
ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತು: ಕೊಂಡಳ್ಳಿ ಪ್ರಭಾಕರ ಶೆಟ್ಟಿ
ಶಿರ್ವ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತಿಗಳಿಗೆ ಮಾತ್ರ ಸೇರಿದ್ದಲ್ಲ. ಪ್ರತೀಯೊಬ್ಬ ಕನ್ನಡಿಗನಿಗೂ ಸೇರಿದ ಸ್ವಾಯತ್ತ ಸಂಸ್ಥೆಯಾಗಿದೆ. 111ನೇ ವರ್ಷ ಪೂರೈಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತು ಆಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಅದರ ದೀರ್ಘ ಅಸ್ತಿತ್ವಕ್ಕೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಜಾನಪದ, ಕನ್ನಡ, ಕನ್ನಡಿಗ, ಕರ್ನಾಟಕ ಇದೇ ಧ್ಯೇಯೋದ್ಧೇಶಗಳನ್ನು ಅನುಷ್ಠಾನ ಮಾಡಲು ಬದ್ಧವಾಗಿದೆ. ಪ್ರೀತಿಯ ಬಾಂಧವ್ಯ ಬೆಳೆಸುವುದೇ ಇದರ ಆಶಯವಾಗಿದೆ ಎಂದು ಕಾರ್ಕಳ ತಾಲೂಕು ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಹೇಳಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಾಪು ತಾಲೂಕು ಕಸಾಪ ಘಟಕದ ಸಹಭಾಗಿತ್ವದಲ್ಲಿ ಬಂಟಕಲ್ಲು ಬಸ್ಸು ನಿಲ್ದಾಣದ ಸಾರ್ವಜನಿಕ ತರೆದ ವಾಚನಾಲಯದಲ್ಲಿ ಜರುಗಿದ 111ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜನಸಾಮಾನ್ಯರೆಲ್ಲ ಬಂದು ನಿಲ್ಲುವ ಬಸ್ಸು ತಂಗುದಾಣದಲ್ಲಿ ಶತಮಾನೋತ್ತರ ಇತಿಹಾಸ ಹೊಂದಿರುವ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿರುವುದು ನಾಡಿನ ಸಮಸ್ತರ ಭಾವನೆಗಳಿಗೆ ಸ್ಪಂದಿಸುವುದೇ ಆಗಿದೆ. ಈ ಸಂಸ್ಥೆಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು, ಅವರಿಗೆ ಬೆಂಬಲವಾಗಿ ನಿಂತ ಮಹಾನ್ ದಿವಾನರಾಗಿದ್ದ ಸರ್.ಎಂ. ವಿಶ್ವಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ರವರು. ಇದು ಸಾಹಿತಿಗಳ ಪರಿಷತ್ತು ಅಲ್ಲ. ಜನಸಾಮಾನ್ಯರ ಪರಿಷತ್ತು. ನಾವು ಆಡುವ ಭಾಷೆ ನೆಲದಭಾಷೆ, ಹೃದಯದ ಭಾಷೆ ಆಗಿದೆ, ಆಗಬೇಕು. ಇದು ಭಾವದ ಪ್ರತೀಕ ಎಂದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿದ ಸಾಹಿತಿ, ಕವಯತ್ರಿ ಪ್ರೊ. ಡಾ. ಫ್ಲಾವಿಯಾ ಕಸ್ತಲಿನೊ ಮಣಿಪಾಲ ಮಾತನಾಡಿ, ಕರಾವಳಿ ಭಾಗದಲ್ಲಿ ಹೆಚ್ಚಿನವರ ಮಾತೃಭಾಷೆ, ತುಳು, ಕೊಂಕಣಿ, ಕುಂದಾಪ್ರ ಕನ್ನಡ ಇದ್ದರೂ ಶಾಲೆಯಲ್ಲಿ ಕನ್ನಡವನ್ನು ಕಲಿಯುತ್ತೇವೆ. ಕನ್ನಡದ ನೆಲದಲ್ಲಿ ನಾವೆಲ್ಲ ಕನ್ನಡಿಗರೇ ಆಗಿದ್ದೇವೆ. ಕನ್ನಡದ ಶ್ರೀಮಂತ ಸಂಸ್ಕೃತಿ, ಪರಂಪರೆಯನ್ನು ನೂರಾರು ಕವಿಗಳು, ಸಾಹಿತಿಗಳು ಸಾಹಿತ್ಯ ಗ್ರಂಥಗಳ ಮೂಲಕ ಅನಾವರಣಗೊಳಿಸಿದ್ದಾರೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯನುಡುಗಳನ್ನಾಡಿ, ಉಡುಪಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಸಾಹಿತ್ಯದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸುತ್ತಿರುವುದು ಜಿಲ್ಲೆಯ ಸಾಧನೆಗೆ ಪ್ರೇರಣೆಯಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ರಾಜ್ಯದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ ಎಂದರು.
ದತ್ತಿ ಉಪನ್ಯಾಸ: ಹಿರಿಯ ಸಾಹಿತಿ ಕುರಾಡಿ ಸೀತಾರಾಮ ಅಡಿಗ ಮತ್ತು ಟಿ.ಎಸ್. ಕಮಲಾಕ್ಷಿ ಅಡಿಗ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಬೆನಗಲ್ ವಿಶ್ವಭಾರತ ಕರ್ನಾಟಕ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಸೂರಾಲು ನಾರಾಯಣ ಮಡಿ ಮಾತನಾಡಿ ಕುರಾಡಿ ಸೀತಾರಾಮ ಅಡಿಗರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅವರ ಸಾಹಿತ್ಯ, ಮಕ್ಕಳ ಗೀತೆಗಳು, ಕವನಗಳ ಬಗ್ಗೆ ಗಮನ ಸೆಳೆದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ದೇವೇಂದ್ರ ನಾಯಕ್ ಶಿರ್ವ ಮತ್ತು ವನಿತಾ ಡಿ,ನಾಯಕ್ರವರನ್ನು ದತ್ತಿಗೌರವದೊಂದಿಗೆ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ವಹಿಸಿದ್ದರು.
ಕಸಾಪ ಜಿಲ್ಲಾ ಸಭಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಕೆ.ದೇವದಾಸ್ ಹೆಬ್ಬಾರ್, ಬಂಟಕಲ್ಲು ನಾಗರಿಕ ಸೇವಾ ಸಮಿತಿ ಕೋಶಾಧಿಕಾರಿ ಜಗದೀಶ ಆಚಾರ್ಯ, ಬೆಳ್ಳೆ ಗ್ರಾ.ಪಂ.ಉಪಾಧ್ಯಕ್ಷ ಶಶಿಧರ ವಾಗ್ಲೆ ಉಪಸ್ಥಿತರಿದ್ದರು.