
ಅಬ್ದುಲ್ ರಹೀಂರ ಮೃತದೇಹ ಕೋಲ್ತಮಜಲುವಿಗೆ
Wednesday, May 28, 2025
ಉಳ್ಳಾಲ: ಬಂಟ್ವಾಳ ತಾಲೂಕಿನ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ದುಷ್ಕರ್ಮಿಗಳ ತಂಡದಿಂದ ಕೊಲೆಗೀಡಾದ ಕೊಲ್ತಮಜಲು ನಿವಾಸಿ ಅಬ್ದುಲ್ ರಹೀಂ ಅವರ ಮೃತದೇಹವನ್ನು ಕುತ್ತಾರ್ ಮದನಿ ನಗರ ಮಸೀದಿಯಿಂದ ಕೋಲ್ತಮಜಲುವಿಗೆ ಸಾಗಿಸಲಾಯಿತು.
ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯಲ್ಲಿ ಮೇ 27ರ ರಾತ್ರಿಯೇ ಮೃತ ರಹೀಂ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಇಂದು ಮುಂಜಾನೆ ಮದನಿನಗರದ ಸ್ಥಳೀಯ ಮಸೀದಿಯಲ್ಲಿ ಮಯ್ಯತ್ ಸ್ನಾನದ ಮೊದಲ ವಿಧಿ ವಿದಾನ ನೆರವೇರಿಸಿದ ಬಳಿಕ ಮೃತ ದೇಹವನ್ನು ಕುತ್ತಾರು, ತೊಕ್ಕೊಟ್ಟು, ಪಂಪ್ವೆಲ್ ಮಾರ್ಗವಾಗಿ ಸಾಗಿಸಿದರು.
ಇಂದು ಮುಂಜಾನೆ ಭಾರಿ ಸಂಖ್ಯೆಯಲ್ಲಿ ಮದನಿನಗರ ಮಸೀದಿ ಮುಂಭಾಗದಲ್ಲಿ ಜನ ಸೇರಿದ್ದರು. ದೂರದೂರಿನಿಂದ ರಹೀಂ ಅವರ ಕುಟುಂಬಸ್ಥರು, ಬಂಧು ಮಿತ್ರರು ಕೂಡ ಮದನಿ ನಗರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮದನಿ ನಗರ ಮಸೀದಿ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರಾವಲ್ ನೇತೃತ್ವದಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.