ ಈ ಮಾತು ಅತ್ಯಂತ ಆಘಾತಕಾರಿಯಾದುದು. ಇದು ಸಂವಿಧಾನ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆ. ಸಂವಿಧಾನದ ವಿಧಿ 341(1) ರಡಿಯಲ್ಲಿ ಭಾರತದ ರಾಷ್ಟ್ರಪತಿ ಹೊರಡಿಸಿರುವ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ (ತಿದ್ದುಪಡಿಗಳು ಸೇರಿದಂತೆ) ಹಿಂದೂ, ಸಿಖ್ ಮತ್ತು ಭೌದ್ಧಧರ್ಮ ಆಚರಿಸುವವರನ್ನು ಹೊರತು ಪಡಿಸಿ ಇತರೆ ಯಾರನ್ನೂ ಪರಿಶಿಷ್ಟ ಜಾತಿಯವರು ಎಂದು ಪರಿಗಣಿಸಲು ಸಂವಿಧಾನ ಅವಕಾಶ ನೀಡುವುದಿಲ್ಲ. ಯಾರೇ ಆಗಲಿ, ಇದಕ್ಕೆ ವ್ಯತಿರಿಕ್ತವಾಗಿ, ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಪಡೆದಿದ್ದರೆ, ಅದು ಸಂವಿಧಾನಕ್ಕೆ ಅಪಚಾರ, ವಂಚನೆ ಎಸಗಿ ಪಡೆದ ಜಾತಿ ಸರ್ಟಿಫಿಕೇಟ್ ಎನಿಸಿಕೊಳ್ಳುತ್ತದೆ.

‘ಧರ್ಮದ ಆಚರಣೆಯಲ್ಲಿ ಕ್ರೈಸ್ತರಾಗಿಯೂ, ಸರಕಾರದ ಅನುಕೂಲಗಳನ್ನು ಪಡೆಯುದಕ್ಕೆ ಪರಿಶಿಷ್ಟ ಜಾತಿ ಎಂದು ವಂಚಿಸುತ್ತಾ, ಉಪ ಜಾತಿ ಬರೆಸಿದರೆ ನಿಮ್ಮನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸುತ್ತೇವೆ’ ಎಂಬ ಅರ್ಥದ ಆಯೋಗದ ಅಧ್ಯಕ್ಷರ ಮಾತು, ಸಂವಿಧಾನ ಮತ್ತು ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿಯ ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದು, ಸರಕಾರ ಮತ್ತು ಪರಿಶಿಷ್ಟ ಜಾತಿಗಳ ಜನರಿಗೆ ವಂಚಿಸುತ್ತಿರುವ ವಂಚಕರನ್ನು ಸಮರ್ಥಿಸುವ ಸ್ವರೂಪದ್ದು ಮತ್ತು ಸಮೀಕ್ಷೆಯ ಹೆಸರಿನಲ್ಲಿ ಅವರಿಗೆ ಅಕ್ರಮವಾಗಿ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವ ದುರುದ್ದೇಶವನ್ನು ಬಹಿರಂಗ ಪಡಿಸಿದೆ. 

