
ಮಂಗಳೂರಿನಲ್ಲಿ ಅಕ್ರಮ ಏಜನ್ಸಿಗಳು: ಕ್ರಮಕ್ಕೆ ಆಗ್ರಹ
ಮಂಗಳೂರು: ವಿದೇಶದಲ್ಲಿ ಉದ್ಯೋಗ ತೆಗೆಸಿಕೊಡುತ್ತೇವೆಂದು ಆಮಿಷವೊಡ್ಡಿ ನೂರಾರು ಮಂದಿಯಲ್ಲಿ ಕೋಟ್ಯಂತರ ರೂ. ಹಣ ಪಡೆದು ವಂಚಿಸುತ್ತಿರುವ ಏಜನ್ಸಿಗಳು ಮಂಗಳೂರಿನಲ್ಲಿ ಸಕ್ರಿಯವಾಗಿದ್ದು, ಇವುಗಳಿಗೆ ಪೊಲೀಸ್ ಕಮಿಷನರ್ ನೋಟೀಸು ನೀಡಿ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಾರೆನ್ಸ್ ಡಿಸೋಜ ಆಗ್ರಹಿಸಿದ್ದಾರೆ.
ಇಂದು ನಗರದ ಖಾಸಗಿ ಹೊಟೇಲ್ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿದೇಶಾಂಗ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳದೆ ಅಕ್ರಮವಾಗಿ ಉದ್ಯೋಗದ ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿರುವ ಬಗ್ಗೆ ನಗರದ ಬೆಂದೂರು ವೆಲ್ ನಲ್ಲಿ ಕಾರ್ಯಾಚರಿಸುತ್ತಿರುವ ಹೈರ್ ಗ್ಲೋ ಎಲಿಗೇಂಟ್ ಓವರ್ ಸೀಸ್ ಇಂಟರ್ನ್ಯಾಶನಲ್ ಎನ್ನುವ ಹೆಸರಿನ ಏಜನ್ಸಿಯ ಬಗ್ಗೆ ಆರೋಪ ಕೇಳಿಬಂದಿದೆ. ಇವರು ನ್ಯೂಜಿಲೆಂಡ್ನಲ್ಲಿರುವ ಗಿಂಐಂಖIS ಎಂಬ ರಿಗ್ ಸಂಸ್ಥೆಯಲ್ಲಿ ಕೆಲಸ ಕೊಡಿಸುತ್ತೇನೆಂದು ನಂಬಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸುಮಾರು 185ಕ್ಕೂ ಹೆಚ್ಚು ವ್ಯಕ್ತಿಗಳಿಂದ ತಲಾ 1.85 ಲಕ್ಷ ರೂ. ಪಡೆದಿದ್ದಾರೆ. ಅಲ್ಲದೆ, ಏಜಂಟರ ಮೂಲಕವೂ ಸುಮಾರು 60 ಮಂದಿ 2-3 ಲಕ್ಷ ರೂ. ಮೊತ್ತವನ್ನು ಪಡೆದಿದ್ದು, ಹೊರ ರಾಜ್ಯದವರಿಂದ 5 ಲಕ್ಷದ ವರೆಗೂ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
2024ರ ನವೆಂಬರ್ ತಿಂಗಳ ಕೊನೆಯಲ್ಲಿ ಅಭ್ಯರ್ಥಿಗಳನ್ನು ನ್ಯೂಜಿಲೆಂಡ್ ಉದ್ಯೋಗ ಫೈನಲ್ ಆಗಿದೆಯೆಂದು ಹೇಳಿ ಮೆಡಿಕಲ್ ಫಿಟ್ನೆಸ್ ಮಾಡಿಕೊಂಡಿದ್ದರು. ಜನವರಿ ಮೊದಲ ವಾರದಲ್ಲಿ ಕೆಲಸಕ್ಕೆ ಸೇರಲು ಕಾಂಟ್ರಾಕ್ಟ್ ಗೆ ಸಹಿ ಹಾಕಲು ಕಚೇರಿಗೆ ಬರುವಂತೆಯೂ ತಿಳಿಸಿದ್ದರು. ಜನವರಿ ಕೊನೆಯ ವಾರದಲ್ಲಿ ವೀಸಾ ಪ್ರಕ್ರಿಯೆ ಆರಂಭಗೊಂಡಿದೆ. ಸಂದರ್ಶನಕ್ಕೆ ಬರುವಂತೆ ಎಂದು ಏಜನ್ಸಿ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳಾ ಸಿಬಂದಿ ಗ್ರೇಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ, ಚೈತ್ರಾ ಎಂಬವರು ತಿಳಿಸಿದ್ದರು.
