
ರಾಜಕೀಯ ದುರುದ್ದೇಶಕ್ಕಾಗಿ ಕಾಂಗ್ರೆಸ್ನಿಂದ ಪೊಲೀಸ್ ಇಲಾಖೆಯ ದುರ್ಬಳಕೆ: ಸತೀಶ್ ಕುಂಪಲ
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ನಿರಂತರವಾಗಿ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕುವುದರ ಮೂಲಕ ಮಾನಸಿಕವಾಗಿ ಕುಗ್ಗಿಸುವ ಕಾರ್ಯವನ್ನು ಪೊಲೀಸ್ ಇಲಾಖೆಯನ್ನು ಬಳಸಿ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ದೇಶದ ಪರವಾಗಿ, ಹಿಂದುತ್ವದ ಕಾರ್ಯ ನಡೆಸುತ್ತಿರುವ ಕಾರ್ಯಕರ್ತರನ್ನು ಕಂಡಾಗ ಕಣ್ಣು ಕೆಂಪಾಗುವ ಸಿದ್ದರಾಮಯ್ಯ ಅವರು ದೇಶದ್ರೋಹಿ ಕಿಡಿಗೇಡಿಗಳ ಬಗ್ಗೆ ಮೃದುತ್ವ ಪ್ರದರ್ಶಿಸಿ ಬಣ್ಣ ಬದಲಾಯಿಸುತ್ತಾರೆ. ಈ ಮೂಲಕ ರಾಜ್ಯದಲ್ಲಿ ಸಂವಿಧಾನಕ್ಕೆ ವಿರುದ್ಧವಾಗಿ ಸರ್ಕಾರ ಆಡಳಿತ ನಡೆಸುತ್ತಿದೆ.
ವಿಧಾನ ಸಭೆಯ ಒಳಗಡೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಕ್ರಮ ಗೊಳ್ಳಲು ತೋರಿದ ವಿಳಂಭ, ರಾಜ್ಯದಲ್ಲಿ ನಡೆದ ಮತಾಂಧ ಕಿಡಿಗೇಡಿಗಳ ಕೃತ್ಯದ ಬಗ್ಗೆ ಸರ್ಕಾರದ ಮೌನ, ಪಾಕಿಸ್ತಾನ ಧ್ವಜಕ್ಕೆ ಪ್ರೀತಿ ತೋರಿದವರ ವಿರುದ್ಧ ಕ್ರಮ ಜರುಗಿಸಲು ನಿರ್ಲಕ್ಷ್ಯಗಳ ಪರಿಣಾಮವಾಗಿ ಮಂಗಳೂರಿನ ಕುಡುಪಿನಲ್ಲಿ ದೇಶದ್ರೋಹಿಗಳಿಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ಧೈರ್ಯ ಬಂದಿದೆ. ಅಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿ ಇಲಾಖೆಯು ಅಮಾಯಕರನ್ನು ಬಂಧಿಸಿರುವುದು, ಮನೆಗಳಿಗೆ ದಾಳಿ ನಡೆಸುತ್ತಿರುವುದು ಕಾಂಗ್ರೆಸ್ನ ಕುಮ್ಮಕ್ಕಿನಿಂದ ನಡೆಯುತ್ತಿದೆ.
ಇಂತಹ ಘಟನೆಗಳಿಂದ ದೇಶಭಕ್ತರು ರೋಷಿ ಗೊಂಡಿದ್ದಾರೆ. ಸರ್ಕಾರ ಸಂಪೂರ್ಣವಾಗಿ ಮತಾಂಧರ ಪರವಾಗಿಯೇ ಇರುವಂತಹ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ. ಮಂಗಳೂರಿನ ಕುಡುಪು ಪರಿಸರದ ಘಟನೆಯನ್ನು ಕಾಂಗ್ರೆಸ್ ರಾಜಕೀಯ ದುರುದ್ದೇಶಕ್ಕಾಗಿ ಬಳಸುತ್ತಿದೆ. ಪೊಲೀಸ್ ಇಲಾಖೆಯನ್ನು ಕೈಗೊಂಬೆಯಾಗಿಸುತ್ತಿದೆ. ಇದನ್ನು ಭಾರತೀಯ ಜನತಾ ಪಾರ್ಟಿಯು ಸಹಿಸಲು ಸಾಧ್ಯವಿಲ್ಲ, ಶಾಂತಿಯುತ ದಕ್ಷಿಣ ಕನ್ನಡವನ್ನು ಕದಡುವ ಷಡ್ಯಂತ್ರ ನಡೆಯುತ್ತಿದೆ. ಸಂಘಟನೆಯ, ಪಕ್ಷದ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕುಂಪಲ ಆಗ್ರಹಿಸಿದ್ದಾರೆ.
ಸಂಘ ಪರಿವಾರದ ಕಾರ್ಯಕರ್ತರ ಮನೋಬಲವನ್ನು ಕುಗ್ಗಿಸುವ ಕಾಂಗ್ರೆಸ್ನ ಭಂಡ ಪ್ರಯತ್ನ ಎಂದಿಗೂ ಯಶಸ್ವಿಯಾಗದು. ಕುಡುಪು ಪ್ರಕರಣದ ಬಗ್ಗೆ ಕೂಲಂಕುಷವಾದ ತನಿಖೆಯಾಗಬೇಕಿದೆ. ಪೊಲೀಸ್ ಇಲಾಖೆ ಕಾಂಗ್ರೆಸ್ನ ಕಪಿಮುಷ್ಠಿಯಲ್ಲಿದೆ ಎನ್ನುವುದನ್ನು ಕಳಚಿಸುವ ದಿಟ್ಟತನ ಪೊಲೀಸರಿಂದ ಆಗಬೇಕಿದೆ. ಇಲ್ಲವಾದರೆ ಭವಿಷ್ಯದಲ್ಲಿ ಸಂಭವಿಸುವ ಘಟನೆಗಳಿಗೆ ಇಲಾಖೆಯೇ ಹೊಣೆ ಹೊರೆ ಹೊರಬೇಕಾದೀತು ಎಂದು ಕುಂಪಲ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.