ಆಯೋಗದ ಅಧ್ಯಕ್ಷರು ಮಾಧ್ಯಮಕ್ಕೆ ನೀಡಿರುವ ಈ ಸುಳ್ಳು, ದಾರಿ ತಪ್ಪಿಸುವ, ಸಂವಿಧಾನ ಮತ್ತು ಕಾನೂನು ಬಾಹಿರ  ಮಾಹಿತಿಯಿಂದಾಗಿ, ಈ ಸಮೀಕ್ಷೆಯಲ್ಲಿ ಕರ್ತವ್ಯ ನಿರ್ವಹಿಸುವ ರಾಜ್ಯದ ಸುಮಾರು 59,000 ಸರಕಾರಿ ನೌಕರರು ರಾಜ್ಯದ ಪರಿಶಿಷ್ಟ ಜಾತಿಗಳ ಜನರ ಸಂವಿಧಾನ ಬದ್ಧ ಅವಕಾಶಗಳನ್ನು, ಸೌಲಭ್ಯಗಳನ್ನು ಇತರೆ ಜನರು ಕಾನೂನು ಬಾಹಿರವಾಗಿ ಅನುಭವಿಸಲು ಅನುವು ಮಾಡಿಕೊಡಲು ತಮ್ಮ ಅಧಿಕಾರವನ್ನು ಬಳಸುವಂತಾಗಿದೆ. ಇದಲ್ಲದೆ, ಈ ಅನ್ಯಾಯ, ಅಕ್ರಮವನ್ನು ಪರಿಶಿಷ್ಟ ಜಾತಿಗಳ ಪ್ರಜ್ಞಾವಂತರು ಸಹಜವಾಗಿ ಪ್ರಶ್ನಿಸುವುದರಿಂದ, ಇವರೆಲ್ಲರ ವಿರುದ್ಧ,  ಸುಳ್ಳು ಜಾತಿ ಸರ್ಟಿಫಿಕೇಟ್ ಪಡೆದು ಅಕ್ರಮದಲ್ಲಿ ಪಾಲ್ಗೊಂಡವರು ದ್ವೇಷ, ವೈರತ್ವ ಸಾಧಿಸುವಂತಾಗುತ್ತದೆ. ಆದ್ದರಿಂದ ಆಯೋಗದ ಅಧ್ಯಕ್ಷರ ಈ ಮಾತು,  ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ, 1989 (ತಿದ್ದುಪಡಿಗಳ ಸಹಿತ) ರ ಸೆಕ್ಷನ್ 3(1)(q) ಮತ್ತು (u) ಹಾಗೂ ಸೆಕ್ಷನ್ 3(2)(vi) ಮತ್ತು (vii) ರನ್ವಯ ಇದು ಶಿಕ್ಷಾರ್ಹ ಅಪರಾಧವೂ ಆಗಿದೆ.

ಈ ವಿಸ್ತ್ರತ ಅಕ್ರಮಗಳನ್ನು ತಡೆಯಲು ಈ ಕೂಡಲೇ ರಾಜ್ಯ ಸರಕಾರ ಮತ್ತು ಈ ಆಯೋಗವನ್ನು ನಿರ್ವಹಿಸುತ್ತಿರುವ ನೋಡಲ್ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯು,  ಆಯೋಗದ ಅಧ್ಯಕ್ಷರ  ಈ ಹೇಳಿಕೆಯನ್ನು ಬಹಿರಂಗವಾಗಿ, ಅಧಿಕೃತ ಹೇಳಿಕೆ/ ಸ್ಪಷ್ಟನೆ ಮೂಲಕ, ’ಆಕ್ಷೇಪಾರ್ಹ ತಪ್ಪು ಹೇಳಿಕೆ’ ಎಂದು ತಿರಸ್ಕರಿಸ ಬೇಕಲ್ಲದೆ, ‘ಕ್ರೈಸ್ತ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವ ಯಾರೂ, ಅವರಲ್ಲಿ ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಇರಲಿ ಅಥವಾ ಇಲ್ಲದಿರಲಿ, ಪರಿಶಿಷ್ಟ ಜಾತಿಯವರು ಅಲ್ಲ, ಅವರನ್ನು ಈ ಸಮೀಕ್ಷೆಗೆ ಒಳ ಪಡಿಸಲಾಗುವುದಿಲ್ಲ’ ಎಂಬುದನ್ನು ಸ್ಪಷ್ಟ ಪಡಿಸ ಬೇಕು. ಇದಲ್ಲದೆ, ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಧರ್ಮದ ಹೆಸರು ಎಂಟ್ರಿ ಮಾಡಲು ಅಗತ್ಯವಾದ ಪ್ರತ್ಯೇಕ ಕಲಂ (ವಿಂಡೋ) ಒಂದನ್ನು ಸೇರಿಸಲು ತುರ್ತು ತಾಂತ್ರಿಕ ಕ್ರಮವನ್ನು ಕೈಗೊಂಡು, ಎಲ್ಲಾ ನೈಜ ಪರಿಶಿಷ್ಟ ಜಾತಿಗಳ ಜನರ ಧರ್ಮ ಯಾವುದು ಎಂಬುದನ್ನೂ ದಾಖಲಿಸ ಬೇಕು.

