
ಸಚಿವರ ನಿರ್ದೇಶನಕ್ಕು ಸಿಗದ ಕಿಮ್ಮತ್ತು: ಅಧಿಕಾರಿಗಳದ್ದೇ ರಾಜ್ಯಭಾರ!
ಬಂಟ್ವಾಳ: ಬಂಟ್ವಾಳ ತಾಲೂಕಾಡಳಿತವನ್ನು ಸಮರ್ಥ ಗೃಹಿಣಿಯೋರ್ವರು ನಡೆಸುತ್ತಿದ್ದಾರೆ. ಆದರೆ ಬಡ ವೃದ್ಧೆಯೋರ್ವರ ಸಮಸ್ಯೆಗೆ ತಾಲೂಕಾಡಳಿತದಲ್ಲಿ ಕುಳಿತಿರುವ ಮಹಿಳಾಧಿಕಾರಿಯೇ ಸ್ಪಂದಿಸುತ್ತಿಲ್ಲ ಅಂದರೆ ಇದಕ್ಕೇನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ.
ದ.ಕ.ಜಿಲ್ಲಾ ಉಸ್ತುವಾರಿ ಸಚಿವರೇ ಜನಸಂಪರ್ಕ ಸಭೆಯಲ್ಲಿ ಸಮಸ್ಯೆ ಪರಿಹರಿಸಿಕೊಡುವಂತೆ ಸೂಚಿಸಿದರೂ ಇದಕ್ಕೆ ಬಂಟ್ವಾಳ ಕಂದಾಯ ಇಲಾಖೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎಂಬುದೇ ಅಚ್ಚರಿಯ ಸಂಗತಿಯಾಗಿದೆ.
ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಗ್ರಾಮದ 75 ರ ಹರೆಯದ ವೃದ್ಧೆ ಲೀಲಾವತಿ ಎಂಬವರಿಗೆ ಹಲವು ವರ್ಷದ ಹಿಂದೆ ಸ.ನಂ.96/19 ರಲ್ಲಿರುವ 0.90 ಸೆಂಟ್ಸ್ ಸರಕಾರಿ ಜಮೀನು ಮಂಜೂರಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪಹಣಿಯನ್ನು ಕ್ರೋಢೀಕರಣ ಮಾಡಿಕೊಡುವ ನಿಟ್ಟಿನಲ್ಲಿ 1-5 ಕಡತಕ್ಕಾಗಿ ಅರ್ಜಿಸಲ್ಲಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆ ಲೀಲಾವತಿ ಅವರು ಅವಿವಾಹಿತರಾಗಿದ್ದು, ತೀರಾ ಸಂಕಷ್ಟದಲ್ಲಿದ್ದಾರೆ. ಈ ಜಮೀನನ್ನು ಮಾರಾಟಮಾಡಿ ಅದರಲ್ಲಿ ಬರುವ ಹಣವನ್ನು ತನ್ನ ಚಿಕಿತ್ಸೆಗಾಗಿ ಬಳಸಿಕೊಳ್ಳಲು ಉದ್ದೇಶಿಸಿ ಜಮೀನಿನ ಪಹಣಿಯ ಕ್ರೋಢಿಕರಣಕ್ಕಾಗಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿ, ಇದಕ್ಕಾಗಿ ಸುಮಾರು 20ಕ್ಕೂ ಹೆಚ್ಚು ಬಾರಿ ಅಲೆದಾಡಿದ್ದಾರೆ. ಅವರು ಈ ಅರ್ಜಿಸಲ್ಲಿಸಿ ನಾಲ್ಕರಿಂದ ಐದು ವರ್ಷ ಸಂದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದ್ದಾರೆ.
ಸದ್ಯ ಒಂಟಿಯಾಗಿರುವ ಅವರು ಅನಾರೋಗ್ಯದ ನಡುವೆಯು ಮಂಗಳೂರು ಸಹಾಯಕ ಆಯುಕ್ತರು, ಭೂದಾಖಲೆ ಕಚೇರಿಗೆ ಅಲೆದಾಡಿದ್ದಾರೆ. ಬಂಟ್ವಾಳದಲ್ಲಿ ಈ ಹಿಂದೆ ಎರಡ್ಮೂರು ಮಹಿಳಾ ತಹಶೀಲ್ದಾರರಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ, ಸಾಲದೆಂಬಂತೆ ಇತ್ತೀಚೆಗೆ ನಡೆದ ಜನಸಂಪರ್ಕಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾಗಿ ಅರ್ಜಿಸಲ್ಲಿಸಿದ್ದರು. ಸಚಿವರು ಸಮಸ್ಯೆ ಬಗೆಹರಿಸುವಂತೆ ಸಂಬಂಧಿಸಿದವರಿಗೆ ನಿರ್ದೇಶನ ನೀಡಿದರೂ ತಾಲೂಕು ಕಚೇರಿಯಲ್ಲಿ ಸಚಿವರ ಸೂಚನೆಗೂ ಯಾವುದೇ ಕಿಮ್ಮತ್ತು ಸಿಕ್ಕಿಲ್ಲ ಎಂದು ದೂರಿದ್ದಾರೆ.
ಬಂಟ್ವಾಳದಲ್ಲಿ ಇದೀಗ ತಹಶೀಲ್ದಾರರು ಮಹಿಳೆಯೇ ಆಗಿದ್ದರೂ, ಸಹಾಯಕ ಆಯುಕ್ತರ, ಸಚಿವರ ಆದೇಶ ಪಾಲಿಸಿಲ್ಲ, ಬಡ ವೃದ್ಧೆಯ ಸಮಸ್ಯೆಗಿನ್ನು ಪರಿಹಾರ ಸಿಕ್ಕಿಲ್ಲ ಅಂದರೆ ಇದಕ್ಕಿಂತ ನಾಚಿಕೇಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ದೂರಲಾಗಿದೆ.
ಸಾವಿರಾರು ಮಂದಿಯನ್ನು ಸೇರಿಸಿಕೊಂಡು ಜನರ ಅಹವಾಲು ಸ್ವೀಕರಿಸಿ, ಅದಕ್ಕೆ ಪರಿಹಾರ ನೀಡದಿದ್ದರೆ ಜನಸಂಪರ್ಕಸಭೆ ಯಾವ ಪುರುಷಾರ್ಥಕ್ಕಾದರೂ ಮಾಡಲಾಗಿತ್ತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಸಚಿವರು, ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜನಸಂಪರ್ಕಸಭೆ ನಡೆಸಿ ಸಾವಿರಾರು ಮಂದಿಯನ್ನು ಸೇರಿಸಿ ಅಧಿಕಾರಿಗಳು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಅಹವಾಲು ಸ್ವೀಕರಿಸಿ ಗುಡ್ಡೆಹಾಕಿದ್ದು ಬಿಟ್ಟರೆ, ವೃದ್ಧ ಲೀಲಾವತಿಯಂತವರ ಇನ್ನಷ್ಟು ಬಡಪಾಯಿಗಳ ಅರ್ಜಿ ತಾಲೂಕು ಕಚೇರಿಯಲ್ಲಿ ಧೂಳು ತಿನ್ನುತ್ತಿದೆಯೇ? ಸಚಿವರ ನಿರ್ದೇಶನಕ್ಕೂ ಕಿಮ್ಮತ್ತು ನೀಡದ ಅಧಿಕಾರಿಗಳಿಗೆ ಇನ್ಯಾವ ರೀತಿಯಲ್ಲಿ ಈ ಬಡ ಮಹಿಳೆ ಹೇಳಿಸಬೇಕೋ ಅವರೇ ತಿಳಿಸಬೇಕು.