ಮಳೆಗಾಲಕ್ಕೆ ಸಿದ್ದಗೊಂಡಿವೆ ಗಿಡಗಳು: ಬನ್ನಿ ಗಿಡ ನೆಟ್ಟು ಸಂಭ್ರಮಿಸೋಣ

ಮಳೆಗಾಲಕ್ಕೆ ಸಿದ್ದಗೊಂಡಿವೆ ಗಿಡಗಳು: ಬನ್ನಿ ಗಿಡ ನೆಟ್ಟು ಸಂಭ್ರಮಿಸೋಣ


ಪುತ್ತೂರು: ವರ್ಷಂಪ್ರತಿ ಮಳೆಗಾಲದ ಆರಂಭದಲ್ಲಿ ನಮ್ಮ ಮನೆ, ಹೊಲ, ತೋಟಗಳ ಆವರಣದ ಬಳಿಯಲ್ಲಿ ನಾನಾ ವಿಧದ ಗಿಡಗಳನ್ನು ನೆಟ್ಟು ಸಂಭ್ರಮಿಸಲು ಇದು ಸಕಾಲ. ಪುತ್ತೂರು ವಲಯ ಅರಣ್ಯ ಅಧಿಕಾರಿಯವರ ವ್ಯಾಪ್ತಿಯಲ್ಲಿ ನಾನಾ ಪ್ರಭೇದಗಳ ಗಿಡಗಳು ಜಾಲ್ಸೂರು ಬಳಿ ಕನಕಮಜಲು ‘ಪಂಜಿಕಲ್ಲು ಅರಣ್ಯ ಸಸ್ಯಪಾಲನಾ ಕ್ಷೇತ್ರ’ದಲ್ಲಿ ಬೆಳೆಸಲಾಗಿದೆ. 

ಸಾರ್ವಜನಿಕರಿಗೆ ಕನಿಷ್ಠ ಬೆಲೆಯಲ್ಲಿ ಲಭ್ಯವಿದ್ದು, ಕೃಷಿ ಅರಣ್ಯ ಯೋಜನೆಯಡಿಯಲ್ಲಿ ಕೃಷಿಕರು ಗಿಡ ನೆಟ್ಟು ಪೋಷಿಸಲು 3 ವರ್ಷಗಳ ಅವಧಿಯಲ್ಲಿ ಸಹಾಯಧನ(ಪ್ರೋತ್ಸಾಹಧನ) ನೀಡಲಾಗುತ್ತದೆ. 35 ವಿವಿಧ ಪ್ರಭೇದಗಳ ಗಿಡಗಳನ್ನು ಬೆಳೆಸಲಾಗಿದ್ದು ಹಣ್ಣು ನೀಡುವ, ಆದಾಯ ನೀಡುವ ಗಿಡಗಳನ್ನು ಕೃಷಿಕರು, ಸಾರ್ವಜನಿಕರು ಪಡೆಯಬಹುದಾಗಿದೆ ಎನ್ನುತ್ತಾರೆ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ.


ಸ್ಥಳೀಯ ಮಣ್ಣಿನ ಸಾರಕ್ಕನುಗುಣವಾಗಿ ಹೊಂದಿಕೊಳ್ಳುವ ಮತ್ತು ಬಹುಪಯೋಗಿ ಮರಗಳಾಗುವಂತೆ ಬೇರೆ ಬೇರೆ ಗಿಡಗಳನ್ನು ಬೆಳೆಸಲಾಗಿದೆ ಎಂದು ವಿವರಿದರು.

ನೆಲ್ಲಿ, ನೇರಳೆ, ಪುನರ್‌ಪುಳಿ(ಕೊಕಂ), ರಾಂಬುಟಾನ್, ಮಾವು, ಜಂಬುನೇರಳೆ, ಹಲಸು, ಹೆಬ್ಬಲಸು ಗಿಡಗಳು ಹಣ್ಣು ನೀಡುತ್ತವೆ. 9 ಗ್ರಾಮ ಅರಣ್ಯ ಸಮಿತಿಗಳ ವ್ಯಾಪ್ತಿಯಲ್ಲಿ ಸದಸ್ಯರು ಬಂಜರು ಭೂಮಿಯಲ್ಲಿ, ರಸ್ತೆ ಬದಿಯಲ್ಲಿ ಹಾಗೂ ಶಾಲಾ ವಠಾರದಲ್ಲಿ ನೆಟ್ಟು ಪೋಷಿಸಲು ಯೋಜನೆಯಿದೆ. ಸಾರ್ವಜನಿಕರ ಸಹಭಾಗಿತ್ವ ಮತ್ತು ಸಹಕಾರವು ಸದಾ ಸ್ವಾಗತಿಸುತ್ತೇವೆ ಮತ್ತು ಬೇಡಿಕೆಗೆ ತಕ್ಕಂತೆ ಗಿಡಗಳನ್ನು ಪೂರೈಸಲಾಗುವುದೆಂದು ಎಂದು ವಲಯ ಅರಣ್ಯ ಅಧಿಕಾರಿ ಬಿ.ಎಂ. ಕಿರಣ್ ತಿಳಿಸಿದ್ದಾರೆ.