ಆಯೋಗದ ಅಧ್ಯಕ್ಷರು ಇನ್ನೊಂದು ಸಂವಿಧಾನ ವಿರೋಧಿ ಕೃತ್ಯವನ್ನು ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದೇನೆಂದರೆ, ಪರಿಶಿಷ್ಟ ಜಾತಿಗಳೆಂದು ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತ 101 ಜಾತಿಗಳ ಪೈಕಿ, ಕ್ರಮ ಸಂಖ್ಯೆ 1, 2 ಮತ್ತು 3 ರಲ್ಲಿ ಅನುಕ್ರಮವಾಗಿ ಪಟ್ಟಿ ಮಾಡಲಾಗಿರುವ ’ಆದಿ ಆಂಧ್ರ’, ’ಆದಿ ದ್ರಾವಿಡ’ ಮತ್ತು ‘ಆದಿ ಕರ್ನಾಟಕ’ ಎಂಬ ಹೆಸರಿನ ಜಾತಿಗಳನ್ನು, ಇವು ಮುರೂ ಒಂದೊಂದು ಜಾತಿಗಳಲ್ಲ. ಅವು ವಿವಿಧ ಜಾತಿಗಳನ್ನು ಒಳಗೊಂಡ ಒಂದೊಂದು ಗುಂಪು... ಸಮೀಕ್ಷೆಯ ವೇಳೆ ಜನ ತಮ್ಮ ಮೂಲ ಜಾತಿಯ ಹೆಸರು ಹೇಳಬೇಕು’ ಎಂದು ತಿಳಿಸಿದ್ದಾರೆ. 

ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಜಾತಿಗಳನ್ನು 1950 ರಲ್ಲಿ ರಾಷ್ಟ್ರಪತಿಗಳು ಹೊರಡಿಸಿರುವ ಅಧಿಸೂಚನೆಯಲ್ಲೇ ಜಾತಿಗಳು ಎಂದೇ ಪರಿಗಣಿಸಲಾಗಿದ್ದು, ನಂತರದ ಎಲ್ಲ ತಿದ್ದುಪಡಿಗಳ ಸಂದರ್ಭಗಳಲ್ಲಿಯೂ ಅವು ಮೂರನ್ನೂ ಜಾತಿಗಳು ಎಂದೇ ಪರಿಗಣಿಸಲಾಗಿದೆ. ಇದಲ್ಲದೆ ದೇಶದಲ್ಲಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕಾಗಿ ಸಂವಿಧಾನದ ವಿಧಿ 341(1) ರಲ್ಲಿ ಅಧಿಸೂಚಿಸಲಾದ ಪರಿಶಿಷ್ಟ ಜಾತಿಗಳ ಪಟ್ಟಿಗಳಲ್ಲಿ ಕೇವಲ ಜಾತಿಗಳು ಅಥವಾ ಜಾತಿಯ ಭಾಗಗಳು ಅಥವಾ ಜಾತಿಯ ಒಳಗಿನ ಗುಂಪುಗಳನ್ನು ಅಥವಾ ಒಂದು ಜಾತಿಯನ್ನು ರಾಜ್ಯದ ಒಂದು ನಿರ್ಧಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆಯೇ ಹೊರತು, ದೇಶದಲ್ಲಿ ಎಲ್ಲಿಯೂ ಜಾತಿಗಳ ಗುಂಪುಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರಿಸಲಾಗಿಲ್ಲ. ಆದ್ದರಿಂದ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ರಾಷ್ಟ್ರಪತಿಗಳಿಂದ ಅಧಿಸೂಚಿತ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಎಂಬ ಹೆಸರಿನ ಜಾತಿಗಳನ್ನು ಜಾತಿಗಳ ಗುಂಪು ಎಂದು ಪರಿಗಣಿಸಿರುವುದು ಮತ್ತು ಆ ಮೂರು ಜಾತಿಗಳ ಹೆಸರನ್ನು ಸಮೀಕ್ಷೆಯಲ್ಲಿ ಸಂಕೇತ ಸಂಖ್ಯೆಗಳೊಂದಿಗೆ ಉಲ್ಲೇಖಿಸಲಾಗುವ ಜಾತಿಗಳ ಪಟ್ಟಿಯಿಂದ ತೆಗೆದು ಹಾಕಿರುವುದು (ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ -2025, ಸಮೀಕ್ಷಾ ಕೈಪಿಡಿ -2025, ಅನುಬಂಧ-2 ಃ,  ಪುಟ 71) ಸಂವಿಧಾನ ವಿರೋಧಿ ಕ್ರಮ. ಗೌರವಾನ್ವಿತ ರಾಷ್ಟ್ರಪತಿಗಳ ಅಧಿಸೂಚನೆಯನ್ನು ತಿರುಚಲು, ಯಾವುದೇ ರೀತಿಯಲ್ಲಿ ತಿದ್ದುಪಡಿ ಮಾಡಲು ಯಾರಿಗೂ ಅಧಿಕಾರ ಇಲ್ಲ. 

ಈ ಬಗ್ಗೆ ಸಂಸತ್ತಿನ ಅಧಿಕಾರಕ್ಕೆ ಕೂಡಾ ಸಂವಿಧಾನದ ವಿಧಿ 341(2) ರಲ್ಲಿ ಮಿತಿಗಳನ್ನು ಹೇರಲಾಗಿದೆ. ಅಧಿಕಾರ ದುರುಪಯೋಗದ ಪರಾಕಾಷ್ಠೆಯ ಈ ಕುಕೃತ್ಯದ ವಿರುದ್ಧ ಪೊಲೀಸ್ ಇಲಾಖೆ ಮತ್ತು ಸರಕಾರ ತುರ್ತು ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸಮೀಕ್ಷೆಯ ಕಲಂನಲ್ಲಿ ಕೈಬಿಟ್ಟಿರುವ ಈ ಮುರೂ ಜಾತಿಗಳ ಹೆಸರುಗಳನ್ನು ಅವುಗಳ ಸಂಕೇತ ಸಂಖ್ಯೆಗಳೊಂದಿಗೆ ಇತರ ಜಾತಿಗಳ ಜೊತೆಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಆ ಮೂಲಕ ಈ ಮೂರೂ ಜಾತಿಗಳಿಗೆ ಸೇರಿದ ಜನರು ಯಾವುದೇ ಆತಂಕ, ಗೊಂದಲಗಳು ಇಲ್ಲದೆ ತಮ್ಮ ಜಾತಿಯನ್ನು ಸಮೀಕ್ಷೆಯಲ್ಲಿ ಆದಿ ಆಂಧ್ರ ಅಥವಾ ಆದಿ ದ್ರಾವಿಡ ಅಥವಾ ಆದಿ ಕರ್ನಾಟಕ ಎಂದು ದಾಖಲಿಸಲು ಅವಕಾಶ ಮಾಡಿಕೊಡಬೇಕು.

