
ಬಿಳಿನೆಲೆ: ಕಾರಿಗೆ ಕಾರು ಢಿಕ್ಕಿ-ಒರ್ವ ಸಾವು
ಸುಬ್ರಹ್ಮಣ್ಯ: ಸ್ವಿಫ್ಟ್ ಕಾರಿಗೆ ಇನ್ನೋವಾ ಕಾರು ಢಿಕ್ಕಿಯಾದ ಪರಿಣಾಮ ಸ್ವಿಫ್ಟ್ ಕಾರಿನಲ್ಲಿದ್ದ ಒರ್ವ ಸಾವನ್ನಪ್ಪಿ, ಇಬ್ಬರು ಗಾಯಗೊಂಡ ಘಟನೆ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ-ಗೋಪಾಳಿ ಎಂಬಲ್ಲಿ ಮೇ 6ರಂದು ಸಂಭವಿಸಿದೆ.
ಬೆಂಗಳೂರು ರಾಮನಗರದ ಯಲ್ಲಿಗಯ್ಯ(73) ಮೃತರು.
ಯಲ್ಲಿಗಯ್ಯ ಅವರ ಮಗ, ಕಾರನ್ನು ಚಲಾಯಿಸುತ್ತಿದ್ದ ನವೀನ್ (29), ನವೀನ್ ತಾಯಿ ದೈಯಮ್ಮ (52) ಗಾಯಗೊಂಡವರು. ಮೇ ೬ರಂದು ಸಂಜೆ ಗೋಪಾಳಿ ಎಂಬಲ್ಲಿ ಇನ್ನೋವಾ ಕಾರನ್ನು ಅದರ ಚಾಲಕ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿ ಸುಬ್ರಹ್ಮಣ್ಯ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ಪಲ್ಟಿಯಾಗಿ ಇನ್ನೋವಾ ಕಾರಿನ ಹಿಂದಿನಿ೦ದ ಹೋಗುತ್ತಿದ್ದ ಕಾರಿಗೆ ಬಂದು ತಾಗಿದೆ.
ಸ್ವಿಫ್ಟ್ ಕಾರಿನಲ್ಲಿದ್ದವರು ಕುಕ್ಕೆ ದೇವಸ್ಥಾನಕ್ಕೆ ಬಂದು ಊರಿಗೆ ಹಿಂದಿರುಗುತ್ತಿದ್ದವರಾಗಿದ್ದು ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತಿಬ್ಬರನ್ನು ಕೂಡಲೇ ಆಂಬ್ಯುಲೆನ್ಸ್ನಲ್ಲಿ ಕಡಬ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯಲ್ಲಿ ತೀವ್ರಗಾಯಗೊಂಡಿದ್ದ ಯಲ್ಲಿಗಯ್ಯ ಅವರು ಚಿಕಿತ್ಸೆ ಫಲಿಸದೆ ರಾತ್ರಿ ಮೃತರಾಗಿದ್ದಾರೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.