ಜಿಲ್ಲಾ ಬಂದ್‌ಗೆ ಪುತ್ತೂರಿನಾದ್ಯಂತ ಉತ್ತಮ ಬೆಂಬಲ: ಬಂದ್‌ಗೆ ಬಲವಂತ: ಮಾತಿನ ಚಕಮುಕಿ

ಜಿಲ್ಲಾ ಬಂದ್‌ಗೆ ಪುತ್ತೂರಿನಾದ್ಯಂತ ಉತ್ತಮ ಬೆಂಬಲ: ಬಂದ್‌ಗೆ ಬಲವಂತ: ಮಾತಿನ ಚಕಮುಕಿ


ಪುತ್ತೂರು: ಸುಹಾಸ್ ಶೆಟ್ಟಿ ಹತ್ಯೆ ವಿರೋಧಿಸಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಸಂಘಟನೆಗಳು ನೀಡಿದ್ದ ಜಿಲ್ಲಾ ಬಂದ್‌ಗೆ ಪುತ್ತೂರಿನಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಮುಂಜಾನೆಯಿಂದಲೇ ಪುತ್ತೂರು ಸೇರಿದಂತೆ ಉಪ್ಪಿನಂಗಡಿ, ಕಡಬ, ಆಲಂಕಾರು, ನೆಲ್ಯಾಡಿ ಪೇಟೆಗಳಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಪುತ್ತೂರು ನಗರದಲ್ಲಿ ಸಂಪೂರ್ಣ ಬಂದ್ ವಾತಾವರಣ ಕಂಡುಬಂದರೆ ಗ್ರಾಮಾಂತರ ಭಾಗಗಳಲ್ಲಿ ಭಾಗಶ: ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಬೆಳಗ್ಗಿನಿಂದಲೇ ವಾಹನಗಳ ಓಡಾಟ ಕಡಿಮೆಯಾಗಿತ್ತು. ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕ್, ಸೊಸೈಟಿ, ವಸ್ತ್ರಮಳಿಗೆಗಳು, ಜಿನಸು ಮಳಿಗೆಗಳು ಸೇರಿದಂತೆ ಖಾಸಗಿ ವ್ಯವಸ್ಥೆಗಳಿಗೆ ರಜೆ ನೀಡಲಾಗಿತ್ತು. ಪುತ್ತೂನಿಂದ ಮಂಗಳೂರು ಭಾಗಗಳಿಗೆ ತೆರಳುವ ಖಾಸಗಿ ಬಸ್ಸುಗಳು ಸಂಚರಿಸಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ಸುಗಳ ಸಂಚಾರವನ್ನೂ ನಿಲುಗಡೆಗೊಳಿಸಲಾಗಿತ್ತು. ಜನರ ಓಡಾಟವೂ ಕಡಿಮೆಯಾಗಿತ್ತು.

ತೆರೆದ ಕೆಲ ಅಂಗಡಿಗಳು: ಆಕ್ರೋಶ

ಬೆಳಗ್ಗೆ 10.30ರ ಸಮಯದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಕೆಲವು ಅಂಗಡಿಗಳು ಬಂದ್ ಮಾಡದೆ ವ್ಯಾಪಾರ ಮುಂದುವರೆಸಿದ್ದನು ಗಮನಿಸಿ ಅಂಗಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ನಡೆಯಿತು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ. ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ನಾವೂ ಸಿದ್ಧರಿದ್ದೇವೆ. ಬಂದ್ ಆಗಿದ್ದ ಅಂಗಡಿಗಳನ್ನು ಮತ್ತೆ ತೆರೆಯಲಾಗಿದೆ. ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದ್ದರೂ ಪುತ್ತೂರಿನ ನಿಲ್ದಾಣದ ಬಳಿ ಕೆಲವು ಅಂಗಡಿಗಳು ಬಂದ್ ಮಾಡದೇ ಇರುವುದು ಕಾನೂನಿನ ಸುವ್ಯವಸ್ಥೆ ಹದೆಗೆಟ್ಟಿರುವುದನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ಗೆ ಬಲವಂತ-ಮಾತಿನ ಚಕಮಕಿ:

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಬಂದ್ ಮಾಡದ ಅಂಗಡಿಗಳಿಗೆ ತೆರಳಿ ಎಚ್ಚರಿಕೆ ನೀಡಿ ಬಂದ್ ಮಾಡಿಸಲು ಮುಂದಾಗಿದ್ದು, ಪೊಲೀಸರು ಹಾಗೂ ಸಂಘಟನೆಯವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರಿಗೆ ಸಾಧ್ಯವಾಗದಿದ್ದರೆ ನಾವೇ ಬಂದ್ ಮಾಡಿಸುತ್ತೇವೆ ಎಂದು ಸಂಘಟನೆಯವರು ಎಚ್ಚರಿಕೆ ನೀಡಿದರು. ಬಳಿಕ ಪೊಲೀಸ್ ಉಪಸ್ಥಿತಿಯಲ್ಲಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿಸಿ ಸೇರಿದ್ದ ಜನರನ್ನು ಚದುರಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ಡಾ. ಕೃಷ್ಣಪ್ರಸನ್ನ, ಶ್ರೀಧರ್ ತೆಂಕಿಲ, ಸೀತಾರಾಮ ಶೆಟ್ಟಿ ಕೆದಂಬಾಡಿಗುತ್ತು, ದಿನೇಶ್ ಪಂಜಿಗ, ಮನೀಶ್ ಕುಲಾಲ್, ನಾಗೇಶ್ ಕೆಮ್ಮಾಯಿ, ಅನಿಲ್ ತೆಂಕಿಲ, ಪ್ರಶಾಂತ್ ಮಾರ್ತಾ, ಮಣಿಕಂಠ, ಸಂತೋಷ್ ರೈ ಕೈಕಾರ ಸೇರಿದಂತೆ ಹಲವಾರು ಕಾರ್ಯಕರ್ತರು ಸೇರಿದ್ದರು.

ಪುತ್ತೂರು ತಾಲೂಕಿನ ಗ್ರಾಮಾಂತರದ ಸೂಕ್ಷ್ಮ ಪ್ರದೇಶವಾದ ಈಶ್ವರಮಂಗಲದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಕುಂಬ್ರ, ಬೆಟ್ಟಂಪಾಡಿ, ಕೌಡಿಚ್ಚಾರು, ಸಂಪ್ಯ, ಕೆಯ್ಯೂರು ಮೊದಲಾದ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಬಂದ್ ಆಗಿದ್ದವು.

ಬಂದ್‌ಗೆ ಶುಕ್ರವಾರದ ‘ಲಾಭ’:

ಬಂದ್‌ಗೆ ಕರೆಕೊಟ್ಟ ದಿನ ಶುಕ್ರವಾರವಾಗಿದ್ದು, ಸಾಮಾನ್ಯವಾಗಿ ಶುಕ್ರವಾರದ ದಿನ ಬೆಳಿಗ್ಗೆ ಒಮ್ಮೆ ಮಾತ್ರ ಬಾಗಿಲು ತೆರೆಯುವ ಮುಸ್ಲಿಂ ಸಮುದಾಯ ಅಂಗಡಿಗಳು ಬಹುತೇಕ ಇಂದು ಮುಂಜಾನೆಯಿಂದಲೇ ಬಂದ್ ಆಗಿದ್ದವು. ಬಂದ್ ಕರೆಯ ಹಿನ್ನಲೆಯಲ್ಲಿ ಅವರು ತಮ್ಮ ಅಂಗಡಿಗಳ ಬಾಗಿಲನ್ನು ತೆರೆಯಲೇ ಇಲ್ಲ. ಆದರೆ ಪುತ್ತೂರಿನ ಬಸ್ ನಿಲ್ದಾಣ ಬಳಿಯ ಕೆಲವು ಅಂಗಡಿಗಳನ್ನು ಮಾತ್ರ ತೆರೆಯಲಾಗಿತ್ತು. ಇದು ಸ್ವಲ್ಪಮಟ್ಟಿನ ಆತಂಕಕ್ಕೂ ಕಾರಣವಾಯಿತು.  

ಪೊಲೀಸರ ಮೇಲೆ ಗರಂ:

ಸರ್ಕಾರಿ ಬಸ್ ನಿಲ್ದಾಣದ ಬಳಿ ಎರಡು ಸಮುದಾಯದವರು ಸೇರಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡ ಸಂದರ್ಭದಲ್ಲಿ ಸ್ಥಳಕ್ಕೆ ಬಂದಿದ್ದ ಕೆಎಸ್‌ಆರ್‌ಪಿ ಪೊಲೀಸರು ಬಸ್‌ನಲ್ಲಿಯೇ ಕುಳಿತುಕೊಂಡಿದ್ದರು. ಇದಕ್ಕೆ ಗರಂ ಆದ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ನೀವೇನು ಕತ್ತೆ ಕಾಯಲು ಬಂದವರಾ ಎಂದು ರೇಗಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article