ಜನರ ಬದುಕಿಗೆ ಕಾಂಗ್ರೆಸ್ ಸರಕಾರ ಶಾಪ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಜನರ ಬದುಕಿಗೆ ಕಾಂಗ್ರೆಸ್ ಸರಕಾರ ಶಾಪ: ಸಂಸದ ಕೋಟ ಶ್ರೀನಿವಾಸ ಪೂಜಾರಿ


ಮಂಗಳೂರು: ರಾಜ್ಯದ ಜನರ ಬದುಕಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದ್ದು, ದ್ವೇಷ, ಅಸೂಯೆ, ಅಪಪ್ರಚಾರದ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂಡಾ ಹಗರಣ, ವಾಲ್ಮೀಕಿ ಹಗರಣ, ರೈತರಿಗೆ ಮೋಸ, ಬಾಣಂತಿಯರ ಸಾವು, ವಕ್ಫ್ ಭೂಗಳ್ಳತನ, ಹಾಲಿನ ದರ ಏರಿಕೆ, ಶೇ.60 ಕಮಿಷನ್, ದಲಿತರ ಹಣ ಲೂಟಿ, ವಜೀರ್ -ಏ-ಆಲ, ಹನಿ ಟ್ರ್ಯಾಪ್ ಪ್ರಕರಣಗಳು ನಡೆದಿವೆ. ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಇಷ್ಟೆಲ್ಲ ವೈಫಲ್ಯಗಳಿದ್ದರೂ ಸರ್ಕಾರ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಮಾಡಿ ಜನರನ್ನು ಮೋಸ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್ ನಿಜವಾದ ಸಾಧನೆ ಎಂದು  ಟೀಕಿಸಿದರು.

ಪ್ರಧಾನಿ ಕಿಸಾನ್ ಸನ್ಮಾನ್ ಯೋಜನೆಯಡಿ ಕೇಂದ್ರದಿಂದ ವಾರ್ಷಿಕ 6 ಸಾವಿರ ರು. ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ಕೃಷಿಕರ ಖಾತೆಗೆ ಜಮೆ ಆಗುತ್ತಿತ್ತು. ಬಿಎಸ್‌ವೈ ಸರ್ಕಾರ ಜಾರಿಗೆ ತಂದ ಈ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದೆ. ಎಸ್‌ಸಿ ಎಸ್‌ಟಿಗೆ ಮೀಸಲಿರಿಸಲಾದ 34,500 ರು. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ. ಇದು ಸರ್ಕಾರ ರೈತರು ಮತ್ತು ಎಸ್‌ಸಿ ಎಸ್‌ಟಿ ಸಮುದಾಯದ ಬಗೆಗಿನ ನಿಲುವನ್ನು ತೋರಿಸುತ್ತದೆ ಎಂದರು.

ರಾಜ್ಯ ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ವಿನಾ ಕಾರಣ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅಪರೇಷನ್

ಸಿಂದೂರ ಭದ್ರತಾ ವೈಫಲ್ಯ ಎನ್ನುವ ಕಾಂಗ್ರೆಸಿಗರು, ಅವರದೇ ಪ್ರಧಾನಿಗಳಾಗಿದ್ದ ಸಂದರ್ಭ ಭದ್ರತೆ ಹೊರತೂ ನಡೆದ ಉಗ್ರ ದಾಳಿ, ಇಂದಿರಾ, ರಾಜೀವ್‌ಗಾಂಧಿ ಹತ್ಯೆ ಬಗ್ಗೆ ಏನೆನ್ನಬೇಕು ಎಂದ ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಮಂಗಳೂರಲ್ಲೂ ಪಾಲಿಕೆ ಮಾಜಿ ಸದಸ್ಯರು, ಶಾಸಕರು, ಹಿಂದು ಮುಖಂಡರು ಹೀಗೆ ಹಲವರ ವಿರುದ್ಧ ಕೇಸು ದಾಖಲಿಸಲಾಗಿದೆ. ಅಭಿವೃದ್ಧಿ ಬಗ್ಗೆ ಕಾಂಗ್ರೆಸಿಗರು ಗಮನ ಹರಿಸುವುದು ಬಿಟ್ಟು ಕೇಸು ದಾಖಲು, ಪ್ರಾತ್ಯಾರೋಪಗಳನ್ನೇ ಕಾಲ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ರೌಡಿಶೀಟರ್ ಮಾಹಿತಿ ಬರುವುದಿಲ್ಲ..

ರೌಡಿಶೀಟರ್ ಯಾರ ಮೇಲೆಲ್ಲ ತೆರೆದಿದ್ದಾರೆ ಎಂಬ ಮಾಹಿತಿ ಸಚಿವರಿಗೆ ಬರುವುದಿಲ್ಲ. ಅದು ಪೊಲೀಸ್ ಇಲಾಖೆಯ ನಿಯಮ. ನಾನು ಇಲ್ಲಿನ ಉಸ್ತುವಾರಿ ಸಚಿವನಾಗಿದ್ದಾಗ ಸುಹಾಸ್ ಮೇಲೆ ರೌಡಿಶೀಟರ್ ತೆರೆದಿರಬಹುದು. ಆ ಮಾಹಿತಿಯನ್ನು ಪೊಲೀಸರು ಉಸ್ತುವಾರಿ ಸಚಿವರಿಗೆ ಹೇಳುವ ಕ್ರಮ ಇಲ್ಲ. ಸಹಿಗಾಗಿ ನಮ್ಮಲ್ಲಿಗೆ ಕಡತ ತರುವ ಪ್ರಮೇಯವೂ ಇಲ್ಲ. ಅದೆಲ್ಲ ಇಲಾಖಾ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ನೈತ ಅಥವಾ ವ್ಯಕ್ತಿಗತ ಕಾರಣಕ್ಕಾಗಿ ರೌಡಿಶೀಟರ್ ತೆರೆದಿದ್ದರೂ ಆತನ ಸಾವಿನ ಬಳಿಕ ಅದನ್ನೇ ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ಈ ಕುರಿತ ಪ್ರಶ್ನೆಗೆ ಉತ್ತರಿಸಿದರು.

ಶಾಸಕರಾದ ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಮನೋಹರ ಕದ್ರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article