ದಕ್ಷಿಣ ಕನ್ನಡ ಜಿಲ್ಲೆ ತೀವ್ರಗೊಂಡ ಮಳೆ: ಜನಜೀವನ ಅಸ್ತವ್ಯಸ್ತ

ದಕ್ಷಿಣ ಕನ್ನಡ ಜಿಲ್ಲೆ ತೀವ್ರಗೊಂಡ ಮಳೆ: ಜನಜೀವನ ಅಸ್ತವ್ಯಸ್ತ


ಮಂಗಳೂರು: ರೆಡ್ ಆಲರ್ಟ್ ಎಚ್ಚರಿಕೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ತೀವ್ರ ಮಳೆಯಾಗಿದೆ.  ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಭೂ ಕುಸಿತ, ಮರಗಳು ಉರುಳಿರುವ ಘಟನೆಗಳು ನಡೆದಿದೆ.

ಬಂಟ್ವಾಳ ತಾಲೂಕು ವಿಟ್ಲ ಕೇಪು ಗ್ರಾಮದ ಅಡ್ಯನಡ್ಕ, ಸಾರಡ್ಕ, ಕೊಲ್ಲಪದವು, ನೆಕ್ಕರೆ, ಕೋಡಂದೂರು, ಕೇಪು ಪದವು ರಸ್ತೆಯ 1 ಟ್ರಾನ್ಸ್ ಫಾರ್ಮರ್, 6 ಕಂಬ ಉರುಳಿ ಬಿದ್ದಿದೆ. ಸುಮಾರು 500 ಮೀಟರ್ ದೂರದವರೆಗೆ ಈ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಪಂಚಾಯತ್‌ನ ಸಾರ್ವಜನಿಕ ಕುಡಿಯುವ ನೀರಿನ ಯೋಜನೆಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಿದ್ದಿರುವ ಪರಿಣಾಮ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ.

ಮಂಗಳೂರಿಗೆ ಹೊರವಲಯದ ನಗರದ ಹೊರವಲಯದ ಬಜಪೆ ಸಮೀಪದ ಅದ್ಯಪಾಡಿಯ ಸಂಕೇಶ ಎಂಬಲ್ಲಿ ಮಳೆಗೆ ಭೂಕುಸಿತ ಉಂಟಾಗಿದೆ. ಮಂಗಳೂರು ವಿಮಾನ ನಿಲ್ಡಾಣದ ಭಾಗದಿಂದ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿದ್ದು ಗುಡ್ಡದ ಕೆಳಭಾಗದ ಉಮಾನಾಥ ಸಾಲ್ಯಾನ್ ಎಂಬವರ ಮನೆಗೆ ಹಾನಿಯಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಕೆಸರು ನೀರು ತುಂಬಿಕೊಂಡಿದೆ.

ನಗರದಲ್ಲಿ ಮುಂದುವರಿದ ಮಳೆಯ ಅರ್ಭಟಕ್ಕೆ ಜನರು ಹೈರಾಣಾಗಿದ್ದಾರೆ. ಒಂದೆಡೆ ಧಾರಾಕಾರವಾಗಿ ವರ್ಷಧಾರೆ ಇಳೆಗೆ ಹರಿಯುತ್ತಿದ್ದರೆ, ಮತ್ತೊಂದೆಡೆ ನಗರದ ಲಾಲ್ ಭಾಗ್‌ನಲ್ಲಿ ಪಬ್ಬಾಸ್ ಮುಂದುಗಡೆ ರಸ್ತೆ ಮೇಲೆ ಮರ ಉರುಳಿ ಬಿದ್ದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ ರಾತ್ರಿಯಿಂದಲೇ ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಉಳ್ಳಾಲ ಸೇರಿದಂತೆ ಹಲವು ಕಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಮೀನುಗಾರರಿಗೆ ಕಡಲಗಿಳಿಯದಂತೆ ಸೂಚಿಸಲಾಗಿದೆ. 

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ  ಜಿಲ್ಲೆಯಾದ್ಯಂತ ಮೇ 22 ರವರೆಗೆ ವ್ಯಾಪಕ ಮಳೆಯಾಗಲಿದ್ದು, ಆರೆಂಜ್ ಮತ್ತು ರೆಡ್ ಅಲರ್ಟ್ ಮುನ್ಷೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article