
ದಕ್ಷಿಣ ಕನ್ನಡ ಜಿಲ್ಲಾಡಳಿತ ಎನ್ಐಟಿಕೆ ಜತೆಗೆ ಔಪಚಾರಿಕವಾಗಿ ಒಪ್ಪಂದಕ್ಕೆ ಸಹಿ
ಮಂಗಳೂರು: ಘನತ್ಯಾಜ್ಯ ವಿಲೇವಾರಿ, ವಾಹನ ದಟ್ಟಣೆ, ಮೂಲ ಸೌಕರ್ಯ ಇತ್ಯಾದಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸುರತ್ಕಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಎನ್ಐಟಿಕೆ ಜತೆಗೆ ಔಪಚಾರಿಕವಾಗಿ ಒಪ್ಪಂದಕ್ಕೆ ಸಹಿ ಮಾಡಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಹಾಗೂ ಎನ್ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯ ಅಭಿವೃದ್ಧಿ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಣ ಸಂಸ್ಥೆಗಳ ಬೌದ್ಧಿಕ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಳಕೆ ಮಾಡುವ ಉದ್ದೇಶವಿದ್ದು, ಇದೀಗ ಮೊದಲ ಹಂತದಲ್ಲಿ ಎನ್ಐಟಿಕೆ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಇತರ ಶಿಕ್ಷಣ ಸಂಸ್ಥೆಗಳಿಗೂ ವಿಸ್ತರಿಸುವ ಯೋಜನೆಯಿದೆ ಎಂದರು.
ಈ ಒಪ್ಪಂದದ ಮೂಲಕ ಘನತ್ಯಾಜ್ಯ ವಿಲೇವಾರಿ, ಟ್ರಾಫಿಕ್ ಸಮಸ್ಯೆಗಳು, ಆರೋಗ್ಯ ವ್ಯವಸ್ಥೆ ಇತ್ಯಾದಿ ಹಲವು ಸಮಸ್ಯೆಗಳಿಗೆ ಎನ್ಐಟಿಕೆ ವಿದ್ಯಾರ್ಥಿಗಳು ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸಲಿದ್ದಾರೆ. ಸ್ಥಳೀಯ ಹಂತದಲ್ಲಿ ಕಾರ್ಯರೂಪಕ್ಕೆ ತರಬಹುದಾದ ಸಮಸ್ಯೆಗಳನ್ನಷ್ಟೇ ಈ ಕಾರ್ಯಸೂಚಿಯಲ್ಲಿ ಒಳಗೊಳಿಸಲಾಗುವುದು. ಅವರು ನೀಡುವ ಪರಿಹಾರಗಳನ್ನು ಆಡಳಿತಾತ್ಮಕವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ಪ್ರಕ್ರಿಯೆಯಿಂದ ಸಾಮಾಜಿಕ ಸಮಸ್ಯೆಗಳ ಕುರಿತು ವಿದ್ಯಾರ್ಥಿ ದೆಸೆಯಲ್ಲೇ ಅರಿವು ಮೂಡುವುದರ ಜತೆಗೆ ವಿವಿಧ ರೀತಿಯ ಸ್ಟಾರ್ಟ್ ಅಪ್ಗಳಿಗೂ ಪ್ರೇರಣೆ ನೀಡಲಿದೆ. ಆಡಳಿತಾತ್ಮಕವಾಗಿ ನಗರದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.
ಎನ್ಐಟಿಕೆ ನಿರ್ದೇಶಕ ಪ್ರೊ.ಬಿ. ರವಿ ಮಾತನಾಡಿ, ಈ ಒಪ್ಪಂದದ ಮೂಲಕ ಮಂಗಳೂರು ನಗರದ ಸಮಸ್ಯೆಗಳಿಗೆ ತಾಂತ್ರಿಕವಾಗಿ ಪರಿಣಾಮಕಾರಿ ಪರಿಹಾರಗಳನ್ನು ರೂಪಿಸಲು ಸಾಧ್ಯವಾಗಲಿದೆ. ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಕೆ., ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂಡಿ ರಾಜು ಕೆ. ಮತ್ತಿತರರು ಇದ್ದರು.