ಈ ನಕಲಿ ಕಂಪನಿಯ ಹೆಸರಲ್ಲಿ ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶದಿಂದಲೂ ಅಭ್ಯರ್ಥಿಗಳನ್ನು ಕರೆಯಲಾಗಿದ್ದು, ಅವರಿಂದಲೂ ಲಕ್ಷಾಂತರ ರೂಪಾಯಿ ಹಣವನ್ನು ಪಡೆದಿದ್ದಾರೆ. ವಿವಿಧ ಏಜನ್ಸಿಗಳ ಮೂಲಕ 4ರಿಂದ 5 ಲಕ್ಷ ರೂ.ಗಳನ್ನು 300ಕ್ಕೂ ಹೆಚ್ಚು ಜನರಿಂದ ಹಣ ಪಡೆದಿದ್ದಾರೆ. ಇದರ ಮೊತ್ತ ಸರಿಸುಮಾರು ಎಂಟು ಕೋಟಿಗೂ ಅಧಿಕವಾಗಿದ್ದು, ಇತ್ತ ಕೆಲಸವೂ ಇಲ್ಲದೆ ಕೊಟ್ಟ ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಜೊತೆಗಿದ್ದ ಅಭ್ಯರ್ಥಿಗಳು ದೂರಿದ್ದಾರೆ.
ಮಾರ್ಚ್ ತಿಂಗಳಲ್ಲಿ ವೀಸಾ ಅಪ್ಲಿಕೇಶನ್ ಫಾರ್ಮ್, ಭಾವಚಿತ್ರ ನೀಡಲು ಹಾಗೂ ಬಾಕಿ ಉಳಿದ ಮೊತ್ತವನ್ನು ಪಾವತಿಸುವಂತೆ ಕಚೇರಿಗೆ ಬರಲು ತಿಳಿಸಿದ್ದರು. ಎಪ್ರಿಲ್ ಮೊದಲ ವಾರದಲ್ಲಿ ವಿಮಾನದ ಟಿಕೆಟ್ ಹಣವನ್ನು ಪಾವತಿಸಲು ಹೇಳಿದ್ದರು. ಅದೇ ತಿಂಗಳ ಕೊನೆಯಲ್ಲಿ ಕಚೇರಿಗೆ ನೀಡಿದ್ದ ಪಾಸ್ ಪೋರ್ಟ್, ಅಭ್ಯರ್ಥಿಗಳ ಫೋಟೋಗಳು ಹಾಗೂ ಅನ್ವಲಪ್ ಕವರನ್ನು ನಮ್ಮ ವಿಳಾಸಕ್ಕೆ ಕೊರಿಯರ್ ಮೂಲಕ ಕಳುಹಿಸಲಾಗಿತ್ತು. ಇದನ್ನು ನೋಡುತ್ತಲೇ ವಂಚನೆ ಆಗಿರುವುದು ತಿಳಿದುಬಂದಿದ್ದು, ಅಭ್ಯರ್ಥಿಗಳು ಕಾಂಗ್ರೆಸ್ ಕಾರ್ಮಿಕ ಘಟಕಕ್ಕೆ ಮಾಹಿತಿ ನೀಡಿದ್ದರು.
ಆನಂತರ ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿಯವರಿಗೆ ದೂರು ನೀಡಿದ್ದು, ಮೇ 5ರಂದು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನಂತರ, ಒಟ್ಟು ಪ್ರಕರಣದ ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಲಾಗಿತ್ತು. ಪೊಲೀಸರು ನಕಲಿ ಏಜನ್ಸಿಯನ್ನು ನಡೆಸುತ್ತಿದ್ದ, ವಂಚನೆಯ ಸೂತ್ರಧಾರ ಮುಂಬೈ ಮೂಲದ ಮುಸಿಯುಲ್ಲಾ ಅತಿವುಲ್ಲಾ ಖಾನ್ ಎಂಬಾತನನ್ನು ಎರಡು ದಿನಗಳ ಹಿಂದೆ ಬಂಧಿಸಿದ್ದಾರೆ. ವಂಚನೆಯಲ್ಲಿ ಕಂಪನಿ ಸಿಬಂದಿಗಳಾದ ಗ್ರೇಟಲ್ ಕ್ವಾಡ್ರಸ್, ಅಶ್ವಿನಿ ಆಚಾರ್ಯ ಮತ್ತು ಚೈತ್ರಾ ಕೂಡ ಶಾಮೀಲಾಗಿದ್ದಾರೆಂದು ಕಾರ್ಮಿಕ ಘಟಕದ ಅಧ್ಯಕ್ಷ ಲಾರೆನ್ಸ್ ಮತ್ತು ವಂಚನೆಗೊಳಗಾದ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.