
’ಬುದ್ಧನ ವಿಚಾರಧಾರೆಗಳಿಂದ ಜಗತ್ತಿನಲ್ಲಿ ಶಾಂತಿ’: ಜಯವಂತ ನಾಯಕ್
Monday, May 12, 2025
ಮಂಗಳೂರು: ಬುದ್ಧ ಕೇವಲ ವ್ಯಕ್ತಿಯಲ್ಲ ಅವರು ಮಹಾನ್ ಬೆಳಕು. ಶ್ರಮ ವಹಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬುದ್ಧನಾಗಬಹುದು. ಕಾಮ, ಕ್ರೋಧ, ಮದ, ಮತ್ಸರ ಇವುಗಳಿಂದ ದೂರವಿದ್ದು, ಬುದ್ಧನ ವಿಚಾರಧಾರೆಗಳನ್ನು ಅರಿತುಕೊಂಡಾಗ ಶಾಂತಿ ನೆಲೆಯೂರುತ್ತದೆ. ಬುದ್ಧನ ಸಂದೇಶಗಳನ್ನು ಎಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಜಯವಂತ ನಾಯಕ್ ಹೇಳಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಮತ್ತು ಕನ್ನಡ ಸಂಘ ವಿಶ್ವವಿದ್ಯಾನಿಲಯ ಕಾಲೇಜು ಇದರ ಸಹಕಾರದೊಂದಿಗೆ ಭಗವಾನ್ ಬುದ್ಧ ಜಯಂತಿಯನ್ನು ಸೋಮವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ನೀಡಿದ ಮಂಗಳಗಂಗೋತ್ರಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಮಾತನಾಡಿ, ಗೌತಮ ಬುದ್ಧನು ವೈಭೋಗದ ಜೀವನದಿಂದ ಮುಕ್ತಿ ಪಡೆಯಲು ಬಯಸುತ್ತಾನೆ. ಯಾವಾಗಲೂ ಜನರಿಗೆ ಅಹಿಂಸೆಯ ಅರ್ಥವನ್ನು ಕಲಿಸಲು ಪ್ರಯತ್ನಿಸಿದವರು. ಜಗತ್ತಿನಲ್ಲಿ ಎಷ್ಟು ಶ್ರೀಮಂತನಾಗಿದ್ದರೂ ಜೀವನದಲ್ಲಿ ದುಃಖವಿಲ್ಲದವನು ಯಾರು ಇಲ್ಲ ಎಂದು ಗೌತಮ ಬುದ್ಧ ಹೇಳುತ್ತಾರೆ. ಹಾಗಾಗಿ ದುಃಖದಿಂದ ಹೊರಬರುವ ಮಾರ್ಗವನ್ನು ಕಂಡುಹಿಡಿಯುತ್ತಾರೆ. ಬುದ್ಧನ ಪ್ರಕಾರ ಮನುಷ್ಯನ ಅತಿಯಾದ ಆಸೆಗಳೇ ದುಃಖಕ್ಕೆ ಮೂಲ ಕಾರಣ. ಒಬ್ಬ ವ್ಯಕ್ತಿಯು ತನಗೆ ಅಗತ್ಯಕ್ಕಿಂತ ಹೆಚ್ಚಿನದನ್ನು ಬಯಸಬಾರದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಾಧವ. ಕೆ ವಂದಿಸಿದರು..