
ನಂದಳಿಕೆ ಬಾಲಚಂದ್ರ ರಾವ್ ನಿಧನ
ಮಂಗಳೂರು: ಕರ್ಣಾಟಕ ಬ್ಯಾಂಕಿನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತಿಯಾಗಿದ್ದ ನಂದಳಿಕೆ ಬಾಲಚಂದ್ರ ರಾವ್ (72) ಮೇ 14ರ ಬುಧವಾರ ಹೃದಯಾಘಾತದಿಂದ ನಿಧನರಾದರು.
ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ನಂದಳಿಕೆ ಮುದ್ದಣ ಸ್ಮಾರಕ ಮಿತ್ರಮಂಡಳಿಯ ಸ್ಥಾಪಕರಲ್ಲಿ ಓರ್ವರಾದ ನಂದಳಿಕೆ ಬಾಲಚಂದ್ರ ರಾವ್ ಅವರ ಅಂತಿಮ ದರ್ಶನ ಮೇ.15ರಂದು ಬೆಳಿಗ್ಗೆ 6 ರಿಂದ ಬೆಳಿಗ್ಗೆ 10 ಗಂಟೆಯವರೆಗೆ ಮಂಗಳೂರಿನ ಬಿಜೈನ ಚೌಟಾಸ್ ಕಂಪೌಡಿನಲ್ಲಿರುವ ಅವರ ಸ್ವಗೃಹದಲ್ಲಿರುತ್ತದೆ.
ನಂತರ ಕಾರ್ಕಳ ತಾಲೂಕಿನ ನಂದಳಿಕೆಯ ಐಸಿರಿ ಮನೆಯಲ್ಲಿ ಅಂತಿಮ ದರ್ಶನದ ವ್ಯವಸ್ಥೆಯಾಗಿದೆ. ಬಳಿಕ ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಅವರು ಕವಿ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಸ್ಮಾರಕ ಮಿತ್ರಮಂಡಳಿ ಸ್ಥಾಪನೆ ಮಾಡಿ ಅದರ ಮೂಲಕ ಕವಿಯನ್ನು ನೆನಪಿಸುವ ನೂರಾರು ಕಾರ್ಯಕ್ರಮಗಳನ್ನು, ಕೆಲಸಗಳನ್ನು ನಂದಳಿಕೆ ಗ್ರಾಮದಲ್ಲಿ ಮಾಡಿದರು.
ಕವಿ ಮುದ್ದಣನ ಸಮಗ್ರ ಕಾವ್ಯ ಸಂಪುಟ ಬಿಡುಗಡೆ, ಮುದ್ದಣ ಮನೋರಮೆಯರ ಸಂಭಾಷಣೆಯ ಡಿವಿಡಿ, ಹುಟ್ಟೂರಿನಲ್ಲಿ ಮುದ್ದಣನ ನೆನಪಿನ ಗ್ರಂಥಾಲಯ, ಮುದ್ದಣ ಸ್ಮಾರಕ, ಮುದ್ದಣನ ಯಕ್ಷಗಾನ ಸಂಪುಟಗಳು, ಪ್ರತಿ ವರ್ಷ ಕವಿ ಮುದ್ದಣ ದಿನಾಚರಣೆ, ಸ್ಟಾಂಪ್ ಬಿಡುಗಡೆ, ಮುದ್ದಣನ ಹೆಸರಲ್ಲಿ ನೂರಾರು ಸಾಹಿತ್ಯಿಕ ಕಾರ್ಯಕ್ರಮಗಳು, ಮುದ್ದಣ ಸ್ಮಾರಕ ಪ್ರಶಸ್ತಿ ಪೀಠ ಸ್ಥಾಪನೆ, ಮಂಗಳೂರು ವಿವಿಯಲ್ಲಿ ಕವಿಯ ನೆನಪಿನ ಅಧ್ಯಯನ ಪೀಠಕ್ಕಾಗಿ ಶ್ರಮಿಸಿದ್ದರು.
ಸಾಹಿತ್ಯ ಸಾಂಸ್ಕೃತಿಕ, ಯಕ್ಷಗಾನ ರಂಗದಲ್ಲಿ ಆಸಕ್ತರಾಗಿ, ತನ್ನ ಹುಟ್ಟೂರು ನಂದಳಿಕೆಯಲ್ಲಿ ಕವಿ ಮುದ್ದಣನ ನೆನಪಿಗಾಗಿ ಅಧ್ಯಯನ ಕೇಂದ್ರ ಸ್ಥಾಪಿಸಿದ್ದ, ಹಲವು ಕೃತಿಗಳಿಗಿ ಸಂಪಾದಕರಾಗಿ, ಸಹ ಸಂಪಾದಕರಾಗಿ ಕೆಲಸ ಮಾಡಿದ ಕರ್ಣಾಟಕ ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನಿವೃತ್ತರಾಗಿದ್ದರು.