ಅರಣ್ಯ ಪುನಶ್ಚೇತನ ಯೋಜನೆಯನ್ವಯ ಪುತ್ತೂರು ವಲಯಾರಣ್ಯ ವ್ಯಾಪ್ತಿಯ ವಿವಿದೆಡೆ ೬೬ ಸಾವಿರಕ್ಕೂ ಹೆಚ್ಚು ಬೇರೆಬೇರೆ ಪ್ರಭೇದಗಳ ಗಿಡಗಳನ್ನು ನೆಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋಣಿ ಮರಿಯಪ್ಪ ತಿಳಿಸಿದರು.

ಕರಾವಳಿ ಗಿಡಗಳು:

ಆಲ, ಕಾಯಿಧೂಪ, ರಾಂಪತ್ರೆ, ಹಾಲ್ಮಡ್ಡಿ, ಸಾಗುವಾನಿ, ಮಹಾಗನಿ, ರಕ್ತಚಂದನ, ಬೇಂಗ, ಬೊಳ್ಪಾಲೆ, ಹಿಪ್ಪೆ, ಬೀಟೆ, ಬಿಲ್ವ, ಸೀತಾಅಶೋಕ, ಶಿವಾನೆ, ಮಂಜೊಟ್ಟಿ, ಮೈರೋಳ್, ಅರಳಿ(ಅಶ್ವತ್ಥ) ಅಬ್ಳುಕ, ಬೆತ್ತ, ಚೇರ, ಕೋಳಿಜುಟ್ಟು, ಕುಳಿರ್‌ಮಾವು, ರೆಂಜ, ಅರ್ತಿ ಗಿಡಗಳು ಭಿನ್ನಭಿನ್ನ ಚೀಲಗಳಲ್ಲಿ ಬೆಳೆದಿದೆ. 92,120 ಗಿಡಗಳಿದ್ದು, ಸಾರ್ವಜನಿಕರಿಗಾಗಿ 10,874 ಗಿಡಗಳನ್ನು ನೀಡಲಾಗುವುದು. ಸ್ವಯಂಸೇವಾ ಸಂಘಗಳ ಸದಸ್ಯರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು, ದೇವಾಲಯ-ಮಸೀದಿ-ಇಗರ್ಜಿ-ಪ್ರಾರ್ಥನಾ ಮಂದಿರ, ದೈವಾಲಯಗಳ ಆಡಳಿತ ಮಂಡಳಿಯ ಸದಸ್ಯರು ಗಿಡಗಳನ್ನು ನೆಟ್ಟು ಪ್ರಕೃತಿಯ ಜೀಣೋದ್ಧಾರ ಸತ್ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಉಪವಲಯಾರಣ್ಯ ಅಧಿಕಾರಿ ರಂಜಿತಾ ಹಾಗೂ ಪಂಜಿಕಲ್ಲು ಸಸ್ಯಪಾಲನಾ ಕ್ಷೇತ್ರದ ನಿರ್ವಾಹಕ ಅಣ್ಣು ನಾಯ್ಕ ಅವರು ಗಿಡಗಳ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಲಿದ್ದಾರೆ.

ಹೆಚ್ಚಿನ ವಿವರ ಮತ್ತು ಗಿಡಗಳಿಗಾಗಿ ವಲಯ ಅರಣ್ಯ ಅಧಿಕಾರಿ ಬಿ.ಎಂ. ಕಿರಣ್ ಮೊ: 9980808650 ಅವರನ್ನು ಸಂಪರ್ಕಿಸಬಹುದಾಗಿದೆ.

ಸೇಡಿಯಾಪು ಜನಾರ್ಧನ ಭಟ್ಟರ ಸಲಹೆ:

ಔಷಧೀಯ ಗುಣಧರ್ಮವುಳ್ಳ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ನೆಟ್ಟು ಪೋಷಿಸಬೇಕು. ಕಾಡು ಹಣ್ಣುಗಳನ್ನು ನೀಡುವ ಅಬ್ಳುಕ, ನೇರಳೆ, ಆಲ(ಗೋಳಿ), ಹೆಬ್ಬಲಸು, ಕಾಡು ಮಾವು, ಹಲಸು, ನೆಲ್ಲಿ, ಅತ್ತಿ, ಜಂಬುನೇರಳೆ ಮುಂತಾದ ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ಯಥೇಚ್ಛ ನೆಡುವ ಮೂಲಕ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸಲು ಸಾಧ್ಯ ಎಂದು ಹಿರಿಯ ಪ್ರಗತಿಪರ ಕೃಷಿಕರಾಗಿರುವ ಸೇಡಿಯಾಪು ಜನಾರ್ಧನ ಭಟ್ಟರವರು ‘ಗಿಡ ನೆಡುವವರು, ಅರಣ್ಯ ಇಲಾಖೆಯ ಅಧಿಕಾರಿಯವರು’ ವಿಶೇಷ ಕಾಳಜಿವಹಿಸಬೇಕೆಂದು ಸಲಹೆ ನೀಡುತ್ತಾರೆ. ಅಕೇಶಿಯಾ ನೆಡುತೋಪುಗಳನ್ನು ಕಟ್ಟಾವು ಮಾಡಿ ಸ್ಥಳೀಯದಾಗಿ ಬೆಳೆಯುವ ಸಾಂಪ್ರದಾಯಿಕ ಗಿಡಗಳನ್ನು 3 ವರ್ಷಗಳ ಕಾಲ ಬೆಳೆಸಿ, ಪೋಷಿಸುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article