ಬಿ.ಸಿ.ರೋಡು ಸಹಿತ ದಾರಿಯುದ್ದಕ್ಕೂ ಸುಹಾಸ್‌ನ ಅಂತಿಮದರ್ಶನ

ಬಿ.ಸಿ.ರೋಡು ಸಹಿತ ದಾರಿಯುದ್ದಕ್ಕೂ ಸುಹಾಸ್‌ನ ಅಂತಿಮದರ್ಶನ


ಬಂಟ್ವಾಳ: ಬಜಪೆಯ ಕಿನ್ನಿಪದವಿನಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳ ದಾಳಿಯಿಂದ ಹತ್ಯೆಗೊಳಗಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತಿಮಯಾತ್ರೆ ಮಂಗಳೂರಿನ ಆಸ್ಪತ್ರೆಯಿಂದ ಕಾರಿಂಜದಲ್ಲಿರುವ ಪುಳಿಮಜಲಿನಲ್ಲಿರುವ ಅವರ ನಿವಾಸಕ್ಕೆ ತೆರಳಿದ ಸಂದರ್ಭ, ಬಿ.ಸಿ.ರೋಡಿನಲ್ಲಿ ಅಪಾರ ಸಂಖ್ಯೆಯ ಹಿಂದೂ ಸಂಘಟನೆ ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿದರು.


ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸುಹಾಸ್ ಶೆಟ್ಟಿ ಅಮರ್ ರಹೇ ಎಂದು ಘೋಷಣೆ ಹಾಕಿದರು. ಬೆಳಗ್ಗಿನಿಂದಲೇ ಬಿ.ಸಿ.ರೋಡಿನಲ್ಲಿ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ಈ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತು ಏರ್ಪಡಿಸಲಾಗಿತ್ತು.


ಈ ಸಂದರ್ಭ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರೇ ಖುದ್ದು ಯಾವುದೇ ರೀತಿಯ ಅಡಚಣೆಯಾಗದಂತೆ ಸುಹಾಸ್ ಶೆಟ್ಟಿಯ ಪಾರ್ಥಿವ ಶರೀರದ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟರು.


ಮಂಗಳೂರಿನಿಂದ ಕಾರಿಂಜದ ಪುಳಿಮಜಲು ನಿವಾಸದವರೆಗೂ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ರಾಜ್ಯ ನಾಯಕ ವಿಕಾಸ್ ಪುತ್ತೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ಪ್ರಸಾದ್ ಕುಮಾರ್ ರೈ, ಸಂದೇಶ್ ಶೆಟ್ಟಿ ಅರೆಬೆಟ್ಟು, ತಿರುಲೇಶ್ ಬೆಳ್ಳೂರು, ಪ್ರಶಾಂತ್ ಕೆಂಪುಗುಡ್ಡೆ, ನರಸಿಂಹ ಮಾಣಿ ಸಹಿತ ಹಿಂದು ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.


ಬಿ.ಸಿ.ರೋಡು, ಬಂಟ್ವಾಳ ಬಂದ್:

ಸುಹಾಸ್ ಹತ್ಯೆಯ ಹುನ್ನಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲೆಯಲ್ಲಿ ಶುಕ್ರವಾರ ಬಂದ್‌ಗೆ ಕರೆನೀಡಿದ ಹಿನ್ನಲೆಯಲ್ಲಿ ಬಿ.ಸಿ.ರೋಡ್, ಬಂಟ್ವಾಳ, ಪುಂಜಾಲಕಟ್ಟೆ, ಕಾರಿಂಜ, ವಗ್ಗ, ಕಲ್ಲಡ್ಕ, ಸಿದ್ದಕಟ್ಟೆ, ವಾಮದಪದವು ಸಹಿತ ಪೇಟೆಯ ಎಲ್ಲಾ ಅಂಗಡಿ, ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದವು. ಹಾಲು, ಪತ್ರಿಕೆ, ಮೆಡಿಕಲ್, ಸರಕಾರಿ ಕಚೇರಿಗಳು ಹೊರತುಪಡಿಸಿದರೆ, ಯಾವುದೂ ಬಾಗಿಲು ತೆರೆದಿರಲಿಲ್ಲ. ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಈ ಹಿನ್ನೆಲೆಯಲ್ಲಿ ಪರದಾಟ ಅನುಭವಿಸಿದರು. ಗ್ರಾಮೀಣ ಭಾಗಗಳಿಗೆ ಹೋಗಲು ಬಸ್ಸುಗಳೂ ಇಲ್ಲದೆ ಸಂಕಷ್ಟ ಅನುಭವಿಸಿದ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ವಾಹನಗಳಲ್ಲಿ ಮನೆಗೆ ತೆರಳಲು ಅವಕಾಶ ಕಲ್ಪಿಸಿದರು.

ಬೆಳಗ್ಗಿನ ಕೆಲವು ಹೊತ್ತುಗಳ ಕಾಲ ಖಾಸಗಿ, ಸರಕಾರಿ ಬಸ್‌ಗಳು, ಆಟೋರಿಕ್ಷಾಗಳು ಸಂಚರಿಸಿದ್ದು, ಬಳಿಕ ಸ್ವಯಂಪ್ರೇರಿತವಾಗಿ ವಾಹನ ಓಡಾಟವನ್ನು ಸ್ಥಗಿತಗೊಳಿಸಿದರು. ಬಂಟ್ವಾಳ ತಾಲೂಕಿನಾದ್ಯಂತ ಬಂದ್ ಯಶಸ್ವಿಯಾಗಿ ನಡೆದಿದೆ.

ಸುಮಾರು 11 ಗಂಟೆ ವೇಳೆ ಬಿ.ಸಿ.ರೋಡ್ ಬಸ್ ನಿಲ್ದಾಣದ ಸಮೀಪ ಹಿಂದು ಸಂಘಟನೆಯ ಕಾರ್ಯಕರ್ತರು, ನಾಯಕರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸುಹಾಸ್ ಶೆಟ್ಟಿ ಅವರ ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಬೇಕು ಎಂದು ಸ್ಥಳದಲ್ಲಿದ್ದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು.

ಸದಾ ವಾಹನ, ಜನರಿಂದ ಬಿಝಿಯಾಗಿದ್ದ ಬಿ.ಸಿ.ರೋಡು ಬಸ್ ನಿಲ್ದಾಣ ಸಹಿತ ಎಲ್ಲೆಡೆ ಬಿಕೋ ಎನ್ನುತ್ತಿತ್ತು. ಎಲ್ಲಡೆ ಪೊಲೀಸರೇ ಕಾಣಿಸಿಕೊಳ್ಳುತ್ತಿದ್ದರು. ಸಂಜೆ 4 ಗಂಟೆಯ ಬಳಿಕ ಸರಕಾರಿ ಬಸ್ ಸಹಿತ ಕೆಲ ಖಾಸಗಿ ವಾಹನಗಳು, ಆಟೋರಿಕ್ಷಾ ಓಡಾಟ ಆರಂಭಿಸಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article