
ದ.ಕ. ಜಿಲ್ಲಾ ಬಿಜೆಪಿ ಶಾಸಕರುಗಳಿಂದಲೇ ಜಿಲ್ಲೆಯನ್ನು ಹೊತ್ತಿ ಉರಿಸುವ ಕೆಲಸ ನಡೆಯುತ್ತಿದೆ: ರಿಯಾಝ್ ಪರಂಗಿಪೇಟೆ
ಮಂಗಳೂರು: ಸಂವಿಧಾನಿಕ ಹುದ್ದೆಯಲ್ಲಿರುವ ದ.ಕ. ಜಿಲ್ಲೆಯ ಬಿಜೆಪಿ ಶಾಸಕರುಗಳೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊತ್ತಿ ಉರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಎಸ್ಡಿಪಿಐನ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಪರಂಗಿಪೇಟೆ ಆರೋಪಿಸಿದರು.
ಅವರು ಇಂದು ನಗರದ ಎಸ್ಡಿಪಿಐ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಪೊಲೀಸರಿಗೆ ಬೆಂಬಲ ನೀಡಬೇಕಾದ ಶಾಸಕರುಗಳೇ ಪೊಲೀಸರನ್ನು ಆರೋಪಿಸಿ, ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಮೇ.2 ರಿಂದ ಜಿಲ್ಲೆಯಲ್ಲಿ ಕೋಮು ಉದ್ವಿಗ್ನ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮತ್ತು ಆತನ ಜೊತೆಗಾರರನ್ನು ಯಾಕೆ ಬಂಧಿಸುತ್ತಿಲ್ಲ? ಈಗಾಗಲೇ ಶರಣ್ ಪಂಪ್ವೆಲ್ ಮೇಲೆ ಜಾಮೀನು ರಹಿತ ಕೇಸು ದಾಖಲಾಗಿದ್ದರೂ, ನಗರದಲ್ಲಿ ಸುದ್ದಿಗೋಷ್ಠಿಗಳನ್ನು ನಡೆಸಲು ಬಿಟ್ಟು ಸಮಾಜದ ಸ್ವಸ್ಥ್ಯವನ್ನು ಹಾಳುಮಾಡಲು ಪೊಲೀಸರು ಬಿಟ್ಟಿದ್ದಾರೆ ಎಂದರು.
ಈಗಾಗಲೇ ಜಿಲ್ಲೆಯಲ್ಲಿ ಮೇ.1 ರಿಂದ ಮೇ 5ರವರೆಗೆ 40 ಎಫ್ಐಆರ್ಗಳು ದಾಖಲಾಗಿದ್ದು, ಇದಕ್ಕೆ ಕಾರಣ ಕರ್ತನಾದ ಪ್ರಥಮ ಆರೋಪಿ ಶರಣ್ ಪಂಪ್ವೆಲ್ನನ್ನು ಯಾಕೆ ಬಂಧಿಸದೆ ಮೃದುದೋರಣೆ ತೋರುತ್ತಿದ್ದಿರಿ? ಎಂದು ಪೊಲೀಸರನ್ನು ಪ್ರಶ್ನಿಸಿದರು.
ಏ.27 ರಂದು ಕೇರಳ ಮೂಲದ ಮಾನಸಿಕ ಅಸ್ವಸ್ಥ ಅಶ್ರಫ್ನನ್ನು 50 ಜನರು ಗುಂಪು ಹಲ್ಲೆ ಮಾಡಿ ರಾಕ್ಷಸಿಯವಾಗಿ ಕೊಂದಿದ್ದು, ಅದರಲ್ಲಿ ಪ್ರಮುಖ ಆರೋಪಿಯಾದ ಮಾಜಿ ಕಾರ್ಪೊರೇಟರ್ ಪತಿ ರಂವಿಂದ್ರನನ್ನು ಯಾಕೆ ಇನ್ನು ಬಂಧಿಸಿಲ್ಲ? ಸುಹಾಸ್ ಶೆಟ್ಟಿಯ ಕೆಲೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸುವಂತೆ ಆಗ್ರಹಿಸುವವರು ಅಶ್ರಫ್ ಗುಂಪು ಹತ್ಯೆ ಪ್ರಕರಣವನ್ನು ಯಾಕೆ ಎನ್ಐಎಗೆ ಒಪ್ಪಿಸುವಂತೆ ಮಾತನಾಡುತ್ತಿಲ್ಲ ಎಂದು ಕೇಳಿದರು.
ಕೋಮುವಾದಿ ಶಾಸಕನನ್ನು ಬಂಧಿಸಿ:
ಜಿಲ್ಲೆಯಲ್ಲಿ ಅಶಾಂತಿ ಕದಡಿಸಿ ಸಂವಿಧಾನಿಕ ಸ್ಥಾನದಲ್ಲಿ ಕೂತು ಶಾಸಕ ಸ್ಥಾನಕ್ಕೆ ಅಗೌರವ ತಂದು ಉಪ್ಪಿನಂಗಡಿಯಲ್ಲಿ ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಪುಂಗಿ ಊದುವ ಶಾಸಕ ಹರೀಶ್ ಪೂಂಜಾನನ್ನು ಈ ಕೂಡಲೇ ಬಂಧಿಸಬೇಕು ಎಂದು ರಿಯಾಝ್ ಪರಂಗಿಪೇಟೆ ಆಗ್ರಹಿಸಿದರು.
ಇನ್ನೊಂದು ಹೆಣ ಬೀಳುವ ಮೊದಲು ಟಾಸ್ಕ್ಫೋರ್ಸ್ ರಚಿಸಿ:
ಗೃಹಸಚಿವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರಾವಳಿಯಲ್ಲಿ ಆಂಟಿ ಕಮ್ಯೂನಲ್ ಟಾಸ್ಕ್ಫೋರ್ಸ್ ನಿರ್ಮಿಸುವುದಾಗಿ ತಿಳಿಸಿದ್ದು, ಜಿಲ್ಲೆಯಲ್ಲಿ ಮತ್ತೊಂದು ಹೆಣ ಬೀಳುವ ಮೊದಲು ಆಂಟಿ ಕಮ್ಯೂನಲ್ ಟಾಸ್ಕ್ಫೋರ್ಸ್ ನಿರ್ಮಿಸುವಂತೆ ಒತ್ತಾಯಿಸಿದರು.
ಪ್ರಮುಖರಾದ ಅನ್ವರ್ ಸಾದಾದ್, ಅಶ್ರಫ್ ಅಡ್ಡೂರು, ಮೂನಿಶ್ ಅಲಿ ಮತ್ತಿತರರು ಇದ್ದರು.