ಕಾಂತರಾಜ್ ಮತ್ತು ಜಯಪ್ರಕಾಶ್ ಹೆಗ್ಡೆ ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ರಾಜ್ಯದ ಜನರ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯಲ್ಲಿ (ಜಾತಿ ಗಣತಿ) ರಾಜ್ಯದಲ್ಲಿ 180 ಪರಿಶಿಷ್ಟ ಜಾತಿಗಳು ಮತ್ತು 105 ಪರಿಶಿಷ್ಟ ಬುಡಕಟ್ಟುಗಳು ಇವೆ ಎಂದು ಉಲ್ಲೆಖಿ ಸಲಾಗಿದೆ ಎಂದು ಪತ್ರಿಕಾ ವರದಿ ಹೇಳುತ್ತದೆ. ಇದು ಸಂವಿಧಾನ ವಿರೋಧಿ ಕೃತ್ಯ. ಈ ರೀತಿಯಲ್ಲಿ ಯಾವುದೇ ಜಾತಿಗಳನ್ನು ಪರಿಶಿಷ್ಟ ಜಾತಿಗಳೆಂದು ಕರೆಯಲು, ಗುರುತಿಸಲು ಈ ಆಯೋಗಕ್ಕೆ ಯಾವುದೇ ಅಧಿಕಾರ, ಕಾರ್ಯ ವ್ಯಾಪ್ತಿ ಇಲ್ಲ. ಇದು ಶಿಕ್ಷಾರ್ಹ ಅಪರಾಧವೂ ಹೌದು. ಇನ್ನೊಂದು ಕಡೆ ವೀರಶೈವ ಲಿಂಗಾಯತ ಗುಂಪಿಗೆ ಸೇರಿರುವ ಬೇಡ ಜಂಗಮ ಜಾತಿಯ ಕೆಲವು ಸದಸ್ಯರು ಪರಿಶಿಷ್ಟ ಜಾತಿಯ ಸರ್ಟಿಫಿಕೇಟ್ ಪಡೆದಿರುವುದನ್ನು ಆ ಆಯೋಗದ ಮೂಲಗಳು ಬಹಿರಂಗ ಪಡಿಸಿವೆ ಇವು ಎಲ್ಲವೂ ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಜನರ ಸಂವಿಧಾನ-ಕಾನೂನು ಬದ್ಧ ಹಕ್ಕುಗಳು ಮತ್ತು ಸೌಲಭ್ಯಗಳ್ಳನ್ನು ಅಕ್ರಮವಾಗಿ ಕಿತ್ತುಕೊಳ್ಳಲು ಭಲಾಢ್ಯ ಸಮುದಾಯಗಳ ಕೆಲವು ಜನರು ನಡೆಸುತ್ತಿರುವ ಷಡ್ಯಂತ್ರಗಳು. ಆದ್ದರಿಂದ ಇವರೆಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಅಲ್ಲದೆ, ಈ ಪರಿಶಿಷ್ಟ ಜಾತಿಗಳ ಜನರ ಹಕ್ಕುಗಳು ಮತ್ತು ಸೌಲಭ್ಯಗಳ ಸಂರಕ್ಷಣೆಗೆ ಪೊಲೀಸ್ ಇಲಾಖೆ ಮತ್ತು ಸರಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಈ ಮೇಲೆ ವಿವರಿಸಿರುವ ಎಲ್ಲಾ ಸಂವಿಧಾನ-ಕಾನೂನು ವಿರೋಧಿ ಅಕ್ರಮಗಳ ವಿರುದ್ಧ ಅಗತ್ಯ ತುರ್ತು ಕ್ರಮಕೈಗೊಳ್ಳುವ ವರೆಗೆ ನ್ಯಾ. ಹೆಚ್.ಎನ್. ನಾಗಮೋಹನದಾಸ್ ಆಯೋಗ ಇಂದಿನಿಂದ ಆರಂಭಿಸಿರುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025 ನ್ನು ಸ್ಥಗಿತಗೊಳಿಸಲು ಅಗತ್ಯ ತುರ್ತು ಕಾನೂನು ಮತ್ತು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತೇವೆ ಎಂದು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article