
‘ಮಾತು ಎಂಬ ವಿಸ್ಮಯ’ ಬಿಡುಗಡೆ ಲೋಕಾರ್ಪಣೆ
ಮಂಗಳೂರು: ಮಂಗಳೂರಿನ ಮೈರುಗ ಪ್ರಕಾಶನದ ಮೊದಲ ಕೃತಿ ಮಲಯಾಳಂನ ‘ವಾಕ್’ ಕೃತಿಯ ಅನುವಾದಿತ ಪುಸ್ತಕ ‘ಮಾತು ಎಂಬ ವಿಸ್ಮಯ’ ಮಂಗಳವಾರ ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಲೋಕಾರ್ಪಣೆಗೊಂಡಿತು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಸಾಕಷ್ಟು ಸಾಹಿತ್ಯಿಕ ಪುಸ್ತಕಗಳು ಹೊರಬರುತ್ತಿದ್ದರೂ, ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕಗಳನ್ನು ಖರೀದಿಸಿ ಓದುವವರ ಸಂಖ್ಯೆ ಹೆಚ್ಚಾಗಬೇಕು. ಎಳೆಯ ಮಕ್ಕಳಲ್ಲಿ ಓದಿನ ಆಸಕ್ತಿ ಬೆಳೆಸಬೇಕು ಎಂದರು.
ಕನ್ನಡ ಇನ್ನಷ್ಟು ಬೆಳೆಯಬೇಕಾದರೆ ಪುಸ್ತಕ ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆಯೂ ಹೆಚ್ಚಾಗಬೇಕು. ಪುಸ್ತಕಗಳನ್ನು ಹಣ ಕೊಟ್ಟು ಖರೀದಿಸಿ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು. ಖರೀದಿಸಿದ ಪುಸ್ತಕಗಳನ್ನು ಓದಿ ಕನ್ನಡ ಬೆಳೆಸಬೇಕು ಎಂದು ಪುನರೂರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಅನುವಾದಕಿ, ಪ್ರಾಧ್ಯಾಪಕಿ ಡಾ. ಮೀನಾಕ್ಷಿ ರಾಮಚಂದ್ರ ಮಾತನಾಡಿ, ‘ಮಾತು ಎಂಬ ವಿಸ್ಮಯ’ ಕೃತಿ ಮಾತಿನ ಮಹತ್ವವನ್ನು ಅರ್ಥಪೂರ್ಣವಾಗಿ ಹೇಳುತ್ತದೆ. ಮಾತಿನ ಮೇಲೆ ನಮ್ಮ ಭವಿಷ್ಯ ನಿಂತಿದೆ. ಅದು ವ್ಯಕ್ತಿಯ ಬೆಳವಣಿಗೆಗೆ ಕಾರಣವಾಗುತ್ತದೆ. ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಮಾತಿನ ಮೇಲೆ ಹಿಡಿತವಿರಬೇಕು, ಜಾಗರೂಕತೆಯಿಂದ ಮಾತನಾಡಬೇಕು. ಉತ್ತಮ ಬದುಕು ರೂಪಿಸಿಕೊಳ್ಳಲು ಮಾತು ಹೇಗಿರಬೇಕು ಎಂಬುದನ್ನು ಈ ಪುಸ್ತಕ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃತಿಯ ಮೂಲ ಮಲಯಾಲಂ ಲೇಖಕ ಸಜಿ ಎಂ.ನರಿಕುಯಿ, ತುಳು ವರ್ಲ್ಡ್ ಫೌಂಡೇಷನ್ ಕಟೀಲು ನಿರ್ದೇಶಕ ಡಾ.ರಾಜೇಶ್ ಆಳ್ವ ಬದಿಯಡ್ಕ, ಪ್ರಕಾಶಕ ಜಿ.ಕೆ.ಮೈರುಗ ಉಪಸ್ಥಿತರಿದ್ದರು. ರಾಮಚಂದ್ರ ಭಟ್ ಲೈನ್ಕಜೆ ಕಾರ್ಯಕ್ರಮ ನಿರೂಪಿಸಿದರು.