
ಕುಡುಪು ಹತ್ಯೆ-ಬಂಧನಕ್ಕೆ ಹಿಂದೂ, ಬಿಜೆಪಿ ಕಾರ್ಯಕರ್ತರ ಫಿಕ್ಸ್: ಡಾ. ಭರತ್ ಶೆಟ್ಟಿ ವೈ.
Thursday, May 1, 2025
ಮಂಗಳೂರು: ಗುಂಪು ಹತ್ಯೆ ಪ್ರಕರಣದಲ್ಲಿ ಇಷ್ಟು ಸಂಖ್ಯೆಯ ಆರೋಪಿಗಳು ಬೇಕೆಂದು ಬಿಜೆಪಿ ಕಾರ್ಯಕರ್ತರನ್ನು, ಹಿಂದೂಗಳನ್ನು ಫಿಕ್ಸ್ ಮಾಡಿದರೆ, ನಾವು ಅಮಾಯಕರ ಪರವಾಗಿ ನಿಲ್ಲಬೇಕಾಗುತ್ತದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ. ಆಗ್ರಹಿಸಿದರು.
ಅವರು ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಸರಕಾರವನ್ನು ಖುಷಿಪಡಿಸಲು ಪೊಲೀಸ್ ಇಲಾಖೆ ನಮ್ಮ ಕಾರ್ಯಕರ್ತರಲ್ಲಿ 25 ಜನ ಬೇಕು, 30 ಜನ ಬೇಕು, ಇಂಥವರೇ ಬೇಕು ಎಂದು ಕೇಳುತ್ತಿದ್ದಾರೆ. ಕ್ರೈಂ ಅನ್ನು ಕ್ರೈಂ ದೃಷ್ಟಿಯಿಂದಲೇ ನೋಡಬೇಕು ಹೊರತು ಅದರಲ್ಲಿ ರಾಜಕೀಯ ವಿರೋಧಿಗಳನ್ನು ಫಿಕ್ಸ್ ಮಾಡಲು ನೋಡುವುದು ಸರಿಯಲ್ಲ ಎಂದರು.
ಪ್ರಕರಣದಲ್ಲಿ ಮೂವರು ಪೊಲೀಸರು ಸಸ್ಪೆಂಡ್ ಸರಕಾರದ ಒತ್ತಡದಿಂದ ಆಗಿದೆ. ಸಂಪೂರ್ಣ ತನಿಖೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ತಾವೇನೋ ಸಾಧನೆ ಮಾಡುವಂತೆ ವರ್ತಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಪ್ರಕರಣದಲ್ಲಿ ಯಾರೂ ಇಲ್ಲ. ಆದ್ದರಿಂದ ಯಾರನ್ನೋ ಕೇಸ್ನಲ್ಲಿ ಫಿಕ್ಸ್ ಮಾಡಲು ನೋಡಿದರೆ ನಾವು ಪ್ರತಿಭಟನೆ ನಡೆಸಲು, ಪೊಲೀಸ್ ಠಾಣೆಗೆ ಘೆರಾವ್ ಹಾಕಲು ಸಿದ್ಧ. ಆದ್ದರಿಂದ ಪ್ರಕರಣದಲ್ಲಿ ಸರಕಾರ ರಾಜಕೀಯ ಮಾಡುವುದನ್ನು ಬಿಟ್ಟು ಪೊಲೀಸರಿಗೆ ತನಿಖೆಗೆ ಫ್ರೀ ಹ್ಯಾಂಡ್ ಬಿಡಬೇಕೆಂದು ಆಗ್ರಹಿಸಿದರು.